Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 13, 2022 | 7:15 AM

ಯಾವ ರೀತಿ ಭಾವ ಇರುತ್ತದೋ ಅದೇ ರೀತಿ ಅದರ ಫಲವೂ ಇರುತ್ತದೆ. ನಾವೆಷ್ಟೋ ಸಲ ಗೊಣಗುತ್ತಾ ಕೆಲಸ ಮಾಡುತ್ತಿರುತ್ತೇವೆ. ಅದು ನಮಗೇ ತಿಳಿಯದಂತೆ ನಮ್ಮ ಅಸಂತೋಷಕ್ಕೆ ಕಾರಣವಾಗುತ್ತದೆ. ಕೆಲಸ ಯಾವುದೇ ಇರಲಿ ಅದನ್ನು ಪ್ರೀತಿಯಭಾವದಿಂದ ಮಾಡಿದಾಗ ಅದು ಸಂತೋಷ ತುಂಬಿದ ಫಲವನ್ನೇ ನೀಡುತ್ತದೆ. ಇದಕ್ಕೆಲ್ಲಾ ನಮ್ಮ ಭಾವವೇ ಕಾರಣ. ಬೆಳಗ್ಗೆ ಏಳುವಲ್ಲಿಂದ ಆರಂಭಸಿ ರಾತ್ರೆ ಮಲಗುವ ಕೊನೆಯ ಕ್ಷಣದವರೆಗೂ ಪ್ರತೀ ಕಾರ್ಯವನ್ನು ಪ್ರೀತಿಯಿಂದ ಮಾಡಬೇಕು.

Spiritual: ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಯಾಕೆ? ಭಾವಕ್ಕೆ ತಕ್ಕಂತೆ ಫಲ
ಸಾಂದರ್ಭಿಕ ಚಿತ್ರ
Follow us on

ಹಿರಿಯರು ಯಾವತ್ತೂ ಹೇಳುತ್ತಿರುತ್ತಾರೆ… ಕೆಟ್ಟ ಮಾತಾಡಬೇಡಿ, ಒಳ್ಳೆಯ ಯೋಚನೆ ಮಾಡಿ, ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಎಂದು. ಏನಿದರ ಮರ್ಮ ?  ಶಾಸ್ತ್ರದಲ್ಲಿ ಒಂದು ಮಾತಿದೆ “ಯದ್ಭಾವಂ ತದ್ಭವತಿ” ಒಂದು ಕಾರ್ಯ/ಕೆಲಸ ಮಾಡುವಾಗ ಯಾವ ರೀತಿ ಭಾವ ಇರುತ್ತದೋ ಅದೇ ರೀತಿ ಅದರ ಫಲವೂ ಇರುತ್ತದೆ. ನಾವೆಷ್ಟೋ ಸಲ ಗೊಣಗುತ್ತಾ ಕೆಲಸ ಮಾಡುತ್ತಿರುತ್ತೇವೆ. ಅದು ನಮಗೇ ತಿಳಿಯದಂತೆ ನಮ್ಮ ಅಸಂತೋಷಕ್ಕೆ ಕಾರಣವಾಗುತ್ತದೆ. ಕೆಲಸ ಯಾವುದೇ ಇರಲಿ ಅದನ್ನು ಪ್ರೀತಿಯಭಾವದಿಂದ ಮಾಡಿದಾಗ ಅದು ಸಂತೋಷ ತುಂಬಿದ ಫಲವನ್ನೇ ನೀಡುತ್ತದೆ. ಇದಕ್ಕೆಲ್ಲಾ ನಮ್ಮ ಭಾವವೇ ಕಾರಣ. ಬೆಳಗ್ಗೆ ಏಳುವಲ್ಲಿಂದ ಆರಂಭಸಿ ರಾತ್ರೆ ಮಲಗುವ ಕೊನೆಯ ಕ್ಷಣದವರೆಗೂ ಪ್ರತೀ ಕಾರ್ಯವನ್ನು ಪ್ರೀತಿಯಿಂದ ಮಾಡಬೇಕು. ಬೆಳಗ್ಗೆ ಏಳುವಾಗ ಭೂಮಿತಾಯಿಗೆ ನಮಿಸುವಲ್ಲಿಂದ ರಾತ್ರೆ ಮಲಗುವಾಗ ಒಳ್ಳೆಯೆ ನಿದ್ದೆಗೋಸ್ಕರ ಭಗವಂತನ ನಾಮಸ್ಮರಣೆ ಮಾಡುವ ಪದ್ಧತಿ ಇದ್ದಲ್ಲಿ ಜೀವನ ಒಂದು ಬದ್ಧತೆಯಿಂದ ಕೂಡಿರುತ್ತದೆ.

