ಹಾಸನ ಕ್ಷೇತ್ರವನ್ನು ನಾನು ಚಾಲೆಂಜ್​ ಆಗಿ ತೆಗೆದುಕೊಳ್ಳುತ್ತೇನೆ, ಹೆದರಿ ಓಡಿ ಹೋಗುವ ಪ್ರಶ್ನೆ ಇಲ್ಲ: ಹೆಚ್​.ಡಿ.ರೇವಣ್ಣ

ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ದಳಪತಿ ಕುಟುಂಬದಲ್ಲೇ ಮುಸುಕಿನ ಗುದ್ದಾಟ ನಡೆಯುತ್ತಿದೆ. ಭವಾನಿ ಅಥವಾ ರೇವಣ್ಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಭವಾನಿ ಅವರಂತೂ ಶತಾಯಗತಾಯವಾಗಿ ಟಿಕೆಟ್​ಗಾಗಿ ಪಟ್ಟು ಹಿಡಿದು ಕ್ಷೇತ್ರ ಪರ್ಯಟನೆ ಮಾಡುತ್ತಿದ್ದಾರೆ. ಈ ನಡುವೆ ಕ್ಷೇತ್ರವನ್ನು ತಾನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ರೇವಣ್ಣ ಹೇಳಿದ್ದಾರೆ.

ಹಾಸನ ಕ್ಷೇತ್ರವನ್ನು ನಾನು ಚಾಲೆಂಜ್​ ಆಗಿ ತೆಗೆದುಕೊಳ್ಳುತ್ತೇನೆ, ಹೆದರಿ ಓಡಿ ಹೋಗುವ ಪ್ರಶ್ನೆ ಇಲ್ಲ: ಹೆಚ್​.ಡಿ.ರೇವಣ್ಣ
ಹೆಚ್​.ಡಿ.ರೇವಣ್ಣ ಮತ್ತು ಭವಾನಿ ರೇವಣ್ಣ
Rakesh Nayak Manchi

Updated on: Feb 25, 2023 | 3:46 PM

ಹಾಸನ: ಕ್ಷೇತ್ರವನ್ನು (Hassan constituency) ನಾನು ಸವಾಲಾಗಿ ಸ್ವೀಕರಿಸುತ್ತೇನೆ. ಹೆದರಿಕೊಂಡು ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ (H.D.Revanna) ಅವರು ಹೇಳಿದ್ದಾರೆ. ಹಾಸನ ತಾಲೂಕಿನ ಬೈಲಹಳ್ಳಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಸರ್ಕಾರ ಹೋದ ಬಳಿಕ ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಯಾವ ರೀತಿ ನೋವು ಕೊಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ಹಾಕುತ್ತಾ ಇದ್ದಾರೆ. ನಿನ್ನೆ ಉಗನೆ ಗ್ರಾಮಕ್ಕೆ ಹೋದಾಗ ಜನ ನಮಗೆ ರಕ್ಷಣೆ ಕೊಡಿ ಎಂದು ಅಳಲು ತೋಡಿಕೊಂಡಿರುವುದಾಗಿ ಹೇಳಿದರು.

107 ಕೇಸ್ ಹಾಕಿ ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿಸಿ ಜೈಲಿಗೆ ಕಳಿಸುವುದು ಅಥವಾ ಗಡಿಪಾರು ಮಾಡಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ. ಕೆಲವರು ದುಡ್ಡಿನಿಂದ ನಾವು ಕೊಳ್ಳುತ್ತೇವೆ, ನಾವು ರೌಡಿಸಂ ಮಾಡೇ ಮಾಡುತ್ತೇವೆ ಅಂತಾರೆ. ಹೀಗಾಗಿ ಹಾಸನ ಕ್ಷೇತ್ರವನ್ನು ನಾನು ಚಾಲೆಂಜ್​ ಆಗಿ ತೆಗೆದುಕೊಳ್ಳುತ್ತೇನೆ. ಏನು ಮಾಡಬೇಕು ಹಾಗೂ ಯಾವ ರೀತಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಮುಖಂಡರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ. ಹೆದರಿಕೊಂಡು ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಏನಾಗುತ್ತೋ ನೋಡೋಣ ಎಂದರು.

ಇದನ್ನೂ ಓದಿ: Assembly Polls: ಹಾಸನ ಕ್ಷೇತ್ರದ ಟಿಕೆಟ್ ಗಾಗಿ ಹೆಚ್ ಡಿ ಕುಮಾರಸ್ವಾಮಿ ಮೇಲೆ  ಹೆಚ್ ಡಿ ರೇವಣ್ಣ ಮತ್ತು ಭವಾನಿಯಿಂದ ಎಡೆಬಿಡದ ಒತ್ತಡ  

