ರಾಮ, ಕೃಷ್ಣ ಎಲ್ಲರೂ ಶೂದ್ರ ದೇವತೆಗಳು: ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.ರವಿ ಆಕ್ರೋಶ

ರಾಮ, ಶಿವ, ಕೃಷ್ಣಾ ಎಲ್ಲರೂ ಶೂದ್ರ ದೇವತೆಗಳು, ಅವರು ಇಂದ್ರನ ವಿರುದ್ಧ ಬಂಡಾಯವೆದ್ದವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಓರ್ವ ಎಡಬಿಡಂಗಿ ಎಂದು ಜರಿದಿದ್ದಾರೆ.

ರಾಮ, ಕೃಷ್ಣ ಎಲ್ಲರೂ ಶೂದ್ರ ದೇವತೆಗಳು: ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.ರವಿ ಆಕ್ರೋಶ
ಸಿ.ಟಿ.ರವಿ ಮತ್ತು ಸಿದ್ದರಾಮಯ್ಯ
Edited By: Rakesh Nayak Manchi

Updated on: Jun 16, 2022 | 3:25 PM

ಬೆಂಗಳೂರು: ಹಿಂದೂಗಳಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ಪದೇಪದೇ ಮಾತನಾಡುತ್ತಿದ್ದ ಸಿದ್ದರಾಮಯ್ಯ (Siddaramaiah) ಅವರು ಇದೀಗ ಹಿಂದೂ ದೇವರುಗಳ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೇಳಿಕೆ ಖಂಡಿಸಿ ವಿಧಾನಸೌಧದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi), ಸಿದ್ದರಾಮಯ್ಯ ಯಾವ ಪುಸ್ತಕದಲ್ಲಿ ಓದಿದ್ದಾರೋ ಗೊತ್ತಿಲ್ಲ. ಅವರು ರಾಮಾಯಣ, ಮಹಾಭಾರತ ಓದುವ ಬದಲು ಮಾರ್ಕ್ಸ್, ಲೆನಿನ್ ಓದಿ ಈಗ ಎಡಬಿಡಂಗಿ ಆಗಿದ್ದಾರೆ. ಸಿದ್ದರಾಮಯ್ಯ ಓರ್ವ ಎಡಬಿಡಂಗಿ ಎಂದು ವಾಗ್ದಾಳಿ ನಡೆಸಿದರು. ರಾಮ, ಶಿವ, ಕೃಷ್ಣಾ ಎಲ್ಲಾ ಶೂದ್ರ ದೇವತೆಗಳು, ಅವರೆಲ್ಲಾ ಇಂದ್ರನ ವಿರುದ್ಧ ಬಂಡಾಯ ಎದ್ದವರು” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ‘ಇಡಿ’ ವಿಚಾರಣೆ: ಪ್ರತಿಭಟನಾನಿರತ ಕೈ ನಾಯಕರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ ಸಿ.ಟಿ.ರವಿ

ದೇವನೊಬ್ಬ ನಾಮ ಹಲವು ಅನ್ನೋದು ನಮ್ಮ ತತ್ವ. ಯಾವ ರೀತಿಯಲ್ಲಾದರೂ ಪೂಜಿಸಬಹುದು ಅಂತ ಸನಾತನ ಧರ್ಮದ ಮೂಲ ತಿರುಳಾಗಿದೆ. ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ, ಇಂದ್ರನೂ ಶಾಪಗ್ರಸ್ತನಾದಾಗ ಶಿವನ ಕುರಿತು ತಪಸ್ಸು ಮಾಡುತ್ತಾನೆ. ಗಾಳಿಗೆ ಅದಿದೇವತೆಯಾಗಿ ವಾಯು, ನೀರಿಗೆ ಗಂಗಾ ಮಾತೆ, ದೇವಾನು ದೇವತೆಗಳಿಗೆ ಪ್ರಕೃತಿ ಹೆಸರಿಟ್ಟು ಪೂಜಿಸುವವರು ನಾವು. ಇಂದ್ರ ಕೂಡ ಪ್ರಾಕೃತಿಕ ದೇವರು. ರಾಮ ಸಂಕಷ್ಟದಲ್ಲಿದ್ದಾಗ, ರಾವಣನ ಜೊತೆ ಯುದ್ದ ಮಾಡುವಾಗ ಶಿವನ ಪೂಜೆ ಮಾಡುತ್ತಾನೆ ಎಂದರು.