ಒಂದು ಪುರಾಣದ ಸತ್ಯ ಕಥೆ : ಮಹಾವಿಷ್ಣುವಿನ ವಾಮನಾವತಾರದ ಕಥೆಯಿದು. ಬಲಿ ಎಂಬ ಅಸುರ ರಾಜನೋರ್ವ ಅಭೂತಪೂರ್ವ ಸ್ಥಾನಕ್ಕಾಗಿ ಯಾಗವನ್ನು ಮಾಡುತ್ತಿರುತ್ತಾನೆ. ಆ ಸಂದರ್ಭದಲ್ಲಿ ಅವನು ಯಾಚಕರು ಕೇಳಿದ್ದನ್ನೆಲಾ ದಾನಮಾಡುತ್ತಿದ್ದ. ಇದು ಎಲ್ಲರಿಗೂ ತಿಳಿದಿದ್ದರೂ ಇನ್ನು ಮುಂದಿನ ಘಟನೆಯನ್ನು ಸರಿಯಾಗಿ ಗಮನಿಸಿ – ಅಂದು ಭಗವಂತ ವಾಮನನ ರೂಪದಲ್ಲಿ ಅವನ (ಬಲಿಯ) ಆಸ್ಥಾನಕ್ಕೆ ಬರುತ್ತಾನೆ. ಆಗ ಪ್ರಸನ್ನಕಾಲದ ಸಮಯ. ಪ್ರಸನ್ನಕಾಲವೆಂದರೆ ಯಾಗದ/ಪೂಜೆಯ ಕೊನೆಯ ಕ್ಷಣ. ದೇವನಿಗೆ ಎಲ್ಲ ವಸ್ತುಗಳು ನಿನ್ನದು ನನಗೆ ನಿನ್ನ ಅನುಗ್ರಹವೊಂದೇ ಸಾಕು ಎಂದು ಹೇಳಿ ಶುದ್ಧಭಾವದಿಂದ ಕರ್ಮದ ಸಮರ್ಪಣೆ ಮಾಡುವ ಸಮಯ. ಇದರ ನಂತರ ದಾನಾದಿಗಳನ್ನು ಮಾಡುವುದು ಕ್ರಮ. ಈ ಸಮಯವನ್ನೇ ಆರಿಸಿ ಭಗವಂತ ವಾಮನನ ರೂಪದಲ್ಲಿ ಅಲ್ಲಿಗೆ ಬರುತ್ತಾನೆ. ಅಲ್ಲಿ ಭಗವಂತ ದಾನ ಕೇಳುವುದು ಪಡೆಯುವುದು ಇದಕ್ಕೂ ಮುನ್ನ ಅಲ್ಲಿರುವ ಒಬ್ಬ ದಾಸಿಗೆ (ಅರಮನೆಯ ಕೆಲಸದಾಕೆಗೆ) ಆ ವಾಮನನ ತೇಜಸ್ಸು ನೋಡಿ ಮಮತೆ ಉಕ್ಕಿ ತಾನು ಈ ಮಗುವಿಗೆ ಎದೆ ಹಾಲು ಉಣಿಸಬೇಕಿತ್ತು ಎಂಬ ಉತ್ಕಟ ಇಚ್ಛೆ ಆಗುತ್ತದೆ .

