
ಹೊಸ ಸಂವತ್ಸರ ಆರಂಭವಾದರೆ ಹಬ್ಬ (festival), ವ್ರತಾದಿಗಳು ಆರಂಭವಾಗುತ್ತದೆ. ಒಂದೊಂದು ದಿನಕ್ಕೂ ಒಂದೊಂದು ರೀತಿಯ ವಿಶೇಷತೆಗಳಿರುತ್ತವೆ. ಆದರೆ ನಾವು ಅದನ್ನು ಅರ್ಥೈಸಿಕೊಂಡು ಅದನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಅದೇ ರೀತಿ ಈ ಆಶ್ವಯುಜ ಹುಣ್ಣಿಮೆಯ ಅಥವಾ ಆಶ್ವಿಜ ಹುಣ್ಣಿಮೆಯನ್ನು ಸಾಮಾನ್ಯವಾಗಿ ಶೀಗಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಹುಣ್ಣಿಮೆಯಂದು ಅಂದರೆ ಇಂದು ಅ. 6 ರಂದು ರಾತ್ರಿ ಲಕ್ಷ್ಮೀ ದೇವಿ ತನ್ನನ್ನು ಮತ್ತು ತನ್ನ ಪತಿಯನ್ನು ಯಾರು ಸ್ಮರಿಸುತ್ತಾರೆ ಎನ್ನುವುದನ್ನು ನೋಡುವುದಕ್ಕಾಗಿ ತಾನೇ ಭೂಲೋಕಕ್ಕೆ ಬರುತ್ತಾಳೆ. ಹೀಗೆ ಬರುವ ತಾಯಿಯನ್ನು ನಾವು ಭಕ್ತಿ ಪೂರ್ವಕವಾಗಿ ಸ್ವಾಗತಿಸಬೇಕು ಎಂದು ಪುರಾಣಗಳು ಹೇಳುತ್ತವೆ. ಈ ವತ್ರವನ್ನೇ ನಾವು ಕೋಜಾಗರೀ ವ್ರತ ಎಂದು ಕರೆಯಲಾಗುತ್ತದೆ. ಹೀಗೆ ಲಕ್ಷ್ಮೀ ವೈಕುಂಠ ದಿಂದ ಭೂಲೋಕಕ್ಕೆ ಬರುವಂತಹ ಪುಣ್ಯ ದಿನವನ್ನು ನಾವು ಯಾವ ರೀತಿ ಆಚರಿಸಬೇಕು, ಇದರಿಂದ ಸಿಗುವ ಫಲವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕೋಜಾಗರೀ ವ್ರತದ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಇದರ ಆಚರಣೆ ಮಾಡುವ ಬಳಗ ತುಂಬಾ ಕೆಡಿಮೆ ಇರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಆದರೆ ಈ ದಿನ ಎಷ್ಟು ವಿಶೇಷ ಎಂದು ತಿಳಿದರೆ ಪ್ರತಿಯೊಬ್ಬರೂ ಕೂಡ ಈ ವ್ರತವನ್ನು ಆಚರಿಸುತ್ತಾರೆ. ಈ ದಿವಸ ತಾಯಿ ಲಕ್ಷ್ಮೀ ದೇವಿ ವೈಕುಂಠ ದಿಂದ ಭೂಲೋಕಕ್ಕೆ ಬರುತ್ತಾಳೆ ಎಂಬುದು ನಂಬಿಕೆ. ಆಕೆ ಬರುವಾಗ ಅಂದರೆ ರಾತ್ರಿ 12 ಗಂಟೆಗೆ ಸರಿಯಾಗಿ ಯಾರ ಮನೆಯಲ್ಲಿ ಲಕ್ಷ್ಮೀ ಮತ್ತು ಆಕೆಯ ಪತಿಯಾದಂತಹ ಶ್ರೀಮನ್ನಾರಾಯಣನ ನಾಮಸ್ಮರಣೆಯನ್ನು ಮಾಡುತ್ತಿರುತ್ತಾರೋ ಅವರ ಮನೆಯಲ್ಲಿ ಆಕೆ ನೆಲೆಸುತ್ತಾಳೆ ಎಂಬುದು ನಂಬಿಕೆ. ಅದಕ್ಕಾಗಿಯೇ ಈ ವ್ರತವನ್ನು ಕೋಜಾಗರೀ ಎಂದು ಕರೆಯಲಾಗುತ್ತದೆ. ಯಾರು ಆ ಮಧ್ಯರಾತ್ರಿ ನಾರಾಯಣ ಮತ್ತು ಲಕ್ಷ್ಮೀಯನ್ನು ಭಕ್ತಿಯಿಂದ ಸುತ್ತಿಸುತ್ತಾರೋ ಅವರ ಮನೆ ಮತ್ತು ಮನಸ್ಸಿನಲ್ಲಿ ಸ್ಥಿರವಾಗಿ ಆಕೆ ನೆಲೆಗೊಳ್ಳುತ್ತಾಳೆ ಮಾತ್ರವಲ್ಲ ಲಕ್ಷ್ಮೀಯ ಸಾನಿಧ್ಯ ಆ ಮನೆಯಲ್ಲಿ ಸ್ಥಿರವಾಗಿ ಉಳಿಯುತ್ತದೆ ಜೊತೆಗೆ ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಎಂದು ಪುರಾಣಗಳು ತಿಳಿಸುತ್ತವೆ.
