Navratri Day 4: ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ; ಪೂಜಾ ವಿಧಾನವನ್ನು ತಿಳಿಯಿರಿ

ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ತನ್ನ ನಗುವಿನಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದಳು ಆಕೆ. ಆಕೆಯ ಎಂಟು ಭುಜಗಳು ವಿವಿಧ ಆಯುಧಗಳನ್ನು ಹಿಡಿದಿವೆ. ಕುಂಬಳಕಾಯಿ ಬಲಿ ಆಕೆಗೆ ಅತ್ಯಂತ ಪ್ರಿಯ. ಆಕೆಯ ಆರಾಧನೆಯಿಂದ ಋಣ, ದಾರಿದ್ರ್ಯ, ರೋಗಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

Navratri Day 4: ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆ; ಪೂಜಾ ವಿಧಾನವನ್ನು ತಿಳಿಯಿರಿ
ಕೂಷ್ಮಾಂಡಾ
Updated By: ಅಕ್ಷತಾ ವರ್ಕಾಡಿ

Updated on: Sep 24, 2025 | 2:33 PM

ನವರಾತ್ರಿಯ ನಾಲ್ಕನೇ ದಿನ ಆರಾಧಿಸಲ್ಪಡುವ ತಾಯಿ ಸ್ವರೂಪವೇ ಕೂಷ್ಮಾಂಡಾ. ಈ ನಾಮದ ಅರ್ಥವನ್ನು ಪುರಾಣಗಳು ವಿಭಿನ್ನ ರೀತಿಯಲ್ಲಿ ವಿವರಿಸುತ್ತವೆ. ಪುರಾಣ ಕಥೆಯ ಪ್ರಕಾರ, ಅಂಧಕಾರ ಮಾತ್ರ ಆವರಿಸಿದ್ದ ಕಾಲದಲ್ಲಿ ತನ್ನ ಮಂದ–ಮಧುರ ನಗುವಿನಿಂದಲೇ ಈ ತಾಯಿ ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಆದ್ದರಿಂದಲೇ ಆಕೆಗೆ ಆದಿಶಕ್ತಿ ಅಥವಾ ಆದಿಸ್ವರೂಪಿಣಿ ಎಂಬ ಗೌರವದ ಹೆಸರು. ಅವಳಿಲ್ಲದೆ ಬ್ರಹ್ಮಾಂಡವೇ ಅಸ್ತಿತ್ವದಲ್ಲಿರಲಿಲ್ಲ.

ಕೂಷ್ಮಾಂಡಾ ಎಂದರೇನು?

ಕುತ್ಸಿತ = ಸಹಿಸಲಾಗದದು
ಉಷ್ಮಾ = ಉಂಟಾಗುವ ಉಷ್ಣತೆ ಅಥವಾ ಶಬ್ದ
ಅಂಡ = ಜೀವಕೋಶ ಅಥವಾ ಬ್ರಹ್ಮಾಂಡ

ಇನ್ನು ಒಂದು ಉಲ್ಲೇಖದಲ್ಲಿ, ತ್ರಿವಿಧ ತಾಪಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯದಿಂದ ಕೂಡಿದ ಸಂಸಾರದಲ್ಲಿ ಜೀವ ಅಂಡಾಕಾರದ ದೇಹದಲ್ಲಿ ಬಂಧನಕ್ಕೆ ಒಳಗಾಗಿರುವನು ಎಂದು ಹೇಳಲಾಗಿದೆ. ಈ ಪುನರಾವರ್ತಿತ ಬಾಂಧವ್ಯದಿಂದ ಬಿಡಿಸಬಲ್ಲವಳೇ ಕೂಷ್ಮಾಂಡಾ ದೇವಿ.

