MLC Puttanna: ಕಾಂಗ್ರೆಸ್‌ ಸೇರ್ಪಡೆಯಾದ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ

ಬಿಜೆಪಿ ಹಾಲಿ ಎಂಎಲ್‌ಸಿ ಪುಟ್ಟಣ್ಣ ಇಂದು (ಮಾ. 09) ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಆಗಿ ಆಯ್ಕೆಯಾಗಿದ್ದ ಪುಟ್ಟಣ್ಣ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.    

ಬೆಂಗಳೂರು: ಬಿಜೆಪಿ ಹಾಲಿ ಎಂಎಲ್‌ಸಿ ಪುಟ್ಟಣ್ಣ (MLC Puttanna) ಇಂದು (ಮಾ. 09) ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಆಗಿ ಆಯ್ಕೆಯಾಗಿದ್ದ ಪುಟ್ಟಣ್ಣ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಧಿಕೃತವಾಗಿ ಎಂಎಲ್‌ಸಿ ಪುಟ್ಟಣ್ಣ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ಪಕ್ಷದ ಬಾವುಟ ನೀಡದೆ ಪುಟ್ಟಣ್ಣರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸ್ವಾಗತಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಬಿಜೆಪಿಯಲ್ಲಿ ಕೆಲಸ ಮಾಡಲು ಆಗದಂತ ಪರಿಸ್ಥಿತಿಯಿತ್ತು: ಪುಟ್ಟಣ್ಣ 

ಕಾಂಗ್ರೆಸ್​ ಸೇರ್ಪಡೆಯಾದ ಬಳಿಕ ಎಂಎಲ್​ಸಿ ಪುಟ್ಟಣ್ಣ ಮಾತನಾಡಿ, ವಿಧಾನಪರಿಷತ್​ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಸಭಾಪತಿ ಕಚೇರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದೇನೆ. ಬಿಜೆಪಿಯಲ್ಲಿ ಕೆಲಸ ಮಾಡಲು ಆಗದಂತ ಪರಿಸ್ಥಿತಿ ಇತ್ತು. ಒಂದೇ ಒಂದು ಶಿಕ್ಷಕರ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಕೆಲಸ ಸರ್ಕಾರ ಮಾಡಿಲ್ಲ. 142 ದಿನ ಶಿಕ್ಷಕರು ಅಹೋರಾತ್ರಿ ಧರಣಿ ಮಾಡಿದರು. ಇಬ್ಬರು ಆತ್ಮಹತ್ಯೆ ಮಾಡಿಕೊಂಡರು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು 30-40 ಬಾರಿ ಭೇಟಿ ಮಾಡಿದರೂ ಕೂಡ ಸಮಸ್ಯೆ ಬಗೆಹರಿಸಲಿಲ್ಲ. ಅವತ್ತು ನಾನು ಡಿ.ಕೆ. ಶಿವಕುಮಾರ್​ರನ್ನು ಭೇಟಿ ಮಾಡಿ ಶಿಕ್ಷಕರ ಆತ್ಮಹತ್ಯೆ ತಡೆಯಿರಿ ಅಂತ ಕೋರಿಕೊಂಡೆ.
ಹತ್ತು ಹಲವಾರು ಸಮಸ್ಯೆಗಳಿವೆ. ಇಂಥ ಕಡು ಭ್ರಷ್ಟ ವ್ಯವಸ್ಥೆಯನ್ನು 20 ವರ್ಷದ ಜೀವನದಲ್ಲಿ ನಾನು ನೋಡಿಲ್ಲ. ನಾನು ಇಂಥ ತಪ್ಪು ಯಾಕೆ ಮಾಡಿಬಿಟ್ಟೆ ಅಂತ ಆತ್ಮಸಾಕ್ಷಿಗೆ ಬೇಜಾರಾಗಿದೆ ಎಂದು ಹೇಳಿದರು.

