ರಸ್ತೆ, ವಿಮಾನ ನಿಲ್ದಾಣ, ಬಂದರು ಹೀಗೆ ಎಲ್ಲ ಯೋಜನೆಗಳನ್ನು ಅದಾನಿಗೆ ಕೊಡುತ್ತಿರುವುದೇಕೆ?: ಮಲ್ಲಿಕಾರ್ಜುನ ಖರ್ಗೆ

|

Updated on: Apr 06, 2023 | 1:53 PM

Mallikarjun Kharge: ದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಸರ್ಕಾರವು ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆದರೆ ಅವರು ಹೇಳಿದ್ದು ಅವರ ಕಾರ್ಯಗಳಲ್ಲಿ ಕಾಣಿಸುತ್ತಿಲ್ಲ ಎಂದಿದ್ದಾರೆ.

ರಸ್ತೆ, ವಿಮಾನ ನಿಲ್ದಾಣ, ಬಂದರು ಹೀಗೆ ಎಲ್ಲ ಯೋಜನೆಗಳನ್ನು ಅದಾನಿಗೆ ಕೊಡುತ್ತಿರುವುದೇಕೆ?: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ದೆಹಲಿ: ಹಳೆ ರೈಲುಗಳಲ್ಲಿ ಹೊಸ ಇಂಜಿನ್ ಹಾಕುವುದು ಮತ್ತು ಸುದೀರ್ಘ ಭಾಷಣದ ಜೊತೆಗೆ ಅದಕ್ಕೆ ಚಾಲನೆ ನೀಡುವುದು ಬಿಟ್ಟರೆ ಅವರು ಬೇರೆ ಕೆಲಸ ಮಾಡಲಿಲ್ಲ. ರೈಲಿಗೆ ಚಾಲನೆ ನೀಡಲು ನಿಮ್ಮಲ್ಲಿ ಸ್ಥಳೀಯ ಸಂಸದರು ಇರುವಾಗ ಪ್ರಧಾನಿ ಮೋದಿಯವರ ಅಗತ್ಯವೇನಿದೆ ಕಾಂಗ್ರೆಸ್ (Congress) ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ನರೇಂದ್ರ ಮೋದಿ (Narendra Modi) ಸರ್ಕಾರವು ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆದರೆ ಅವರು ಹೇಳಿದ್ದು ಅವರ ಕಾರ್ಯಗಳಲ್ಲಿ ಕಾಣಿಸುತ್ತಿಲ್ಲ ಎಂದಿದ್ದಾರೆ.

ವಿಮಾನ ನಿಲ್ದಾಣ, ರಸ್ತೆ, ಬಂದರುಗಳವರೆಗೆ ಎಲ್ಲಾ ಯೋಜನೆಗಳನ್ನು ಅದಾನಿಗೆ ನೀಡಲಾಗಿದೆ, ಏಕೆ?  ಇದು ಬಿಜೆಪಿ ಕೇವಲ ಒಬ್ಬ ವ್ಯಕ್ತಿ ಶ್ರೀಮಂತರಾಗಲು ಬಯಸುತ್ತದೆ ಎಂಬುದನ್ನು ತೋರಿಸುತ್ತದೆ. ಅದಾನಿ ಶ್ರೀಮಂತರಾಗಬೇಕು ಎಂಬುದನ್ನು ಬಿಜೆಪಿ ಬಯಸುತ್ತಿದೆ. 50 ಲಕ್ಷ ಕೋಟಿ ಬಜೆಟ್ ಅನ್ನು ಕೇವಲ 12 ನಿಮಿಷಗಳಲ್ಲಿ ಅಂಗೀಕರಿಸಲಾಯಿತು. ವಿರೋಧ ಪಕ್ಷಗಳಿಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಯಾವಾಗಲೂ ಹೇಳುತ್ತಾರೆ. ಆದರೆ ನಾವು ಮಾತನಾಡಲು ಎದ್ದಾಗಲೆಲ್ಲ ಅವರು ನಮ್ಮ ಬಾಯ್ಮುಚ್ಚಿಸುತ್ತಾರೆ.ಆಡಳಿತ ಪಕ್ಷವೇ ಗೊಂದಲ ಸೃಷ್ಟಿಸುವುದನ್ನು ನನ್ನ ಇಡೀ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ ಹೇಳಿದ್ದಾರೆ.

ಸಂಸತ್ ಕಲಾಪ ಸ್ಥಗಿತವಾಗುವುದಕ್ಕೆ ಆಡಳಿತ ಪಕ್ಷವನ್ನು ದೂಷಿಸಿದ ಖರ್ಗೆ, ಆಡಳಿತ ಪಕ್ಷವು ವಿರೋಧ ಪಕ್ಷಗಳಿಗೆ ಮಾತನಾಡಲು ಬಿಡಲಿಲ್ಲ ಎಂದು ಹೇಳಿದ್ದಾರೆ. ಜೆಪಿಸಿ ಆರಂಭಿಸಿದರೆ ಆಡಳಿತ ಪಕ್ಷಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ, ಹೀಗಿದ್ದರೂ ಜೆಪಿಸಿ ರಚಿಸಲು ಏಕೆ ಹೆದರುತ್ತಾರೆ ಎಂದು ಖರ್ಗೆ ಪ್ರಶ್ನಿಸಿದರು. ಜೆಪಿಸಿ ರಚನೆ ಮಾಡದಿರುವ ಆಡಳಿತ ಪಕ್ಷದ ನಿರ್ಧಾರದ ಹಿಂದೆ ಏನೋ ಒಂದು ಇದೆ ಎಂದು ಖರ್ಗೆ ಸಂದೇಹ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​? ಇಲ್ಲಿದೆ ಅಚ್ಚರಿ ಸಂಗತಿಗಳು 

ಬಿಜೆಪಿಯ ಅಮ್ರೇಲಿ ಸಂಸದರನ್ನು ಸ್ಥಳೀಯ ನ್ಯಾಯಾಲಯ ಮೂರು ವರ್ಷಗಳ ಕಾಲ ದೋಷಿ ಎಂದು ಘೋಷಿಸಿದೆ. ಆದರೆ ತಕ್ಷಣವೇ ಅವರನ್ನು ಅನರ್ಹಗೊಳಿಸಲಿಲ್ಲ ಎಂದು ಸಂಸದರ ಅನರ್ಹತೆ ವಿಚಾರವನ್ನೂ ಖರ್ಗೆ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಉತ್ತರಿಸಲಿಲ್ಲ. ಅದರ ಬದಲು ಬ್ರಿಟನ್‌ನಲ್ಲಿ ಮಾಡಿದ ಹೇಳಿಕೆಗಳ ಬಗ್ಗೆ ರಾಹುಲ್ ಗಾಂಧಿಯವರ ಕ್ಷಮೆಯಾಚನೆಗೆ ಒತ್ತಾಯಿಸುವ ಮೂಲಕ ಗಮನವನ್ನು ಬೇರೆಡೆಗೆ ತಿರುಗಿಸಿತು ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Thu, 6 April 23