AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಿದೆಯಪ್ಪಾ 10 ಕೆಜಿ ಅಕ್ಕಿ: ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಏನೇ ಕೇಳಿದರೂ ಕೇಂದ್ರ ಸರ್ಕಾರದ ಕಡೆ ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ ಎಂದರು. ಅಲ್ಲದೆ, ಅಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ವ್ಯಂಗ್ಯವಾಡಿದ ಬೊಮ್ಮಾಯಿ, 10 ಕೆಜಿ ಅಕ್ಕಿ ಎಲ್ಲಿದೆಯಪ್ಪಾ ಎಂದು ಸಿಎಂ ಸಿದ್ದರಾಮಯ್ಯರಿಗೆ ಟಾಂಗ್ ಕೊಟ್ಟರು.

ಎಲ್ಲಿದೆಯಪ್ಪಾ 10 ಕೆಜಿ ಅಕ್ಕಿ: ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Oct 10, 2023 | 6:24 PM

Share

ಬಾಗಲಕೋಟೆ, ಅ.10: ಜಿಲ್ಲೆಯ ಜಮಖಂಡಿ ನಗರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಏನೇ ಕೇಳಿದರೂ ಕೇಂದ್ರ ಸರ್ಕಾರದ ಕಡೆ ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ ಎಂದರು. ಅಲ್ಲದೆ, ಅಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ವ್ಯಂಗ್ಯವಾಡಿದ ಬೊಮ್ಮಾಯಿ, 10 ಕೆಜಿ ಅಕ್ಕಿ ಎಲ್ಲಿದೆಯಪ್ಪಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಟಾಂಗ್ ಕೊಟ್ಟರು.

ಜಮಖಂಡಿ ಕ್ಷೇತ್ರದ ಶಾಸಕ ಜಗದೀಶ್ ಗುಡಗುಂಟಿ ಅವರ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ರೈತರ ಹೊಲಗಳಿಗೆ ಪವರ್ (ಕರೆಂಟ್) ಕಟ್ ಆಗಿದೆ. ಮುಂದೆ ಮನೆಗಳಿಗೆ ಪವರ್ ಕಟ್ ಆಗುತ್ತದೆ. ಕರೆಂಟೇ ಇಲ್ಲ, ನಾವು ಪುಕ್ಕಟ್ಟೆ ಕರೆಂಟ್ ಕೊಡುತ್ತೇವೆ ಅಂತಾರೆ. ಕರಂಟ್ ಇಲ್ಲದಿದ್ದರೆ, ಪವರ್ ಎಲ್ಲಿಂದ ಕೊಡುತ್ತೀರಿ, ನೋ ಪವರ್ ನೋ ಬಿಲ್ ಚಾರ್ಜ್ ಎಂದು ವ್ಯಂಗ್ಯವಾಡಿದರು.

10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದರು. ಎಲ್ಲಿದೆಯಪ್ಪ ನಿಂದು ಅಕ್ಕಿ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬೊಮ್ಮಾಯಿ, ಅಕ್ಕಿ ಇಲ್ಲ ಅಂತಾ ಅಲ್ಲ, ಬೇರೆ ಎರಡ್ಮೂರು ರಾಜ್ಯಗಳಲ್ಲಿ ಅಕ್ಕಿ ಸಿಗುತ್ತದೆ. ಆದರೆ ವ್ಯವಹಾರ ಕುದುರಿಲ್ಲ. ವ್ಯವಾಹಾರ ಕುದುರಿದರೆ ಅಕ್ಕಿ ಕೊಡುತ್ತಾರೆ ಎಂದರು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಲೇವಡಿ ಮಾಡಿದ ಬೊಮ್ಮಾಯಿ, 2 ಸಾವಿರ ಹಾಕಿದ್ದಾರಾ? ನನಗೊಬ್ಬ ಬ್ಯಾಂಕ್ ಅಧಿಕಾರಿ ಸಿಕ್ಕಿದ್ದ, ಸಾಕಾಗಿದೆ ಸರ್ ಈ ಸರ್ಕಾರದಿಂದ. ಮಹಿಳೆಯರಿಗೆ ಮಸೆಜ್ ಹಾಕುತ್ತಾರೆ, ದುಡ್ಡು ಹಾಕಲ್ಲ. ಆ ಮಹಿಳೆಯರು ಬಂದು ಬ್ಯಾಂಕ್ ಎದುರು ಬಂದು ಕುಳಿತುಕೊಳ್ಳುತ್ತಾರೆ ಅಂತ ಹೇಳಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರ ರೈತರ ಪಾಲಿಗೆ ಜೀವಂತವಿಲ್ಲ: ಬಸವರಾಜ ಬೊಮ್ಮಾಯಿ ವಾಗ್ದಾಳಿ