ಇದನ್ನೂ ಓದಿ: HD Kumaraswamy: ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್​​ಗೆ ಆತಂಕ; ಹೆಚ್​​​ಡಿ ಕುಮಾರಸ್ವಾಮಿ

ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸಿದ್ದರಾಮಯ್ಯ  

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದ್ದಾರೆ. ಅವರು ಬಿಜೆಪಿಯ ಪರಿಷತ್ ಸದಸ್ಯರಾಗಿದ್ದವರು. ಪುಟ್ಟಣ್ಣಗೆ ಇನ್ನೂ ನಾಲ್ಕು ವರ್ಷ ಅವಧಿಯಿದೆ ಇರುವಾಗಲೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ಕೋಮುವಾದ ಅಭಿವೃದ್ಧಿ ಕಾಮಗಾರಿಗಳಿಗೆ ತಿಲಾಂಜಲಿ ಇಟ್ಟು, ಜನರ ಭಾವನೆಗಳನ್ನು ಹಿಂದೂಪರ ಭಾವನೆಗಳ ಕೆರಳಿಸುವ ನಡೆಯಿಂದ ಬೇಸತ್ತು,
ಪರಿಷತ್ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್​ನಲ್ಲಿ ಉಪ ಸಭಾಪತಿಯೂ ಆಗಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ ಬಹಳ ಜನಪ್ರಿಯತೆ ಪಡೆದಿದ್ದಾರೆ ಎಂದರು.

ಇದನ್ನೂ ಓದಿ: ಸುಮಲತಾ ಅಂಬರೀಶ್​ ಬಿಜೆಪಿ ಸೇರಿದ್ರೆ ಸಂಸದೆ ಸ್ಥಾನದಿಂದ ಅನರ್ಹ ? ಕಮಲ ಮುಡಿಯಲು ಹೊರಟ ಮಂಡ್ಯ ಗೌಡ್ತಿಗೆ ಕಾನೂನು ತೊಡಕು!

ಬಿಜೆಪಿಯ ಪತನ ಆರಂಭವಾಗಿದೆ ಎಂದ ರಣದೀಪ್ ಸುರ್ಜೇವಾಲ 

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಕುರಿತಾಗಿ ಟ್ವೀಟ್​ ಮಾಡಿದ್ದು, 40 % ಸರ್ಕಾರ, ಜನ ವಿರೋಧಿ, ಶಿಕ್ಷಕ ವಿರೋಧಿ ನೀತಿಗಳಿಂದ ಬೇಸತ್ತ ಬಿಜೆಪಿ ಎಂಎಲ್​ಸಿ ಪುಟ್ಟಣ್ಣ ಅವರು ಇಂದು ಎಂಎಲ್​ಸಿ ಸ್ಥಾನಕ್ಕೆ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಎಂಎಲ್​ಸಿಯಾಗಿ 4 ವರ್ಷಗಳ ಅಧಿಕಾರಾವಧಿಯನ್ನ ಹೊಂದಿದ್ದಾರೆ. ನಾವು ಅವರ ದಿಟ್ಟ ಮತ್ತು ಧೈರ್ಯಶಾಲಿ ನಡೆಯನ್ನು ಶ್ಲಾಘಿಸುತ್ತೇನೆ. ಬಿಜೆಪಿಯ ಪತನ ಆರಂಭವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಪುಟ್ಟಣ್ಣಗೆ ಆರಂಭದಲ್ಲೇ ವಿಘ್ನ

ಇನ್ನು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ MLC ಪುಟ್ಟಣ್ಣಗೆ ಆರಂಭದಲ್ಲೇ ವಿಘ್ನ ಉಂಟಾಗಿದ್ದು, ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಕೆಪಿಸಿಸಿ ಕಚೇರಿ ಮುಂಭಾಗ ಟಿಕೆಟ್‌ ಆಕಾಂಕ್ಷಿಗಳಿಂದ ಪ್ರತಿಭಟನೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯಗೆ ಮುತ್ತಿಗೆ ಹಾಕಲು ಯತ್ನಸಿದ್ದು, ಪುಟ್ಟಣ್ಣಗೆ ರಾಜಾಜಿನಗರ ಕ್ಷೇತ್ರದ ಟಿಕೆಟ್ ನೀಡದಂತೆ ಘೋಷಣೆ ಕೂಗಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:39 pm, Thu, 9 March 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us