ಕೂಷ್ಮಾಂಡಾ ದೇವಿಯ ಧ್ಯಾನ ಶ್ಲೋಕ:

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ >
ದಧಾನಾ ಹಸ್ತಪದ್ಮಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ

ತಾಯಿಯ ದಿವ್ಯ ಪ್ರಭೆ:

ಕೂಷ್ಮಾಂಡಾ ದೇವಿಯ ಕಾಂತಿ ಸೂರ್ಯನ ತೇಜಸ್ಸಿಗೆ ಸಮಾನ. ಅವಳ ದೇಹದಿಂದಲೇ ಹತ್ತು ದಿಕ್ಕುಗಳೂ ಪ್ರಕಾಶಿಸುತ್ತವೆ. ಈ ಜಗತ್ತಿನ ಎಲ್ಲಾ ಪ್ರಾಣಿಗಳು ಹಾಗೂ ವಸ್ತುಗಳಲ್ಲಿ ಕಾಣುವ ತೇಜಸ್ಸು, ಆಕೆಯ ಪ್ರಭೆಯ ಪ್ರತಿಬಿಂಬ ಮಾತ್ರ.

  • ಅಷ್ಟಭುಜಾದೇವಿ: ದೇವಿಗೆ ಎಂಟು ಭುಜಗಳು ಇರುವುದರಿಂದ ಅಷ್ಟಭುಜಾ ದೇವಿ ಎಂದೂ ಕರೆಯುತ್ತಾರೆ.
  • ಕೈಗಳಲ್ಲಿ ಇರುವ ಆಯುಧಗಳು: ಕಮಂಡಲ, ಧನುಸ್ಸು, ಬಾಣ, ಕಮಲ, ಅಮೃತಪೂರ್ಣ ಕಲಶ, ಚಕ್ರ, ಗದೆ

ಇದನ್ನೂ ಓದಿ: ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ ಮತ್ತು ಪೂಜಾ ವಿಧಾನ ತಿಳಿಯಿರಿ

ಕುಂಬಳಕಾಯಿ ಬಲಿಯ ಮಹತ್ವ:

ಕೂಷ್ಮಾಂಡಾ ಎಂದರೆ ಸಂಪ್ರದಾಯದಲ್ಲಿ ಕುಂಬಳಕಾಯಿ. ಈ ದೇವಿಗೆ ಕುಂಬಳಕಾಯಿ ಬಲಿ ಅತ್ಯಂತ ಪ್ರಿಯ. ಈ ಕಾರಣದಿಂದಲೂ ಆಕೆಯು ಈ ಹೆಸರಿನಿಂದ ಪ್ರಸಿದ್ಧಳಾದಳು.

ಆರಾಧನೆಯ ಫಲ:

ನವರಾತ್ರಿಯ ಚತುರ್ಥಿ ದಿನ ಕೂಷ್ಮಾಂಡಾ ದೇವಿಯ ಪೂಜೆಯ ಮೂಲಕ ಋಣ, ದಾರಿದ್ರ್ಯ, ರೋಗ, ದುಃಖಗಳು ದೂರವಾಗುತ್ತವೆ. ಜೊತೆಗೆ ಆಯುಷ್ಯ, ಬಲ, ಯಶಸ್ಸು ಮತ್ತು ಆರೋಗ್ಯ ವೃದ್ಧಿಯಾಗುತ್ತವೆ ಎಂಬ ನಂಬಿಕೆಯಿದೆ. ಯಥಾಶಕ್ತಿಯಿಂದ ಆರಾಧನೆ ಮಾಡಿದರೆ ತಾಯಿ ಸಂತೋಷಗೊಂಡು ಸಂಸಾರ ಬಂಧದಿಂದ ಮುಕ್ತಿ ಹಾಗೂ ವ್ಯಾಧಿ–ಬಾಧೆಗಳಿಂದ ರಕ್ಷಣೆ ನೀಡುತ್ತಾಳೆ. ಕೂಷ್ಮಾಂಡಾ ದೇವಿಯ ಆರಾಧನೆ ಭಕ್ತರ ಜೀವನಕ್ಕೆ ಬೆಳಕು, ಶಕ್ತಿ ಮತ್ತು ಆಧ್ಯಾತ್ಮಿಕ ಸಮೃದ್ಧಿಯನ್ನು ತಂದುಕೊಡುತ್ತದೆ.

ಮಾಹಿತಿ: ಶ್ರೀ ವಿಠ್ಠಲ್ ಭಟ್ (6361335497)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Wed, 24 September 25