
ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಿಸಲಾಗಿದೆ. ನೂತನ ಜಿಲ್ಲೆ ವಿಜಯನಗರವನ್ನು ಇಂದು ಉದ್ಘಾಟನೆ ಮಾಡಲಾಗಿದೆ. ಆರು ತಾಲೂಕುಗಳನ್ನೊಳಗೊಂಡ ನೂತನ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು, ಶಾಸಕರು, ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ವಿಜಯನಗರ ಜಿಲ್ಲಾ ಉದ್ಘಾಟನೆ ಸಮಾರಂಭದಲ್ಲಿ ನಾಯಕರ ನಡಿಗೆ

ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೊದಲು ಬಳ್ಳಾರಿಗೆ ಸೇರಿದ್ದ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ವಿಜಯನಗರ ನೂತನ ಜಿಲ್ಲೆಯಲ್ಲಿ ಇರಲಿವೆ.

ಬಳ್ಳಾರಿ ಜಿಲ್ಲೆಯಿಂದ ವಿಭಜನೆ ಮಾಡಿ ವಿಜಯನಗರ ಎಂಬ ಪ್ರತ್ಯೇಕ ಜಿಲ್ಲೆಯನ್ನು ರಚಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಜಿಲ್ಲೆಯನ್ನಾಗಿ ವಿಜಯನಗರವನ್ನು ಘೋಷಿಸಿ ಆದೇಶ ಹೊರಡಿಸಿತ್ತು. ಗಾಂಧಿ ಜಯಂತಿಯ ದಿನವಾದ ಇಂದು ವಿಜಯನಗರ ನೂತನ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರದಿಂದ ವಿಜಯನಗರ ಜಿಲ್ಲೆಗೆ ಹೊಸ ಸಿಇಓ ಆಗಿ ಕೆ.ಎಂ. ಗಾಯತ್ರಿ ಅವರನ್ನು ನೇಮಕ ಮಾಡಲಾಗಿದೆ.ಕೆ.ಎಂ. ಗಾಯತ್ರಿ ಅವರು ಈ ಹಿಂದೆ ಮೈಸೂರಿನ ANSSIRD ನಿರ್ದೇಶಕರಾಗಿದ್ದರು. ಹಾಗೇ, ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ಅವರನ್ನು ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಮತ್ತು ಎಸ್ಪಿಯಾಗಿ ಡಾ. ಅರುಣ್. ಕೆ ಅವರನ್ನು ನೇಮಕ ಮಾಡಲಾಗಿದೆ.

ಸಚಿವ ಆನಂದ್ ಸಿಂಗ್ ಸಂಭ್ರಮ ಪಡುವ ಘಳಿಗೆ ಇದು. ವಿಜಯನಗರ ನೂತನ ಜಿಲ್ಲೆ ಮಾಡುವ ಮೂಲಕ ಸಚಿವ ಆನಂದ್ ಸಿಂಗ್ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಸಿಂಗ್ ನೂತನ ಜಿಲ್ಲೆಗೆ ರಾಜಕೀಯ ಜೀವನ ಮುಡಿಪಾಗಿಟ್ಟರು. ನೂತನ ಜಿಲ್ಲೆಯ ರಚನೆಗೆ ಕಾರಣರಾದ ಸಿಂಗ್ಗೆ ಅಭಿನಂದನೆ ಎಂದು ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ವಿಜಯನಗರದ ಗತವೈಭವ ಮರು ಸ್ಥಾಪನೆಯಾಗಿದೆ. ನೂತನ ಜಿಲ್ಲೆ 6 ತಾಲೂಕುಗಳಲ್ಲಿ ಎಲ್ಲ ಸೌಲಭ್ಯ ಒದಗಿಸ್ತೇವೆ. ಜಿಲ್ಲೆಯ ಕಟ್ಟಕಡೆಯ ಹಳ್ಳಿಗೂ ಸೌಲಭ್ಯಗಳನ್ನ ಒದಗಿಸುತ್ತೇವೆ. ಟೂರಿಸಂನಲ್ಲಿ ವಿಜಯನಗರ ಜಿಲ್ಲೆಯನ್ನ ಅಭಿವೃದ್ಧಿ ಮಾಡ್ತೇವೆ. ನೂತನ ಜಿಲ್ಲೆಗೆ ಎಲ್ಲಾ ರೀತಿಯ ಹಣಕಾಸಿನ ನೆರವು ನೀಡ್ತೇವೆ. ವಿಜಯನಗರ ನೂತನ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭ ಆಗಲಿದೆ. ಜಿಲ್ಲೆಯಲ್ಲಿ ಹೆಲಿ ಟೂರಿಸಂಗೆ ಅವಕಾಶ ಮಾಡಿ ಕೊಡುತ್ತೇವೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಇದು ಹೆಬ್ಬಾಗಿಲು ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಕೊಡುಗೆಯಿಂದ ವಿಜಯನಗರ ಜಿಲ್ಲೆ ರಚನೆ ಆಗಿದೆ. ಜಿಲ್ಲೆಯ ಜನರ ಪರವಾಗಿ ಯಡಿಯೂರಪ್ಪ ಪಾದಕ್ಕೆ ನನ್ನ ನಮನಗಳು. ವಿಜಯನಗರ ಜಿಲ್ಲೆ ಮಾಡಲು ರಾಮುಲು ಸಹಕಾರ ಸಿಕ್ಕಿದೆ. ವೈಯುಕ್ತಿಕವಾಗಿ ಹಠ ಹಿಡಿಯಲ್ಲ, ಜನರಿಗಾಗಿ ಹಠ ಹಿಡೀತೇನೆ ಎಂದು ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್ ಮಾತನಾಡಿದ್ದಾರೆ.
Published On - 9:12 pm, Sat, 2 October 21