Kannada News Photo gallery Uttara Kannada Padi Amavasya unique fair for giving alms to beggars in Gokarna Uttara Kannada news in kannada
ಉತ್ತರ ಕನ್ನಡ: ಪವಿತ್ರ ಪಡಿ ಅಮವಾಸ್ಯೆಯಂದು ಗೋಕರ್ಣದಲ್ಲಿ ಭಿಕ್ಷುಕರಿಗೆ ದಾನ ನೀಡುವ ವಿಶಿಷ್ಟ ಜಾತ್ರೆ!
ಅನಾದಿಕಾಲದಿಂದಲೂ ಪಡಿ ಅಮವಾಸ್ಯೆಯಂದು ವಿವಿದೆಡೆಯ ಭಿಕ್ಷುಕರು ಗೋಕರ್ಣಕ್ಕೆ ಬಂದು ದಾನ ಪಡೆಯುವುದು ವಾಡಿಕೆಯಾಗಿದೆ. ಭಕ್ತಾದಿಗಳು ಮುಷ್ಟಿಯಷ್ಟು ಚಿಲ್ಲರೆ ಹಾಕುವುದು ಜೊತೆಗೆ ಅಕ್ಕಿಯನ್ನು ಚೀಲದಲ್ಲಿ ತುಂಬಿ ಎಲ್ಲರಿಗೂ ಕುಳಿತಲ್ಲಿ ಹಾಕುತ್ತಾ ಅಲ್ಲಲ್ಲಿ ನೋಟುಗಳನ್ನು ನೀಡುತ್ತಾ ಪುನೀತರಾಗುತ್ತಾರೆ.
ಗೋಕರ್ಣ: ಪಡಿ ಅಮವಾಸ್ಯೆ ಎಂದೇ ಕರೆಯಲ್ಪಡುವ ಮಾಘ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಈ ಭಾಗದ ಸುತ್ತಮುತ್ತಲಿನ ಜನ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಅಕ್ಕಿ ವಿವಿಧ ಧಾನ್ಯ, ಬಟ್ಟೆ ಸೇರಿದಂತೆ ಮುಂತಾದ ವಸ್ತುಗಳನ್ನು ಪಡಿ (ದಾನ) ನೀಡಿದರು. ಅನಾದಿಕಾಲದಿಂದಲೂ ಈ ದಿನದಂದು ಹೊರ ಜಿಲ್ಲೆಯ ಮತ್ತು ಜಿಲ್ಲೆಯ ವಿವಿಧೆಡೆಯ ಭಿಕ್ಷುಕರು ಇಲ್ಲಿಗೆ ಬಂದು ಈ ದಾನ ಪಡೆಯುವುದು ವಾಡಿಕೆಯಾಗಿದ್ದು, ಅದರಂತೆ ಈ ಬಾರಿಯೂ ಆಗಮಿಸಿದರು.
1 / 6
ವಯಸ್ಸಿನ ಗಣನೆ ಲೆಕ್ಕ ಇಲ್ಲದೇ ಮಕ್ಕಳಿಂದ ಹಿಡಿದು ವೃದ್ಧರು ಸಹ ಮುಖ್ಯ ಸಮುದ್ರ ತೀರದ ರಸ್ತೆಯುದ್ದಕ್ಕೂ ಅಕ್ಕಪಕ್ಕಗಳಲ್ಲಿ ಕುಳಿತು ದಾನ ಯಾಚನೆಯಲ್ಲಿ ತೊಡಗಿದ್ದರು. ಭಕ್ತಾದಿಗಳು ಮುಷ್ಟಿಯಷ್ಟು ಚಿಲ್ಲರೆ ಹಾಕುವುದು ಜೊತೆಗೆ ಅಕ್ಕಿಯನ್ನು ಚೀಲದಲ್ಲಿ ತುಂಬಿ ಎಲ್ಲರಿಗೂ ಕುಳಿತಲ್ಲಿ ಹಾಕುತ್ತಾ ಅಲ್ಲಲ್ಲಿ ನೋಟುಗಳನ್ನು ನೀಡುತ್ತಾ ಪುನೀತರಾದರು.