ಇದರ ಫಲವೇ ಆ ದಾಸಿ ಪೂತನಿ ಆಗಿ ಜನ್ಮ ಪಡೆಯುತ್ತಾಳೆ. ಭಗವಂತ ಕೃಷ್ಣನಾಗಿ ಬಂದು ಅವಳ ಎದೆಹಾಲನ್ನು ಕುಡಿಯುತ್ತಾ ಅವಳಿಗೆ ಭಗವಂತನ ಸಾಯುಜ್ಯವನ್ನು ಕರುಣಿಸುತ್ತಾನೆ. ಈಗ ಇಲ್ಲಿ ನಾವು ಒಂದು ಸೂಕ್ಷ್ಮ ಗಮನಿಸಬೇಕು. ಯಾಗದ ಸಂದರ್ಭದಲ್ಲಿ ದಾನಾರ್ಥಿಯಾಗಿ ಆಗಮಿಸಿದ ವ್ಯಕ್ತಿಗೆ ಎದೆಹಾಲುಣಿಸಬೇಕು ಎಂಬ ಭಾವ ತಪ್ಪು. ಏಕೆಂದರೆ ಅಲ್ಲಿ ಆ ದಾಸಿಯ ಗಮನ ತಾನು ಮಾಡುವ ಸೇವೆಯ ಮೇಲಿರಬೇಕೇ ಹೊರತು. ಆ ಮಗುವಿಗೆ ಹಾಲುಣಿಸ ಬೇಕಿತ್ತು ಎಂಬ ಭಾವದಲ್ಲಲ್ಲ. ಸಂದರ್ಭ ಅನುಚಿತವಾಗಿದ್ದರೂ ಅವಳ ಭಾವ ಅತ್ಯಂತ ಉತ್ಕಟವಾಗಿತ್ತು. ಆದ ಕಾರಣ ಆ ಯೋಚನೆಯ ಫಲ ಅವಳಿಗೆ ರಾಕ್ಷಸಿಯ ಜನ್ಮ ಮತ್ತು ವಿಷದಹಾಲುಣಿಸುವ ಯೋಗವನ್ನು ಕರುಣಿಸಿತು. ಅದೇ ಉತ್ಕಟ ಇಚ್ಛೆ ಉಚಿತವಾಗಿದ್ದರೆ ಪ್ರಹ್ಲಾದನಿಗಾದಂತೆ ವಿಷಪಾನವೂ ಪ್ರಸಾದವಾಗುತ್ತಿತ್ತು. ದಾಸಿಯ ಭಾವ ಭಗವಂತನ ಕುರಿತಾದ ಮತ್ತು ಯಾರಿಗೂ ಅಶುಭವಲ್ಲದೇ ಇರುವುದರಿಂದ ಅವಳಿಗೆ ಭಗವದನುಗ್ರಹ ಪ್ರಾಪ್ತಿಯಾಯಿತು.

ಇದನ್ನೂ ಓದಿ
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಹಾಗೇ ನಾವು ಯಾವ ರೀತಿಯ ಭಾವದಿಂದ ಇರುತ್ತೇವೋ ಅದೇ ರೀತಿಯ ಫಲ ಆ ಕ್ಷಣದಲ್ಲಿ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಪ್ರಾಪ್ತಿ ನಿಶ್ಚಿತ. ಎಷ್ಟೋ ಸಲ ನಾವು ಹೇಳುವುದಿದೆ ಏನೇ ಒಳ್ಳೆಯದು ಮಾಡಿದರೂ ಸಫಲತೆ ಇಲ್ಲ. ಬೇರೆಯವರು ಕೆಟ್ಟದು ಮಾಡಿದರೂ ಸುಖವಾಗಿರುತ್ತಾರೆ ಎಂದು. ಇದೆಲ್ಲವೂ ನಮ್ಮ ಹಿಂದಿನ ಭಾವದ ಫಲವೇ ಆಗಿದೆ. ಕುಂತಿಗೆ ಮಕ್ಕಳಾಯಿತು ಎನ್ನುವ ಅಸೂಯೆ ತುಂಬಿದ ಭಾವದಿಂದ ಗಾಂಧಾರಿ ತನ್ನ ಮಕ್ಕಳಿಗೆ ಜನ್ಮ ನೀಡುತ್ತಾಳೆ ಅದರ ಫಲವೇ ಜೀವನ ಪೂರ್ತಿ ಆ ಮಕ್ಕಳು ಅಸೂಯೆಯಿಂದ ಕೂಡಿದವರಾಗಿಯೇ ಬದುಕುತ್ತಾರೆ.

ಹೀಗೇ ಪ್ರತೀ ಕಾರ್ಯವನ್ನು / ಕಾರ್ಯದಲ್ಲೂ ಕೆಟ್ಟದಾಗಿ ಯೋಚಿಸದೇ ಭಗವದರ್ಪಣ ಭಾವದಿಂದ ಮಾಡಿದರೆ ವಿಭೀಷಣನಿಗಾದಂತೆ ಸ್ವರ್ಣಮಯವಾದ ಲಂಕೆಯ ಪ್ರಾಪ್ತಿ ಆಗುತ್ತದೆ. ಆದ್ದರಿಂದ ಎಂದೂ ಗೊಣಗುತ್ತಾ, ಅವರಿವರನ್ನ ಬೈಯ್ಯುತ್ತಾ ಕೆಲಸ ಮಾಡಬಾರದು. ಪ್ರೀತಿಯಿಂದ ಶುದ್ಧಭಾವದಿಂದ ಕೆಲಸ ಕಾರ್ಯವನ್ನು ಮಾಡಬೇಕು ಎನ್ನುವುದು. ಭಾವಕ್ಕೆ ತಕ್ಕಂತೆ ಫಲ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ,
kkmanasvi@gamail.com