Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿಯವರೇ, ನಿಮ್ಮ ಯಾವ ಷಡ್ಯಂತ್ರಗಳೂ ಫಲ ಕೊಡುವುದಿಲ್ಲ: ಕಾಂಗ್ರೆಸ್

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟೀಕೆಗಳನ್ನು ಮುಂದುವರಿಸಿದೆ. ಜಾತ್ಯಾತೀತ ಸಿದ್ಧಾಂತಕ್ಕೆ ಬೆಂಕಿ ಇಟ್ಟಾದರೂ ಸರಿ, ಅಲ್ಪಸಂಖ್ಯಾತ ಮತದಾರರಿಗೆ ದ್ರೋಹ ಬಗೆದಾದರೂ ಸರಿ ಎಂದು ಬಿಜೆಪಿ ಜೊತೆ ಸಖ್ಯ ಬೆಳೆಸಿ ಡಿಕೆ ಶಿವಕುಮಾರ್ ವಿರುದ್ಧ ಷಡ್ಯಂತ್ರ ರೂಪಿಸಲು ತಯಾರಾಗಿದ್ದಾರೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.

ಕುಮಾರಸ್ವಾಮಿಯವರೇ, ನಿಮ್ಮ ಯಾವ ಷಡ್ಯಂತ್ರಗಳೂ ಫಲ ಕೊಡುವುದಿಲ್ಲ: ಕಾಂಗ್ರೆಸ್
ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಕಾಂಗ್ರೆಸ್
Follow us
ಪ್ರಸನ್ನ ಗಾಂವ್ಕರ್​
| Updated By: Rakesh Nayak Manchi

Updated on: Oct 10, 2023 | 9:34 PM

ಬೆಂಗಳೂರು, ಅ.10: ಕುಮಾರಸ್ವಾಮಿಯವರೇ, ನಿಮ್ಮ ಯಾವ ಷಡ್ಯಂತ್ರಗಳೂ ಫಲ ಕೊಡುವುದಿಲ್ಲ. ಬದಲಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಕಾಲ ಬುಡದಲ್ಲಿ ನೈವೇದ್ಯಕ್ಕೆ ಇಟ್ಟು ನೀವು ಹಾಗೂ ನಿಮ್ಮ ಫ್ಯಾಮಿಲಿ ಬಿಜೆಪಿಯ ಜೀತ ಮಾಡಿಕೊಂಡಿರುವ ಕಾಲ ಶೀಘ್ರದಲ್ಲಿ ಬರಲಿದೆ ಎಂದು ರಾಜ್ಯ ಕಾಂಗ್ರೆಸ್ (Congress) ಘಟಕ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (H.D.Kumaraswamy) ವಿರುದ್ಧ ವಾಗ್ದಾಳಿ ನಡೆಸಿದೆ.

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟೀಕೆಗಳನ್ನು ಮುಂದುವರಿಸಿದೆ. “ಕುಮಾರಸ್ವಾಮಿ ಅವರೇ, ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ, ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ ಕೆ ಶಿವಕುಮಾರ್ ಅವರು ಮೈತ್ರಿ ಸರ್ಕಾರ ಬೀಳಿಸಿದರು ಎನ್ನುತ್ತಿದ್ದೀರಿ. ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ” ಎಂದಿದೆ.