ನಮ್ಮ ಪಕ್ಷ ಯಾವ ತೀರ್ಮಾನ ಮಾಡುತ್ತದೆ ಎಂದು ಕಾದು ನೋಡುತ್ತೇನೆ. ದೇವೇಗೌಡರು ಈ ಮಟ್ಟಕ್ಕೆ ಬರಬೇಕಿದ್ದರೆ ಅದಕ್ಕೆ ನೀವೇ ಕಾರಣ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗ ಬೆಳವಣಿಗೆಯನ್ನು ಚಾಲೆಂಜ್ ಆಗಿ ಸ್ವೀಕರಿಸೋಣ. ದೇವೇಗೌಡರು, ನಾನು ಈ ತಾಲೂಕಿಗೆ, ಜಿಲ್ಲೆಗೆ, ಹಾಸನ ನಗರಕ್ಕೆ ಏನು ಕೊಡುಗೆ ಕೊಟ್ಟಿದ್ದೀವಿ ಅನ್ನೋದು ಒಂದು ಪರೀಕ್ಷೆ ಆಗಬೇಕಾಗುತ್ತದೆ. ಬಿಜೆಪಿಯ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಏನಾಗಿದೆ ಅಂದರೆ ಇದೊಂದು ಕ್ಷೇತ್ರ ಇದೆ, ಕಾನೂನು, ಪಾನೂನೋ ಏನ್ ಬೇಕಾದರು ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಹೀಗಾಗಿ ಏನೇನು ಆಗುತ್ತದೆ ಎಂದು ನೋಡೋಣ ಎಂದರು.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಭವಾನಿ ಅಬ್ಬರದ ಪ್ರಚಾರ

ಹಾಸನ ಜಿಲ್ಲೆಯಲ್ಲಿ ಭವಾನಿ ರೇವಣ್ಣ ಅವರ ಅಬ್ಬರದ ಪ್ರಚಾರ ಮುಂದುವರಿದಿದ್ದು, ತಾವೇ ಅಭ್ಯರ್ಥಿ ಎಂದು ಜನರ ಮುಂದೆ ಮತಬೇಟೆ ಆರಂಭಿಸಿದ್ದಾರೆ. ಹೋದಲ್ಲೆಲ್ಲಾ ಭವಾನಿ ಪರವಾಗಿ ಅಭಿಮಾನಿ ಬೆಂಬಲಿಗರ ಘೋಷಣೆ ಮೊಳಗುತ್ತಿದ್ದು, ಕಳೆದ ಮೂರು ದಿನಗಳಿಂದ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ. ಇಂದು ಕೂಡ ಹಾಸನ ಕ್ಷೇತ್ರದಿಂದ ಭವಾನಿ ಅಭ್ಯರ್ಥಿ ಆಗಲಿ ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲೆಯನ್ನ ಅಭಿವೃದ್ಧಿ ಮಾಡಿದ್ದು ರೇವಣ್ಣ. ರಾಷ್ಟ್ರದಲ್ಲಿ ಪ್ರದಾನಿ ಕೊಟ್ಟ ಜಿಲ್ಲೆ ಹಾಸನ. ಇಂತಹ ಕುಟುಂಬಕ್ಕೆ ಇವತ್ತಿನ ಶಾಸಕರು ಬನ್ನಿ ನನ್ನ ಎದುರು ಚುನಾವಣೆಗೆ ನಿಲ್ಲಿ ಅಂತಾ ಸವಾಲು ಹಾಕುತ್ತಾರೆ. ನೀವು ಬಂದರೆ ಐವತ್ತು ಸಾವಿರ ಮತದಿಂದ ಸೋಲಿಸುತ್ತೇವೆ ಅಂತಾರೆ. ಹಾಗಾಗಿ ನೀವು ಈ ಪಂಥಾಹ್ವಾನ ಸ್ವೀಕಾರ ಮಾಡಿ ಎಂದಿದ್ದೇನೆ. ಈ ಚುನಾವಣೆಯಲ್ಲಿ ಪಂಥಾಹ್ಚಾನ ಸ್ವೀಕಾರ ಮಾಡಿ ಇದಕ್ಕೆ ಉತ್ತರ ಕೊಡುವುದು ಜನರು ಎಂದು ಮಾಜಿ ಶಾಸಕ ಕರೀಗೌಡ ಹೇಳಿದರು.

ಹಾಸನಕ್ಕೆ ರೇವಣ್ಣ ಆದರೂ ಬರಲಿ, ಭವಾನಿಯಾವರಾದರೂ ಬರಲಿ. ಶಾಸಕರ ಸವಾಲಿಗೆ ಉತ್ತರ ಕೊಡಬೇಕಾದರೆ ನೀವೇ ಬನ್ನಿ ಎಂದು ಕರೆಯುತ್ತಿದ್ದೇವೆ. ಈ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಅದಿಕಾರಕ್ಕೆ ತರಬೇಕಿದೆ. ರೇವಣ್ಣ ಅಥವಾ ಭವನಿಯವರೇ ಅಭ್ಯರ್ಥಿ ಆಗಬೇಕು ಎನ್ನೋದು ನನ್ನ ಒತ್ತಾಯವಾಗಿದೆ ಎಂದು ಮಾಜಿ ಶಾಸಕ ಬಿವಿ ಕರೀಗೌಡ ಹೇಳಿದರು. ಕಂದಲಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಭವಾನಿ ಅಥವಾ ರೇವಣ್ಣ ಅಭ್ಯರ್ಥಿ ಆಗಲಿ ಎಂದು ಒತ್ತಾಯಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us