ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ: ಜಗದೀಶ್​ ಶೆಟ್ಟರ್​​ಗೆ ಅಮಿತ್​ ಶಾ ದೂರವಾಣಿ ಕರೆ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಯಾಗಿತ್ತು. ಇದಾದ ನಂತರ ಶೆಟ್ಟರ್​​ ವಿರುದ್ಧ ಬಿಜೆಪಿ ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರು ಕಿಡಿಕಾರುತ್ತಾ ಬಂದಿದ್ದರು. ಆದರೆ ಇದೀಗ ಬಿಜೆಪಿ ಹೈಕಮಾಂಡ್​ ನಾಯಕರು ಜಗದೀಶ್​ ಶೆಟ್ಟರ್​ ಅವರಿಗೆ ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ: ಜಗದೀಶ್​ ಶೆಟ್ಟರ್​​ಗೆ ಅಮಿತ್​ ಶಾ ದೂರವಾಣಿ ಕರೆ
ಅಮಿತ್​ ಶಾ (ಎಡಚಿತ್ರ) ಜಗದೀಶ್​ ಶೆಟ್ಟರ್​ (ಬಲಚಿತ್ರ)
Edited By: ವಿವೇಕ ಬಿರಾದಾರ

Updated on: Aug 26, 2023 | 2:36 PM

ಹುಬ್ಬಳ್ಳಿ: ಕಾಂಗ್ರೆಸ್​​ನ (Congress) ಆಪರೇಷನ್​ ಹಸ್ತ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬಿಜೆಪಿ (BJP) ಮತ್ತು ಜೆಡಿಎಸ್​ನ ಕೆಲ ನಾಯಕರು ಘರವಾಪಸಿ ಮಾಡುತ್ತಾರೆ ಎಂಬ ವಂದತಿ ಹರಡಿದೆ. ಈ ಮಧ್ಯೆ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್​ ಮತ್ತು ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್​​ ಹೆಬ್ಬಾರ್​ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿದ್ದು, ಬಿಜೆಪಿ ಪಾಳಯದಲ್ಲಿ ಕೋಲಾಹಲ ಎಬ್ಬಿಸಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾಯತ ಮತಗಳೇ ಇದ್ದು, ಇಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್​​ ಹವಣಿಸುತ್ತಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ ನಾಯಕ ಜಗದೀಶ್​ ಶೆಟ್ಟರ್​​ ಮುಂದಾಳತ್ವ ವಹಿಸುವ ಸಾಧ್ಯತೆಯೂ ಇದೆ.

ಕಳೆದ ವಿಧಾನಸಭೆಯಲ್ಲಿ ಟಿಕೆಟ್​ ಕೈ ತಪ್ಪಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಜಗದೀಶ್​ ಶೆಟ್ಟರ್​ ಕಮಲ ನಾಯಕರ ವಿರುದ್ಧ ಸಮರಸಾರಿದ್ದಾರೆ. ಅಲ್ಲದೇ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಆಪ್ತ, ಮಾಜಿ ಶಾಸಕ ಎಸ್​​ಐ ಚಿಕ್ಕನಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಶೆಟ್ಟರ್​ ಗಾಳ ಹಾಕಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಈ ನಡುವೆಯೇ ರಾಜಕೀಯ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಶೆಟ್ಟರ್​​ಗೆ ಕರೆ ಮಾಡಿದ್ದಾರೆ. ನಿನ್ನೆ (ಆ.25) ಸಂಜೆ ಅಮಿತ್​ ಶಾ ಕರೆ ಮಾಡಿದ್ದು, ಮನವೊಲಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮಿತ್​ ಶಾ, ಜಗದೀಶ್​ ಶೆಟ್ಟರ್​ಗೆ ಕರೆ ಮಾಡಿ 10 ನಿಮಿಷ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೆಟ್ಟರ್ ಆಪ್ತ ಮೂಲಗಳಿಂದ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಸೇರಲ್ಲ ಎಂದ ಮರುದಿನವೇ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವರಾಮ್​ ಹೆಬ್ಬಾರ್​

ಇನ್ನು ಏಳೆಂಟು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲ್ಲಿದ್ದು, ಇದಕ್ಕೂ ಮುನ್ನ ಪಕ್ಷ ಬಿಟ್ಟು ಹೋದ ನಾಯಕರ ಮನವೊಲಿಕೆಗೆ ಬಿಜೆಪಿ ಕೇಂದ್ರ ನಾಯಕರೇ ಮುಂದಾಗಿದ್ದಾರೆ. ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಜಗದೀಶ್​ ಶೆಟ್ಟರ್​ ಮತ್ತು ಶಾಸಕ ಲಕ್ಷ್ಮಣ ಸವದಿ ಅವರಿಗೆ ಪರೋಕ್ಷವಾಗಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು.

ಯಾರೇ ಪಕ್ಷ ಬಿಟ್ಟಿದ್ದರು ಅವರಿಗೆ ಪ್ರಧಾನಿ ಮೋದಿಗಾಗಿ ಸ್ವಾಗತವಿದೆ. ಪಕ್ಷ ಬಿಟ್ಟವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ನಮ್ಮ ದೇಶದ ನಾಯಕನನ್ನು ಇಂದು ಪ್ರಪಂಚ ಒಪ್ಪುತ್ತಿದೆ. ಅವರನ್ನು ಮತ್ತೆ ಪ್ರಧಾನಿ ಮಾಡಲು ಯಾರೇ ಪಾರ್ಟಿ ಬಿಟ್ಟಿದ್ದರೂ ವಾಪಸ್ ಬರಲು ವಿನಂತಿ ಮಾಡುತ್ತೇನೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:33 pm, Sat, 26 August 23

Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us