ಅಮಾಯಕರ ಮೇಲೆ ಬೊಂಬ್ ಹಾಕಿದರೆ ಈ ಕಾಂಗ್ರೆಸ್ ನಾಯಕರು ನಾವು ಪ್ಯಾಲಿಸ್ರೇನ್​ಗೆ ಸಪೋರ್ಟ್ ಮಾಡುತ್ತೇವೆ ಅಂತಾರೆ. ಅಮಾಯಕರ ಮೇಲೆ ಅತ್ಯಾಚಾರ ಆದರೆ ಅದನ್ನು ಖಂಡನೆ ಮಾಡುವುದನ್ನು ಬಿಟ್ಟು ಬೆಂಬಲಿಸುತ್ತೇವೆ ಅಂತಾರೆ. ಹಮಾಸ್ ಅಂದರೆ ಅದು ಒಂದು ಉಗ್ರಗಾಮಿ ಸಂಘಟನೆ. ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್​ಗೆ ಹೋದ ನಮ್ಮವರು ‘ನಾವು ತಪ್ಪು ಮಾಡುದ್ದೇವೆ ಇಲ್ಲಿಗೆ ಬಂದು, ನಾವು ಮತ್ತೆ ಬರುತ್ತೇವೆ’ ಅಂತ ಹೇಳುತ್ತಿದ್ದಾರೆ. ನೀವು ಅಲ್ಲೇ ಇರಿ, ಇಲ್ಲಿ ಎಲ್ಲ ಸರಿ ಇದೆ ಎಂದು ನಾನು ಹೇಳಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಮತ್ತೇ ಮೋದಿಯವರ ಬಗ್ಗೆ ಅಲೆ ಮೂಡಿದೆ. ಜನರು ಮೋದಿಯವರಿಗೆ ಓಟ್ ಹಾಕುತ್ತೇವೆ ಅಂತಾ ಹೇಳುತ್ತಿದ್ದಾರೆ ಎಂದರು.

ಆಲ್ ಇಂಡಿಯಾ ಮಟ್ಟದಲ್ಲಿ ಕಾಂಗ್ರೆಸ್ ವಿಭಜನೆ

ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಒಂದೊಂದು ಚುನಾವಣೆಯಲ್ಲಿ ಒಂದೊಂದು ರಾಜಕೀಯ ಬದಲಾವಣೆ ಆಗುತ್ತದೆ. ರಾಜ್ಯದಲ್ಲಿ ಹೆಚ್ಚು ಸ್ಥಾನ ಬಂದು ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಕೇವಲ ಕರ್ನಾಟಕ ಮಾತ್ರವಲ್ಲ, ಆಲ್ ಇಂಡಿಯಾ ಮಟ್ಟದಲ್ಲಿ ಕಾಂಗ್ರೆಸ್ ವಿಭಜನೆ ಆಗುತ್ತದೆ ಎಂದರು.

ಮೂರು ಡಿಸಿಎಂ ಆಯ್ಕೆ ಕೂಗು ಮತ್ತು ನಾಯಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದ ನಂತರ ಮುಖ್ಯಮಂತ್ರಿ ‌ಮಾಡುವಾಗಿನಿಂದಲೇ ಭಿನ್ನಾಭಿಪ್ರಾಯ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಆಯ್ಕೆ‌ಮಾಡುವ ವೇಳೆ ಒಂದು ಹಂತಕ್ಕೆ ನನ್ನನ್ನು ಸಿಎಂ ಮಾಡಲ್ಲ ಅಂತ ಸಿದ್ದರಾಮಯ್ಯ ಅವರು ಕೋಪದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಮತ್ತೆ ಅವರಿಗೆ ಸಮಾಧಾನ ಮಾಡಿ ಕರಾರು ಕಂಡೀಷನ್​ನಲ್ಲಿ ಸಿಎಂ ಮಾಡಿರುದು ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದರು.