ಅಂದು ಶಾಸಕರನ್ನು ಅಪಹರಿಸಿ ಸ್ಪೆಷಲ್ ಫ್ಲೈಟ್ ಹತ್ತಿಸಿ ಕಳಿಸಿದವರೊಂದಿಗೆ ಇಂದು ಕುಳಿತು ನಾಲಿಗೆ ಹೊರಳಿಸುತ್ತಿರುವ ನಿಮಗೆ ಕನಿಷ್ಠ ಲಜ್ಜೆ ಎಂಬುದಿಲ್ಲದಾಗಿದ್ದು ದುರಂತ. ಕುಮಾರಸ್ವಾಮಿ ಅವರಿಗೆ ಒಕ್ಕಲಿಗ ಸಮುದಾಯ ಡಿ.ಕೆ‌ ಶಿವಕುಮಾರ್ ಅವರ ಬೆನ್ನಿಗೆ ನಿಂತಿರುವುದನ್ನು ಸಹಿಸಲಾಗುತ್ತಿಲ್ಲ. ಜಾತ್ಯಾತೀತ ಸಿದ್ಧಾಂತಕ್ಕೆ ಬೆಂಕಿ ಇಟ್ಟಾದರೂ ಸರಿ, ಅಲ್ಪಸಂಖ್ಯಾತ ಮತದಾರರಿಗೆ ದ್ರೋಹ ಬಗೆದಾದರೂ ಸರಿ ಎಂದು ಬಿಜೆಪಿ ಜೊತೆ ಸಖ್ಯ ಬೆಳೆಸಿ ಡಿ ಕೆ ಶಿವಕುಮಾರ್ ಅವರ ಷಡ್ಯಂತ್ರ ರೂಪಿಸಲು ತಯಾರಾಗಿದ್ದಾರೆ ಎಂದಿದೆ.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಅಭಿಪ್ರಾಯವನ್ನೂ ಕೇಳದೆ, ಜೆಡಿಎಸ್ ಶಾಸಕರ, ನಾಯಕರಲ್ಲಿ ಚರ್ಚೆಯನ್ನೂ ಮಾಡದೆ ಏಕಾಏಕಿ ಜಾತ್ಯತೀತತೆಯನ್ನು ತೊರೆದು ಕೋಮುವಾದಿಗಳ ಜೊತೆ ಕೂಡಿಕೆ ಮಾಡಿಕೊಂಡಿರುವ ಕುಮಾರಸ್ವಾಮಿ ಅವರೇ, ಅಮಿತ್ ಶಾ ನಿಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹಾಕಿರುವ ಷರತ್ತುಗಳೇನು? ತಿಹಾರ್ ಜೈಲಿನ ಪ್ರಸ್ತಾಪದ ಹಿಂದಿರುವ ಷಡ್ಯಂತ್ರವೇನು? ಡಿ.ಕೆ ಶಿವಕುಮಾರ್ ಅವರ ಟೀಕೆಯ ಹಿಂದಿರುವುದು ಅವರ ಮೇಲಿನ ಭಯವೇ ಅಥವಾ ಬಿಜೆಪಿ ಒತ್ತಡವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ, ಆ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿ ನಿರ್ಧಾರಕ್ಕೆ ಬಂದಿದ್ದೇವೆ ಎಂದ ಹೆಚ್.ಡಿ. ದೇವೇಗೌಡ

ಡಿಕೆ ಶಿವಕುಮಾರ್ ಅವರ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಅವರೇ, ಈಗ ಆಡುತ್ತಿರುವ ಮಾತುಗಳು ನಾಲ್ಕು ವರ್ಷಗಳ ಹಿಂದೆ ತಮಗೆ ನೆನಪಿರಲಿಲ್ಲವೇ? ಸಿಎಂ ಕುರ್ಚಿ ಬೇಕಿದ್ದಾಗ ಡಿಕೆ ಶಿವಕುಮಾರ್ ಒಳ್ಳೆಯವರು, ಬಿಜೆಪಿ ಜೊತೆ ಸೇರಿದಾಗ ಏಕಾಏಕಿ ಡಿಕೆ ಶಿವಕುಮಾರ್ ಕೆಟ್ಟವರಾಗಿಬಿಟ್ಟರೇ? ಎಂದು ಪ್ರಶ್ನಿಸಿದೆ.

