Congress: ನಿಮ್ಮದು ಪ್ರೇಮ ರಾಜಕಾರಣವೇ; ಅಶ್ವತ್ಥನಾರಾಯಣಗೆ ಕಾಂಗ್ರೆಸ್ ಪ್ರಶ್ನೆ

ಕೆಲವು ತಿಂಗಳ ಹಿಂದೆ ತಾವು ನೀಡಿದ್ದ ಹೇಳಿಕೆಗೆ ಈಗ ಎಫ್​ಐಆರ್​ ದಾಖಲಿಸಲಾಗಿದೆ. ಇದು ದ್ವೇಷರಾಜಕಾರಣ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ (Ashwathnarayan) ಹೇಳಿದ್ದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

Congress: ನಿಮ್ಮದು ಪ್ರೇಮ ರಾಜಕಾರಣವೇ; ಅಶ್ವತ್ಥನಾರಾಯಣಗೆ ಕಾಂಗ್ರೆಸ್ ಪ್ರಶ್ನೆ
ಅಶ್ವತ್ಥನಾರಾಯಣ

Updated on: May 26, 2023 | 4:24 PM

ಬೆಂಗಳೂರು: ಕೆಲವು ತಿಂಗಳ ಹಿಂದೆ ತಾವು ನೀಡಿದ್ದ ಹೇಳಿಕೆಗೆ ಈಗ ಎಫ್​ಐಆರ್​ ದಾಖಲಿಸಲಾಗಿದೆ. ಇದು ದ್ವೇಷರಾಜಕಾರಣ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ (Ashwathnarayan) ಹೇಳಿದ್ದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ನಮ್ಮದು ದ್ವೇಷ ರಾಜಕಾರಣವಾಗಿದ್ದರೆ ನಿಮ್ಮದು ‘ಪ್ರೇಮ ರಾಜಕಾರಣವೇ’ ಎಂದು ಪ್ರಶ್ನಿಸಿದೆ. ಉರಿಗೌಡ ನಂಜೇಗೌಡರು ಟಿಪ್ಪುವನ್ನು ಹೊಡೆದುಹಾಕಿದಂತೆ ಸಿದ್ದರಾಮಯ್ಯ (Siddaramaiah) ಅವರನ್ನು ಹೊಡೆದು ಹಾಕಬೇಕು ಎಂದು ಅಶ್ವತ್ಥನಾರಾಯಣ ಹೇಳಿದ್ದರು. ಈ ಸಂಬಂಧ ಮೈಸೂರಿನಲ್ಲಿ ಎಫ್​ಐಆರ್ ದಾಖಲಾಗಿದೆ.

‘ಪ್ರಕರಣ ದಾಖಲಿಸಿದ್ದು ದ್ವೇಷ ರಾಜಕಾರಣ ಎನ್ನುತ್ತಿರುವ ಅಶ್ವತ್ಥನಾರಾಯಣ ಅವರೇ, ತಾವು ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆಗೆ ಕರೆ ನೀಡಿದ್ದು ‘ಪ್ರೇಮ ರಾಜಕಾರಣ’ ಎನಿಸಿಕೊಳ್ಳುತ್ತದೆಯೇ? ರಾಜ್ಯದ ಮುತ್ಸದ್ದಿ ನಾಯಕನನ್ನು ಕೊಲೆ ಮಾಡುವಂತೆ ಕರೆ ಕೊಟ್ಟರೂ ಸುಮ್ಮನಿದ್ದರೆ ಕಾನೂನು ಸಂವಿಧಾನಗಳಿಗೆ ಮಾಡುವ ಅಪಚಾರವಾಗಲಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಎಫ್​ಐಆರ್ ದಾಖಲಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಶ್ವತ್ಥನಾರಾಯಣ, ಇದ್ದಕ್ಕಿದ್ದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಿಎಂ ಮತ್ತು ಡಿಸಿಎಂ ಸಭೆ ತೆಗೆದುಕೊಂಡು ಪೊಲೀಸರಿಗೆ ಯಾಕೆ ಕೇಸ್ ದಾಖಲು ಮಾಡಿಲ್ಲ ಎಂದು ಕೇಳಿದ್ದಾರೆ. ನನ್ನ ಹೇಳಿಕೆಯನ್ನು ಕೊಲೆ ಯತ್ನ ಎಂದು ಬಿಂಬಿಸಿದ್ದಾರೆ ಎಂದು ಹೇಳಿದ್ದರು.


ಇದನ್ನೂ ಓದಿ: ಸಾಲದ ವಿವರ ನೀಡಿದ ಶಿಕ್ಷಕ ಅಮಾನತು, ಕಾಂಗ್ರೆಸ್ ಆಡಳಿತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಅಶ್ವತ್ಥನಾರಾಯಣ್

ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಇದ್ದ ಟಿಪ್ಪು ಪ್ರೇಮವನ್ನು ಖಂಡಿಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಚಿಂತನೆಯಲ್ಲಿ ಹೇಳಿದ್ದೆ. ವೈಯಕ್ತಿಕವಾಗಿ ನನಗೆ ಸಿದ್ದರಾಮಯ್ಯ ಮೇಲೆ ಗೌರವ ಇದೆ. ಸೈದ್ದಾಂತಿಕವಾಗಿ ನಮಗೂ ಅವರಿಗೂ ಬಹಳ ವ್ಯತ್ಯಾಸ ಇದೆ. ನಾನು ಸದನದಲ್ಲಿ ಕೂಡಾ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದೇನೆ ಎಂದು ಅವರು ಹೇಳಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Fri, 26 May 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us