Rama Navami 2021: ರಾಮನವಮಿ ಆಚರಣೆಯ ಮುಹೂರ್ತ, ಇತಿಹಾಸ ಮತ್ತು ತಿಳಿದುಕೊಳ್ಳಲೇಬೇಕಾದ ಮಹತ್ವ ಇಲ್ಲಿದೆ

|

Updated on: Apr 20, 2021 | 11:31 AM

Rama Navami Festival 2021: ಈ ವರ್ಷದ ರಾಮನವಮಿಯನ್ನು ಏಪ್ರಿಲ್​ ತಿಂಗಳ 21ನೇ ತಾರೀಕಿನಂದು ಆಚರಿಸಲಾಗುತ್ತಿದೆ.

Rama Navami 2021: ರಾಮನವಮಿ ಆಚರಣೆಯ ಮುಹೂರ್ತ, ಇತಿಹಾಸ ಮತ್ತು ತಿಳಿದುಕೊಳ್ಳಲೇಬೇಕಾದ ಮಹತ್ವ ಇಲ್ಲಿದೆ
ರಾಮನವಮಿ ಆಚರಣೆ
Follow us on

ಹಿಂದೂ ಧರ್ಮದ ಪ್ರಕಾರ ಚೈತ್ರ ಮಾಸದ ಶುಕ್ಲಪಕ್ಷದಲ್ಲಿ ರಾಮನವಮಿ ಆಚರಣೆ ಕೈಗೊಳ್ಳಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಮಹಾವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಧ್ಯಾಹ್ನದ ವೇಳೆ ಪುಷ್ಯ ನಕ್ಷತ್ರದಲ್ಲಿ ಕಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಜೊತೆಗೆ ಪುರಾಣಗಳು ಸಾಕ್ಷಿಯಾಗಿವೆ.

ಹಿಂದೂ ಧರ್ಮದಲ್ಲಿ ರಾಮನವಮಿ ಆಚರಣೆ ಮಹತ್ವದ್ದಾಗಿದೆ. ಈ ವರ್ಷದ ರಾಮನವಮಿಯನ್ನು ನಾಳೆ (ಏಪ್ರಿಲ್​ 21) ಆಚರಿಸಲಾಗುತ್ತಿದೆ. ಶ್ರೀರಾಮನ ಭಕ್ತಿಯಲ್ಲಿ ತೊಡಗಲು ತುಂಬಾ ಪರಿಕರಣೆಗಳು ಬೇಕಿಲ್ಲ. ಆಚರಣೆ ತುಂಬಾ ಸುಲಭ. ಭಕ್ತರು ರಾಮನವಮಿ ವಿಶೇಷ ಆಚರಣೆಗಾಗಿ ಉಪವಾಸವನ್ನು ಕೈಗೊಳ್ಳುತ್ತಾರೆ. ಜೀವನದಲ್ಲಿ ನಮ್ಮೆಲ್ಲಾ ಪಾಪಗಳು ಪರಿಹಾರವಾಗಲಿ. ಜೀವನದಲ್ಲಿ ಸಂತೋಷ, ನೆಮ್ಮದಿ ಸಿಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ರಾಮನವಮಿಯಂದು ದಕ್ಷಿಣ ಭಾರತದ ಕಡೆಯಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ ಕೋಸಂಬರಿ, ಪಾನಕವನ್ನು ನೀಡುವ ಮೂಲಕ ಆಚರಣೆ ಮಾಡಲಾಗುತ್ತದೆ. ನಾಡಿನಾದ್ಯಂತ ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತ ಕಚೇರಿಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ದೇಶದೆಲ್ಲೆಡೆ ಹರಡಿರುವುದರಿಂದ ರಾಮನವಮಿಯನ್ನು ಪ್ರತಿ ವರ್ಷದಷ್ಟು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ.