ಮುಖ್ಯಮಂತ್ರಿ ಆಗಿ ಒಂದೇ ತಿಂಗಳಲ್ಲಿ ನಾಲ್ಕೈದು ಹಿರಿಯ ಸಚಿವರು ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಅಂತ ಹೇಳಿದರು. ಪೂರ್ಣಾವಧಿ ಸಿಎಂ ಆಗುವುದು ಡೌಟ್ ಎಂಬಂತೆ ಹೇಳಲು ಆರಂಭಿಸಿದ್ದರು. ಇದುವರೆಗೂ ಸಿಎಂ ಸಿದ್ದರಾಮಯ್ಯ ಅವರೇ ನಾನು ಐದು ವರ್ಷ ಸಿಎಂ ಆಗಿರುತ್ತೇ ಅಂತ ಎಲ್ಲೂ ಹೇಳಿಲ್ಲ. ಏನಿದರ ಅರ್ಥ? ಏನು ನಡೆದಿದೆ ಒಳಗಡೆ? ರಾಜ್ಯದ ಜನರಿಗೆ ಗೊತ್ತಾಗಬೇಕಿದೆ. ಇದು ಕೇವಲ ಕಾಂಗ್ರೆಸ್ ಆಂತರಿಕ ವಿಚಾರವಲ್ಲ. ರಾಜ್ಯದ ಜನರಿಗೆ ಗೊತ್ತಾಗಬೇಕಾದ ವಿಷಯ ಇದು ಎಂದರು.

ಮೂರು ಜನ ಡಿಸಿಎಂ ಅನ್ನೋದು ಇವರ ಬುಡಕ್ಕೆ ಅವರು, ಅವರ ಬುಡಕ್ಕೆ ಇವರು ಇಡಲು ನೋಡುತ್ತಿದ್ದಾರೆ. ಈ ಮಧ್ಯೆ ಶಾಸಕರು ನಮ್ಮನ್ನು ಕೇಳುವವರಿಲ್ಲ ಹೇಳುವವರಿಲ್ಲ, ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ ಅಂತಿದ್ದಾರೆ. ಒಟ್ಟಾರೆಯಾಗಿ ಸರಕಾರ ಗೊಂದಲದ ಗೂಡಾಗಿದೆ. ಭಿನ್ನಾಭಿಪ್ರಾಯ ಇನ್ನು ಸ್ವಲ್ಪ ದಿನದಲ್ಲೇ ಸ್ಪೋಟಗೊಳ್ಳಲಿದೆ. ದೊಡ್ಡ ಪ್ರಮಾಣದಲ್ಲಿ ಜನರ ಪರವಾಗಿ ಚಿಂತನೆ ಮಾಡುವಂತವರಾರು ಇಲ್ಲದಂತಾಗಿದೆ ಎಂದರು.

ಕಾಂಗ್ರೆಸ್ ನಾಯಕರು ಯಾರಾದೂ ತಮ್ಮ ಸಂಪರ್ಕದಲ್ಲಿದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈಗ ಆ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಬೇರೆಯವರ ರೀತಿ ಅಡ್ವಾನ್ಸ್ ಆಗಿ ಹೇಳಲು ಹೋಗುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆ ಬಗ್ಗೆ ವಾಗ್ದಾಳಿ ನಡೆಸಿದ ಬೊಮ್ಮಾಯಿ, ಮೊದಲ ತಿಂಗಳ ಗೃಹಲಕ್ಷ್ಮಿ ಹಣ ಬಂದಿಲ್ಲ. ಮೊದಲ‌ ತಿಂಗಳು ಬಂದವರಿಗೆ ಎರಡನೇ ತಿಂಗಳು ಹಣ ಬಂದಿಲ್ಲ. ಹೀಗಾಗಿ ಬಹಳಷ್ಟು ಗೊಂದಲ ಇದೆ. ಬಹುತೇಕ ಇನ್ನೊಂದು ತಿಂಗಳು ಆದರೆ ಮೂರು ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆ ಎಲ್ಲ ಮುಗಿಯುವ ಸಾಧ್ಯತೆಗಳಿವೆ. ಗ್ಯಾರಂಟಿಗಳನ್ನು ಮತ ಬ್ಯಾಂಕ್ ಆಗಿ ಮಾಡಿಕೊಳ್ಳಬೇಕು ಅಂತ ಇದ್ದರು. ಆದರೆ ಅದೇ ಅವರಿಗೆ ತಿರುಗುಬಾಣವಾಗುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