ಉಡುಪಿ ಮತ್ತು ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಆ ಆಚರಣೆಯನ್ನು ಮನೆ ಮನೆಗಳಲ್ಲಿ ಮಾಡಲಾಗುತ್ತದೆ. ಇನ್ನು ಕೆಲವು ಭಾಗದಲ್ಲಿ ದೇವಿ ದೇವಸ್ಥಾನಗಳಲ್ಲಿ ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮ, ದೇವಿ ಪಾರಾಯಣ, ನಾಮ ಜಪ ಮಾಡುವ ಮೂಲಕ ದೇವಿಯನ್ನು ಆಹ್ವಾನೆ ಮಾಡಿ ಪೂಜೆ- ಪುನಸ್ಕಾರಗಳನ್ನು ಮಾಡಲಾಗುತ್ತದೆ. ಇದನ್ನು ಮನೆಯಲ್ಲಿಯೂ ಸರಳವಾಗಿ ಆಚರಣೆ ಮಾಡಬಹುದು.
ಇದನ್ನೂ ಓದಿ: Homa Tradition: ಪೂಜೆಯ ಕೊನೆಯಲ್ಲಿ ಹೋಮ ಏಕೆ ಮಾಡಲಾಗುತ್ತದೆ? ಈ ಸಂಪ್ರದಾಯ ಪ್ರಾರಂಭವಾಗಿದ್ದು ಹೇಗೆ?
ಈ ವ್ರತ ಮಾಡಲು ಮುಖ್ಯವಾಗಿ ಭಕ್ತಿ ಮುಖ್ಯ. ಊಟ ಅಥವಾ ಅಕ್ಕಿಯಿಂದ ಮಾಡಿದಂತಹ ಆಹಾರಗಳನ್ನು ಸೇವನೆ ಮಾಡದೆಯೇ, ರಾತ್ರಿ ಸಮಯದಲ್ಲಿ ದೇವಿ ಸಹಿತ ನಾರಾಯಣನ ನಾಮ ಜಪವನ್ನು ಮಾಡಬೇಕು. ಕಲಶ ಪ್ರತಿಷ್ಠಾಪನೆ ಮಾಡುವವರು ಮಾಡಬಹುದು. ಇಲ್ಲವಾದಲ್ಲಿ ಲಕ್ಷ್ಮೀ -ನಾರಾಯಣ ಫೋಟೋ ಅಥವಾ ಮೂರ್ತಿಗೆ ಅಲಂಕಾರ ಮಾಡಿ, ಅರ್ಚನೆ ಮಾಡುವ ಮೂಲಕ ಜಪ, ಅಷ್ಟೋತ್ತರ, ಭಜನೆಗಳನ್ನು ಮಾಡಬಹುದು. ಬಳಿಕ 12 ಗಂಟೆಗೆ ಸರಿಯಾಗಿ ಪೂಜೆ ಮಾಡಿ, ನೈವೇದ್ಯವನ್ನು ಮನೆಯವರೆಲ್ಲರೂ ಸೇವನೆ ಮಾಡಿ ವ್ರತವನ್ನು ಸಮಾಪ್ತಿಗೊಳಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