ರಾಮೇಶ್ವರದಲ್ಲಿರುವ ಲಿಂಗಕ್ಕೆ ನಾವು ಪೂಜೆ ಸಲ್ಲಿಸುತ್ತೇವೆ. ಗೋಕರ್ಣದಲ್ಲೂ ಪೂಜೆ ಮಾಡುತ್ತೇವೆ. ಇಲ್ಲೆಲ್ಲೂ ಇಂದ್ರ ಮತ್ತು ಶಿವ, ಇಂದ್ರ ಮತ್ತು ರಾಮನ ಸಂಘರ್ಷ ಇಲ್ಲ. ಇವರ ಯಾವ ಥಿಯರಿಯಲ್ಲಿ ಸಂಘರ್ಷ ಇದೆ? ಸಿದ್ದರಾಮಯ್ಯ ಅವರೇ ಹೌ ಈಸ್ ಶೂದ್ರಾಸ್ ಅನ್ನೋ ಅಂಬೇಡ್ಕರ್ ಅವರ ಪುಸ್ತಕ ಓದಿ. ಅಂಬೇಡ್ಕರ್ ಅನೇಕ ಪುಸ್ತಕ ಓದಿ ಅರ್ಥೈಸಿಕೊಂಡಿದ್ದಾರೆ. ಯಾವುದೇ ಸಂದರ್ಭದಲ್ಲಿ ರಾಷ್ಟ್ರದ ಹಿತಕ್ಕೆ ಮಾರಕ ಆಗುವ ನಿರ್ಣಯವನ್ನು ಅವರು ಕೈಗೊಳ್ಳಲಿಲ್ಲ. ವೈಯಕ್ತಿಕ ಹಿತಾಸಕ್ತಿ ಬಿಟ್ಟುಕೊಟ್ಟರು. 1837ರಲ್ಲಿ ಮೈಕಲ್ ಬ್ಯಾಪಿಸ್ಟ್ ಅನ್ನುವ ಚರ್ಚ್ ಪಾದ್ರಿ ಹುಟ್ಟು ಹಾಕಿದ ಫಾಲ್ಸ್ ಥಿಯರಿ ಬಗ್ಗೆ ಪುಸ್ತಕದಲ್ಲಿ ಉತ್ತರ ನೀಡಿದ್ದಾರೆ. ನಾನು ಅಂಬೇಡ್ಕರ್ ಅವರಿಗಿಂತ ಬುದ್ದಿವಂತ ಅಂತ ಭಾವಿಸಿದರೆ ಆಗ ಯಾರು ಬುದ್ದಿವಂತ, ಯಾರು ಮೂರ್ಖ ಅಂತ ತಿಳಿಯುತ್ತದೆ ಎಂದರು.

ಇದನ್ನೂ ಓದಿ: ಗಾಂಧಿಗಳಿಗೆ ಈಡಿ ಸಮನ್ಸ್: ಬೆಂಗಳೂರಲ್ಲಿ ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ

ಉತ್ತರದಿಂದ ದಕ್ಷಿಣದ ವರೆಗೂ ಎಲ್ಲರ ಡಿಎನ್​ಎ ಒಂದೇ ಇದೆ. ಇದರ ಮೇಲೆ ವರ್ಣಾಶ್ರಮ ಅಂತ ಭಾವಿಸಿ ಆರ್ಯ, ದ್ರಾವಿಡ ಅಂತ ವರ್ಗೀಕರಿಸಿದ್ದೀರಿ. ನಿಮ್ಮ ನಾಯಕರನ್ನ ಕೌಲ್ ಬ್ರಾಹ್ಮಣ ಅಂತ ಕರೆದಿದ್ದೀರಿ. ರಾಹುಲ್ ಗಾಂಧಿ ನಾನು ಕೌಲ್ ಬ್ರಾಹ್ಮಣ ಅಂತ ಹೇಳಿದ್ದಾರೆ. ಅದು ಹೇಗೆ ಗೊತ್ತಿಲ್ಲ. ನಮ್ಮ ಪ್ರಕಾರ ಇಂದಿರಾ ಗಾಂಧಿ ಪಾರ್ಸಿಯನ್ನು ಮದುವೆಯಾಗಿದ್ದು. ಪಾರ್ಸಿಯ ಗ್ಯಾಂಡಿ ಅವರು
ಕೌಲ್ ಬ್ರಾಹ್ಮಣ ಅಂತಿದ್ದಾರೆ, ಅದು ಸುಳ್ಳು. ಒಂದು ವೇಳೆ ಕೌಲ್ ಬ್ರಾಹ್ಮಣ ಅನ್ನೋದು ಸರಿಯಾಗಿದ್ದರೆ ಸಿದ್ದರಾಮಯ್ಯ ಯಾರ ಗುಲಾಮರಾಗಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದರು.

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us