ವಿದೇಶ ಪ್ರವಾಸ ಮುಗಿಸಿ ಕಾಂಗ್ರೆಸ್ ಶಾಸಕರು ವಾಪಸ್: ಟ್ರಿಪ್ಗೆ ಹೋಗಿದ್ಯಾಕೆ? ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ!
ವಿದೇಶ ಪ್ರವಾಸದಿಂದ ವಾಪಸಾದ ಕಾಂಗ್ರೆಸ್ ಶಾಸಕರ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿವೆ. ಹೈನುಗಾರಿಕೆ, ಕೃಷಿ ಅಧ್ಯಯನಕ್ಕಾಗಿ ಹೋದರೆಂದು ಕೆಲವರು ಹೇಳಿದರೆ, ಮತ್ತೆ ಕೆಲವರು ವೈಯಕ್ತಿಕ ಪ್ರವಾಸ ಎಂದಿದ್ದಾರೆ. ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಉದ್ದೇಶದ ಗೊಂದಲವು ಸಿಎಂ ಕುರ್ಚಿ ಕಚ್ಚಾಟದ ನಡುವೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ದೇವನಹಳ್ಳಿ, ಮಾರ್ಚ್ 04: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕಚ್ಚಾಟದ ನಡುವೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ ಟ್ರಿಪ್ಗೆ ಹೋಗಿದ್ದೇಕೆ ಎಂಬ ವಿಚಾರದಲ್ಲಿ ಶಾಸಕರ ಹೇಳಿಕೆಯಲ್ಲೇ ಗೊಂದಲ ಕಂಡುಬಂದಿದೆ. ಇನ್ನು ಕೆಲ ಶಾಸಕರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಕಣ್ಣುತಪ್ಪಿಸಿ ತೆರಳಿದ್ದಾರೆ. ಹೆಚ್.ಡಿ.ತಮ್ಮಯ್ಯ, ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಮಧ್ಯರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದು, ಕ್ಯಾಮರಾ ಕಾಣುತ್ತಿದ್ದಂತೆ ಈ ಪೈಕಿ ಕೆಲ ಶಾಸಕರು ತರಾತುರಿಯಲ್ಲಿ ಕಾರು ಹತ್ತಿದ್ದಾರೆ.
ಇನ್ನು ಟೂರ್ ಬಗ್ಗೆ ಮಾತನಾಡಿರುವ ದೇವೇಂದ್ರಪ್ಪ, ಈ ಪ್ರವಾಸವು ಮುಖ್ಯವಾಗಿ ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸುವ ಉದ್ದೇಶವನ್ನು ಹೊಂದಿತ್ತು. ವಿದೇಶದಲ್ಲಿನ ಕೃಷಿ ಪದ್ಧತಿಗಳು ಮತ್ತು ಜನರಿಗೆ ಸಂಬಂಧಿಸಿದ ವ್ಯವಸ್ಥೆಗಳು, ಕಾನೂನುಗಳ ಅನುಷ್ಠಾನದಲ್ಲಿ ನಮ್ಮ ದೇಶಕ್ಕಿಂತ ಭಿನ್ನತೆಗಳಿವೆ. ಅಲ್ಲಿನ ಉತ್ತಮ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರವಾಸವು ವೈಯಕ್ತಿಕ ಕಲಿಕೆಯ ಅನುಭವವಾಗಿದ್ದು, ಭವಿಷ್ಯದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬೆಂಬಲಿಗರು ವಿದೇಶಕ್ಕೆ ಹೋಗಿದ್ದಾರೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ ಅವರು, ವಿದೇಶದಲ್ಲಿ ಯಾವುದೇ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ಕಾಂಗ್ರೆಸ್ ಶಾಸಕರು
‘ರಾಜಕೀಯ ಅಧ್ಯಯನ ಎಂಬುದು ಸುಳ್ಳು’
ಆದರೆ ಇವರ ಹೇಳಿಕೆ ವ್ಯತಿರಿಕ್ತವಾಗಿ ಮಾತನಾಡಿರುವ ಕಾಂಗ್ರೆಸ್ ಶಾಸಕ ಬಿ ಎಂ ನಾಗರಾಜ್, ತಮ್ಮ ಪ್ರವಾಸ ರಾಜಕೀಯ ಅಧ್ಯಯನಕ್ಕೆ ಮೀಸಲಾಗಿತ್ತು ಎಂಬ ಸುಳ್ಳು ಮಾಹಿತಿ . ನಾನು ಕುಟುಂಬದ ಜೊತೆ ಹೋಗಿದ್ದು. ಇದು ಕುಟುಂಬದ ಟ್ರಿಪ್. ತಮ್ಮ ಪ್ರವಾಸ ರಾಜಕೀಯ ಚರ್ಚೆ ಅಥವಾ ಅಧ್ಯಯನಕ್ಕೆ ಸಂಬಂಧಿಸಿಲ್ಲ ಎಂದಿದ್ದಾರೆ. ನೆಟ್ವರ್ಕ್ ಸಮಸ್ಯೆಗಳಿಂದಾಗಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ ಎಂದೂ ಅವರು ತಿಳಿಸಿದ್ದಾರೆ. ಈ ನಡುವೆ ವಿದೇಶ ಪ್ರವಾಸದಿಂದ ಶಾಸಕರು ವಾಪಸಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಏಕೆ ಹೋಗಿದ್ರು? ಯಾವ ಅಧ್ಯಯನಕ್ಕೆ ಹೋಗಿದ್ರು? ಎಂಬುದನ್ನ ಅವರ ಬಳಿಯೇ ಕೇಳಿ. ನಾನು ಹೇಳಿದ್ರೆ ಬರೀ ಊಹೆ ಆಗುತ್ತೆ. ಪ್ರವಾಸಕ್ಕೆ ಹೋದವರನ್ನೇ ಕೇಳಿದ್ರೆ ಸ್ಪಷ್ಟವಾಗಿ ಹೇಳುತ್ತಾರೆ ಎಂದಿದ್ದಾರೆ. ಒಟ್ಟಿನಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದ ಶಾಸಕರ ಈ ಗೊಂದಲದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿರೋದಂತೂ ಸತ್ಯ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.