ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ; ಬಿಜೆಪಿ ವ್ಯಂಗ್ಯ, ಕಾರಣ ಇಲ್ಲಿದೆ

|

Updated on: Aug 03, 2023 | 3:36 PM

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ ಎಂದು ಹೇಳಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ; ಬಿಜೆಪಿ ವ್ಯಂಗ್ಯ, ಕಾರಣ ಇಲ್ಲಿದೆ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್
Follow us on

ನವದೆಹಲಿ: ಕರ್ನಾಟಕದಲ್ಲಿ ಆಡಳಿತ ಎಂಬುದು ತಮಾಷೆಯಾಗಿ ಪರಿಣಮಿಸಿದೆ ಎಂದು ಬಿಜೆಪಿ (BJP) ವ್ಯಂಗ್ಯವಾಡಿದೆ. ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಆದೇಶ ಹೊರಡಿಸಿ ಮತ್ತೆ ಅದಕ್ಕೆ ತಡೆಯೊಡ್ಡಿರುವ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya), ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನೀಡಿದ 5 ಭರವಸೆಗಳಲ್ಲಿ ಒಂದೂ ಸಮರ್ಪಕವಾಗಿ ಜಾರಿಯಾಗಿಲ್ಲ. ಶಾಸಕರಿಗೆ ನೀಡಬೇಕಿರುವ ಅಭಿವೃದ್ಧಿ ಅನುದಾನ ನಿರಾಕರಿಸಲಾಗಿದೆ. ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಟ್ಟ 11,000 ಕೋಟಿ ರೂ.ಗಳನ್ನು ಚುನಾವಣಾ ಭರವಸೆಗಳನ್ನು ಈಡೇರಿಸಲು ಬಳಸುವ ಬಗ್ಗೆ ಘೋಷಣೆ ಮಾಡಲಾಗಿದೆ ಎಂದು ಮಾಳವೀಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಇಷ್ಟೇ ಅಲ್ಲ, ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ತೀವ್ರ ಜಟಾಪಟಿ ನಡೆದಿದೆ. ಆಗಸ್ಟ್ 1ರಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ಮೂಲಕ ಸಿದ್ದರಾಮಯ್ಯ ಅವರು 211 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಡಿಕೆ ಶಿವಕುಮಾರ್ ಅವರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಅವರು ಅಸಮಾಧಾನಗೊಂಡಿದ್ದರು. ಅದಕ್ಕಿಂತಲೂ ದೊಡ್ಡ ವಿಷಯವೆಂದರೆ ಅವರ ಸಹೋದರನ ಲೋಕಸಭಾ ಕ್ಷೇತ್ರದಲ್ಲಿ ನಿಯೋಜಿಸಲಾದ ಇನ್ಸ್‌ಪೆಕ್ಟರ್‌ಗಳು ಅವರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಮೂಲ ಆದೇಶಕ್ಕೆ ತಡೆ ನೀಡಿ ಮತ್ತೊಂದು ಆದೇಶ ಹೊರಡಿಸಲಾಗಿದೆ. ನಾಚಿಕೆಗೇಡಿನ ಸಂಗತಿಯೆಂದರೆ, ಕರ್ನಾಟಕದಾದ್ಯಂತ ಇರುವ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿಯಂತ್ರಣ ಕೊಠಡಿಯಿಂದ ಸಂದೇಶವನ್ನು ಕಳುಹಿಸಲಾಗಿದೆ. ಹೊಸ ಪೋಸ್ಟಿಂಗ್‌ಗಳ ಆಧಾರದ ಮೇಲೆ ಇನ್‌ಸ್ಪೆಕ್ಟರ್‌ಗಳು ತಮ್ಮ ಠಾಣೆಗಳಲ್ಲಿಯೇ ಇರುವಂತೆ ಮತ್ತು ಕರ್ತವ್ಯಕ್ಕೆ ವರದಿ ಮಾಡದಂತೆ ಸೂಚನೆಯನ್ನು ಕಳುಹಿಸಲಾಗಿದೆ ಎಂದು ಮಾಳವೀಯ ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ನೀವು ನಿಮ್ಮ ರಾಜ್ಯವನ್ನು ದ್ವೇಷಿಸಿವಿರಾದರೆ ಮಾತ್ರ ಕಾಂಗ್ರೆಸ್‌ಗೆ ಮತ ನೀಡಿ ಎಂದೂ ಅವರು ಉಲ್ಲೇಖಿಸಿದ್ದಾರೆ.

211 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆಗಸ್ಟ್ 1ರಂದು ರಾತ್ರಿ ಆದೇಶ ಹೊರಡಿಸಲಾಗಿತ್ತು. ಆಗಸ್ಟ್ 2ರಂದು ಬೆಳಗ್ಗೆ ಮುಂದಿನ ಆದೇಶದವರೆಗೆ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಆದೇಶಿಸಲಾಗಿತ್ತು. ವರದಿಗಳ ಪ್ರಕಾರ, ಡಿಕೆ ಶಿವಕುಮಾರ್ ಅವರು ವರ್ಗಾವಣೆ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಆದೇಶವನ್ನು ತಡೆಹಿಡಿಯಲಾಗಿದೆ.


ಇದನ್ನೂ ಓದಿ: Police Transfer: ಒಂದೇ ದಿನ 211 ಪೊಲೀಸ್​ ಇನ್ಸ್​ಪೆಕ್ಟರ್ ವರ್ಗಾವಣೆ, ಬೆಳಗಾಗುವಷ್ಟರಲ್ಲೇ ಕೆಲವರ ಟ್ರಾನ್ಸ್​ಫರ್​ಗೆ ತಡೆ ನೀಡಿದ ಸರ್ಕಾರ

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಸಾಮೂಹಿಕ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಬುಧವಾರ ಬೆಳಗ್ಗೆ 11 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯನ್ನು ತಡೆಹಿಡಿದು ಸರ್ಕಾರ ಮತ್ತೊಂದು ಆದೇಶ ಹೊರಡಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಆದೇಶವನ್ನು ಹೊರಡಿಸಲಾಯಿತು. ಅದರಲ್ಲಿ ಎಂಟು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಯಿತು. ಬುಧವಾರ ಮಧ್ಯಾಹ್ನದ ವೇಳೆಗೆ, ಮಂಗಳವಾರ ವರ್ಗಾವಣೆಗೊಂಡ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮುಂದಿನ ಆದೇಶದವರೆಗೆ ತಮ್ಮ ಹೊಸ ಪೋಸ್ಟಿಂಗ್‌ಗಳ ಉಸ್ತುವಾರಿಯನ್ನು ವಹಿಸಿಕೊಳ್ಳದಂತೆ ಸೂಚಿಸಲಾಯಿತು. ವೈರ್​​ಲೆಸ್ ಸಂಪರ್ಕದ ಮೂಲಕ ಎಲ್ಲ ಪೊಲೀಸ್ ಠಾಣೆಗಳಿಗೂ ಸಂದೇಶ ರವಾನಿಸಲಾಗಿತ್ತು.

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