2 / 6
ದಾನ ಪಡೆದವರು ಒಳ್ಳೆದಾಗಲಿ ಪುಣ್ಯ ಬರಲಿ ನಿಮ್ಮ ಕುಟುಂಬ ಬೆಳಗಲಿ ಇನ್ನಷ್ಟು ದಾನ ಮಾಡುವ ಶಕ್ತಿ ಭಗವಂತ ಕರುಣಿಸಲಿ ಅಂತ ಹಾರೈಸುತ್ತ ಅಣ್ಣಾ, ಅಕ್ಕಾ, ಅವ್ವಾ, ಇಲ್ಲಿ ಅನ್ನುವ ಕರೆ ಎಲ್ಲೆಡೆ ಕೇಳಿ ಬಂತು. ಇನ್ನು ಮಾರಿಯಮ್ಮ ತಂದವರು ಒಂದೆಡೆ ಕುಳಿತುಕೊಳ್ಳದೆ ಸಮುದ್ರ ತೀರದವರೆಗೂ ತಮ್ಮ ಶೈಲಿಯ ವಾದ್ಯ ಮೊಳಗಿಸಿ ಅಲ್ಲಿಯೂ ಕಾಣಿಕೆ ಪಡೆಯುವುದು ಕಂಡುಬಂತು
3 / 6
ಪವಿತ್ರ ಅಮಾವಾಸ್ಯೆ ಸಮುದ್ರ ಸ್ನಾನದ ಬಳಿಕ ಭಕ್ತರು ಮಧ್ಯಾಹ್ನ ಹೊತ್ತಿನವರೆಗೆ ದಾನ ಕಾರ್ಯ ನಡೆಸಿದರು. ಅಮಾವಾಸ್ಯೆ ಪೂಜೆಗೆ ದೇವಸ್ಥಾನದಲ್ಲಿ ಸಹ ಭಕ್ತರ ಸಾಲು ನೆರೆದಿತ್ತು. ಮಹಾಗಣಪತಿ, ಮಹಾಬಲೇಶ್ವರ ಮಂದಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು. ಕೋಟಿತೀರ್ಥ, ಸಮುದ್ರ ಸ್ನಾನ ಮಾಡಿ ದೇವಾಲಯದತ್ತ ಭಕ್ತರು ಆಗಮಿಸಿದ್ದರು.
4 / 6
ಮುಖ್ಯ ಕಡಲತೀರದಲ್ಲಿ ಪುರೋಹಿತರ ಮುಖೇನ ಕುಟುಂಬದಲ್ಲಿ ಮೃತರಾದ ಹಿರಿಯರಿಗೆ ಪಿಂಡಪ್ರದಾನ, ತಿಲತರ್ಪಣಗಳನ್ನು ನೀಡಿ ಹಿರಿಯರನ್ನು ಸ್ಮರಿಸಿ ಕುಟುಂಬದ ಒಳಿತಿಗೆ ಪ್ರಾರ್ಥಿಸಿದರು. ಇದರಂತೆ ಕೋಟಿತೀರ್ಥಕಟ್ಟೆ, ಪಿತೃಸ್ಥಾಲೇಶ್ವರದಲ್ಲಿ ಸಹ ಅಪರಕಾರ್ಯ ಜರುಗಿತು. ಜಿಲ್ಲೆಯ ವಿವಿದೆಡೆ ಮತ್ತು ಹೊರ ರಾಜ್ಯದಿಂದ ಬಂದ ಶ್ರದ್ದಾಳುಗಳು ಅಪರಕಾರ್ಯ ನೆರವೇರಿಸಿದರು.
5 / 6
ಜಾತ್ರೆ ವೇಳೆ ಭಿಕ್ಷೆ ಪಡೆಯಲು ಬರುವ ಕೊಪ್ಪಳ, ಶಿವಮೊಗ್ಗ, ಸಾಗರ, ಬನವಾಸಿ, ಸಿರ್ಸಿ ಕಡೆಯಿಂದ ಬರುವ ಹಲವು ಅಲೆಮಾರಿ ಜನಾಂಗದವರು ಪ್ರತಿ ವರ್ಷ ನಾವು ಈ ಗೋಕರ್ಣದೀಶನ ದರ್ಶನಕ್ಕೆ ಮತ್ತು ನಮ್ಮ ಸಂಪ್ರದಾಯವನ್ನ ಪೂರ್ಣಗೊಳಿಸಲು ಬರುತ್ತೇವೆ ಎನ್ನುತ್ತಾರೆ. ಇನ್ನು ಇಲ್ಲಿ ಬಂದ ಸಾಕಷ್ಟು ಜನರು ಭಿಕ್ಷಾಟನೆ ನಮ್ಮ ಜೀವನವಲ್ಲ ನಾವು ಬೇರೆ ಬೇರೆ ಕೆಲಸಗಳನ್ನ ಮಾಡುತ್ತೇವೆ, ಇದು ನಮ್ಮ ಸಂಪ್ರದಾಯ ಎನ್ನುತ್ತಾರೆ. (ವರದಿ: ವಿನಾಯಕ್ ಬಡಿಗೇರ್, ಟಿವಿ9 ಉತ್ತರ ಕನ್ನಡ)