2021 ರಾಮನವಮಿ ಪೂಜೆಯ ಮುಹೂರ್ತ
ನವಮಿ ತಿಥಿ ಆರಂಭಕಾಲ: ಏಪ್ರಿಲ್​ 21, 2021ನೇ ತಾರೀಕು ಬುಧವಾರ ಬೆಳಗಿನ ಜಾವ
ನವಮಿ ಅಂತ್ಯ ಕಾಲ: ಏಪ್ರಿಲ್ 22 ಮಧ್ಯಾಹ್ನ 12.35
ರಾಮ ನವಮಿ ಮಧ್ಯಾಹ್ನದ ಮುಹೂರ್ತ: ಬೆಳಿಗ್ಗೆ 10:30ರಿಂದ 12:52

ರಾಮನವಮಿ ಆಚರಿಸುವಾಗ ತಿಳಿದುಕೊಳ್ಳಬೇಕಾದ ಅಗತ್ಯ ವಿಷಯಗಳು
ರಾಮನವಮಿ ಆಚರಣೆಯಲ್ಲಿ ಭಕ್ತರು ಉಪವಾಸ ಕೈಗೊಳ್ಳುತ್ತಾರೆ. ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಉಪವಾಸ ಇದ್ದು, ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ರಾಮನವಮಿಯಂದು ರಾಮನ ಜಪ-ತಪದ ಜೊತೆಗೆ ರಾಮನ ಮುಂದೆ ಕೂತು ಭಕ್ತಿ ಗೀತೆಗಳನ್ನು ಹಾಡುತ್ತಾರೆ. ರಾಮನ ಭಜನೆಗಳನ್ನು ರಾಗಬದ್ಧವಾಗಿ ತಾಳ,ಲಯದ ಜೊತೆಗೆ ಸುಶ್ರ್ಯಾವ್ಯವಾಗಿ ಹಾಡುತ್ತಾರೆ. ಭಕ್ತರೆಲ್ಲ ಭಗವಾನ್​ ರಾಮನ ಕಥೆಯನ್ನು ಸಾರುತ್ತಾರೆ. ರಾಮನ ಮೂರ್ತಿಗಳನ್ನು ಇಟ್ಟು ವಿಶೇಷ ಪೂಜೆಯನ್ನು ಕೈಗೊಳ್ಳುತ್ತಾರೆ.

ವಿಶೇಷ ಪೂಜೆ-ಹವನ
ಶ್ರೀರಾಮ ನವಮಿಯ ದಿನ ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಜೊತೆಗೆ ಹೋಮಹವನ ನಡೆಸುವುದು ಶುಭಕರ ಎಂದೂ ಹೇಳುತ್ತಾರೆ. ಬೆಳಗ್ಗೆ ಪ್ರಾತಃಕಾಲದಲ್ಲಿ ಬೇಗ ಎದ್ದು, ಸ್ನಾನ ಮುಗಿಸಿ ಪ್ರಾತಃಕಾಲದ ಕರ್ಮಗಳನ್ನು ಪೂರ್ಣಗೊಳಿಸಿ ಶುಭ್ರ ವಸ್ತ್ರವನ್ನು ಧರಿಸಬೇಕು. ಶಾಸ್ತ್ರ ನಡೆಸುವಾಗ ಪತಿ-ಪತ್ನಿಯರು ಒಟ್ಟಿಗೆ ಕುಳಿತುಕೊಳ್ಳಬೇಕು. ಪವಿತ್ರವಾದ ಶುಭ್ರವಸ್ತ್ರದಲ್ಲಿ ಹೋಮ ಕುಂಡದ ಸಿದ್ಧತೆ ಮಾಡಿಕೊಳ್ಳಬೇಕು. ಹೋಮ ಕುಂಡದಲ್ಲಿ ಮಾವಿನ ಗಿಡದ ಕಟ್ಟಿಗೆ ಜೊತೆ ಕರ್ಪೂರದಿಂದ ಅಗ್ನಿ ಸಿದ್ಧತೆ ಮಾಡಿ, ದೇವಾನು ದೇವತೆಗಳ ಹೆಸರಿನಲ್ಲಿ ಆಹುತಿ ನೀಡಬೇಕು. ಹಿಂದೂ ಧರ್ಮದ ಧಾರ್ಮಿಕ ನಂಬಿಕೆಯ ಪ್ರಕಾರ 108 ಬಾರಿ ಆಹುತಿ ನೀಡಲಾಗುತ್ತದೆ. ಹೋಮ ನೆರವೇರಿಸಿದ ಬಳಿಕ ಕನ್ಯಾ ಪೂಜೆಯನ್ನೂ ಮಾಡುವುದು ಒಳ್ಳೆಯದು ಎಂಬ ನಂಬಿಕೆ ಇದೆ.

ಇದನ್ನೂ ಓದಿ:  ಉಡುಪಿಯಲ್ಲಿ ಅಯೋಧ್ಯ ರಾಮನ ಮಹೋತ್ಸವ; ಗೊಂಬೆ ಹೇಳುವ ಕಥೆಗೆ ಉತ್ಸುಕರಾದ ಜನತೆ