ಅಂದು ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಅವರ ಕೈ ಹಿಡಿದು ಪೋಸ್ ಕೊಟ್ಟಾಗ ತಾವು ಈಗ ಆಡುತ್ತಿರುವ ಮಾತುಗಳು ನೆನಪಿರಲಿಲ್ಲವೇ? ಕುಮಾರಸ್ವಾಮಿಯವರ ಕಣ್ಣುಗಳೇನೋ ಚುನಾವಣೆ ಸಂದರ್ಭದಲ್ಲಿ ನೀರು ಸುರಿಸುತ್ತವೆ ಎಂಬುದು ಜಗತ್ತಿಗೆ ತಿಳಿದ ಸಂಗತಿ. ಆದರೆ ಅವರ ನಾಲಿಗೆ ಯಾವ ಯಾವ ಕಾಲದಲ್ಲಿ ಹೇಗೆ ಹೊರಳುತ್ತದೆ ಎಂಬುದು ಪಿಹೆಚ್​ಡಿ ಮಾಡಬಹುದಾದ ವಿಷಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕುಮಾರಸ್ವಾಮಿಯವರೇ, ನಿಮ್ಮ ಪಕ್ಷದಲ್ಲಿ ನಿಮ್ಮ ಕುಟುಂಬವಲ್ಲದೆ ಬೇರೆ ಇನ್ಯಾರಿಗಾದರೂ ಉಸಿರಾಡಲು ಬಿಟ್ಟಿದ್ದೀರಾ? ಸಿದ್ದರಾಮಯ್ಯನವರಿಗೆ ದ್ರೋಹ ಎಸಗಿದಿರಿ, ಹೆಚ್ ವಿಶ್ವನಾಥ್ ಅವರಿಗೆ ದ್ರೋಹ ಮಾಡಿದಿರಿ, ಈಗ ಸಿ.ಎಂ. ಇಬ್ರಾಹಿಂ ಅವರನ್ನು ಮೂಲೆಗುಂಪು ಮಾಡಿದಿರಿ, ಬೆಂಬಲಿಸಿದ ಜಾತ್ಯತೀತ ಸಿದ್ಧಾಂತದ ಮತದಾರರು ಹಾಗೂ ಅಲ್ಪಸಂಖ್ಯಾತರಿಗೆ ವಂಚಿಸಿದಿರಿ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಹಿಂದೆ ನಿಮ್ಮನ್ನು ಹಾಗೂ ನಿಮ್ಮ ಪಕ್ಷವನ್ನು ಬೆಳೆಸಿದ ಯಾರ ಬಗ್ಗೆಯೂ ನಿಮ್ಮಲ್ಲಿ ಕೃತಜ್ಞತೆಯಾಗಲಿ, ಉಪಕಾರ ಸ್ಮರಣೆಯಾಗಲಿ ಇಲ್ಲ. ನಿಮ್ಮ ಕೈಗೆ ಅಧಿಕಾರ ಕೊಟ್ಟವರ ಬಗ್ಗೆ ಕನಿಷ್ಠ ಗೌರವವೂ ಇಲ್ಲ. ಕುಮಾರಸ್ವಾಮಿ ಎಂದರೆ ಅವಕಾಶವಾದಿ, ಗೋಸುಂಬೆ ಬುದ್ಧಿಯ ರಾಜಕಾರಿಣಿ ಎಂದು ರಾಜ್ಯದ ಜನತೆಗೆ ಅರಿವಾಗಿದೆ ಎಂದು ಟ್ವೀಟ್​ ಮಾಡಿದೆ.

ಕುಮಾರಸ್ವಾಮಿ ಅವರೇ, ಡಿಕೆ ಶಿವಕುಮಾರ್ ಅವರು ನಿಮ್ಮನ್ನು ಬೆಂಬಲಿಸಿ ಸಿಎಂ ಕುರ್ಚಿಯ ಮೇಲೆ ಕೂರಿಸಿದ್ದಾಗ ಯಡಿಯೂರಪ್ಪ ಅವರು ಒಂದು ಮಾತು ಹೇಳಿದ್ದರು. “ಕುಮಾರಸ್ವಾಮಿಯನ್ನು ನಂಬಬೇಡ ಶಿವಕುಮಾರ್, ಅವರು ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ” ಎಂದಿದ್ದರು. ಅಂದು BSY ಅವರು ಹೇಳಿದ ಮಾತನ್ನು ಇಂದು ನಿಜ ಮಾಡುತ್ತಿದ್ದೀರಿ ಅಲ್ಲವೇ? ಅಧಿಕಾರ ಅನುಭವಿಸಿ BSY ಅವರಿಗೂ ವಚನಭ್ರಷ್ಟರಾಗಿ ವಂಚಿಸಿದ್ದಿರಿ, ಈಗ ಡಿ ಕೆ ಶಿವಕುಮಾರ್ ಅವರಿಗೂ ವಂಚಿಸುತ್ತಿದ್ದೀರಿ ಎಂದು ಕಾಂಗ್ರೆಸ್ ಹೇಳಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