
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದ ಮೂಲಕ ವಿಶೇಷವಾದ ಹಾಗೂ ತಕ್ಷಣವೇ ಫಲ ನೀಡುವ ಒಂದು ವಾಸ್ತು ತಂತ್ರವನ್ನು ಸೂಚಿಸಿದ್ದಾರೆ. ಅದುವೇ ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ ಫೋಟೋವನ್ನು ಇಡುವುದು. ಹೌದು ಗುರೂಜಿಯವರು ಹೇಳುವಂತೆ ಈ ಓಡುತ್ತಿರುವ ಏಳು ಕುದುರೆಗಳ ಫೋಟೋ ಕುಟುಂಬದಲ್ಲಿನ ಕಲಹಗಳು, ಆಸಕ್ತಿಯ ಕೊರತೆ ಮತ್ತು ಅಶಾಂತಿಯುಕ್ತ ವಾತಾವರಣವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಈ ಏಳು ಕುದುರೆಗಳ ಫೋಟೋವನ್ನು ಮನೆಯಲ್ಲಿ ನಿಯಮಿತವಾಗಿ ದರ್ಶನ ಮಾಡುವುದರಿಂದ ದೇಹದಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿಯು ಉಲ್ಬಣಗೊಳ್ಳುತ್ತದೆ. ಇದು ಮಾನಸಿಕವಾಗಿ ಚೈತನ್ಯವನ್ನು ನೀಡಿ, ಕಾರ್ಯ ಪ್ರವೃತ್ತರಾಗಲು ಪ್ರೇರಣೆ ನೀಡುತ್ತದೆ. ಕುದುರೆಗಳು ಗುರಿಯನ್ನು ತಲುಪಲು ನಿರಂತರವಾಗಿ ಶ್ರಮಿಸುವ ಸಂಕೇತವಾಗಿರುವುದರಿಂದ, ಅವುಗಳ ಚಿತ್ರವು ನಮ್ಮಲ್ಲಿ ಅದೇ ಶಕ್ತಿ ಮತ್ತು ಸಂಕಲ್ಪವನ್ನು ತುಂಬುತ್ತದೆ. ಸೂರ್ಯನಾರಾಯಣನ ರಥಕ್ಕೆ ಏಳು ಕುದುರೆಗಳು ಇರುವುದು ಕೂಡ ಇದರ ಮಹತ್ವವನ್ನು ಸೂಚಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಈ ಫೋಟೋವನ್ನು ಮನೆಯಲ್ಲಿ ಎಲ್ಲಿ ಹಾಕಬೇಕು, ಹೇಗೆ ಹಾಕಬೇಕು, ಎಂತಹ ಗಾತ್ರದ ಫೋಟೋ ಬೇಕು ಎಂಬ ಪ್ರಶ್ನೆಗಳು ಉದ್ಭವಿಸಬಹುದು. ಯಾವುದೇ ವಿಶೇಷ ಲೋಹದ (ಬೆಳ್ಳಿ, ಬಂಗಾರ) ಫೋಟೋ ಬೇಕಾಗಿಲ್ಲ, ಕೇವಲ ಒಂದು ಛಾಯಾಚಿತ್ರ ಅಥವಾ ವರ್ಣಚಿತ್ರ ಸಾಕು. ವಾಸ್ತು ಪ್ರಕಾರ, ಈ ಏಳು ಕುದುರೆಗಳ ಚಿತ್ರವನ್ನು ಮನೆಯ ದಕ್ಷಿಣದ ಗೋಡೆಗೆ ಹಾಕಬೇಕು. ಹಾಲ್, ರೂಮ್, ಬೆಡ್ರೂಮ್ ಅಥವಾ ಕಚೇರಿಗಳಲ್ಲಿ ಕೂಡ ದಕ್ಷಿಣ ದಿಕ್ಕಿನಲ್ಲಿ ಇಡಬಹುದು. ಇದು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇಡಬಾರದು.
ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ಏಳು ಕುದುರೆಗಳ ಚಿತ್ರವು ಹಲವಾರು ಪ್ರಯೋಜನಗಳನ್ನು ತರುತ್ತದೆ. ಇದು ಶಕ್ತಿ, ಯಶಸ್ಸು, ಕೀರ್ತಿ ಮತ್ತು ಆರ್ಥಿಕ ಸಬಲತೆಯನ್ನು ನೀಡುತ್ತದೆ. ವಾತಾವರಣದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಕೆಲವು ಫೋಟೋಗಳಲ್ಲಿ ಕುದುರೆಗಳು ನೀರಿನ ಮೇಲೆ ಓಡುತ್ತಿರುವಂತೆ ಅಥವಾ ಚಂದ್ರನ ಹಿನ್ನೆಲೆಯಲ್ಲಿ ಇರುವಂತೆ ಇರಬಹುದು. ಈ ಫೋಟೋಗೆ ಯಾವುದೇ ವಿಶೇಷ ಪೂಜೆ ಪುರಸ್ಕಾರಗಳು, ಊದುಬತ್ತಿ ಹಚ್ಚುವುದು ಅಥವಾ ಹೂವಿನ ಅಲಂಕಾರದ ಅಗತ್ಯವಿಲ್ಲ. “ದರ್ಶನಂ ಪುಣ್ಯಂ” ಎಂಬಂತೆ, ಕೇವಲ ಈ ಚಿತ್ರವನ್ನು ನೋಡುವುದರಿಂದಲೇ ಶುಭ ಫಲಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ.
ಏಳು ಎಂಬ ಸಂಖ್ಯೆಯು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವಪೂರ್ಣವಾಗಿದೆ. ಸಪ್ತಚಕ್ರಗಳು, ಸಪ್ತ ಋಷಿಗಳು, ಸಪ್ತ ನದಿಗಳು, ಸಪ್ತ ಬಣ್ಣಗಳು, ಸಪ್ತ ದಿನಗಳು ಮತ್ತು ಸಪ್ತ ಚಿರಂಜೀವಿಗಳು ಹೀಗೆ ಹಲವು ಉದಾಹರಣೆಗಳು ಏಳರ ಪವಿತ್ರತೆಯನ್ನು ಸಾರುತ್ತವೆ. ಈ ಏಳು ಕುದುರೆಗಳ ತಂತ್ರವು ಮಕ್ಕಳಲ್ಲಿ ವಿದ್ಯಾಭ್ಯಾಸದ ಆಸಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಪ್ರಶಾಂತತೆಯನ್ನು ತರುತ್ತದೆ, ಇದರಿಂದಾಗಿ ಕುಟುಂಬದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗುತ್ತದೆ. ಕುಟುಂಬದ ತಾಯಿ ಸಮಾಧಾನವಾಗಿದ್ದರೆ, ಕುಟುಂಬದ ಎಲ್ಲ ಸದಸ್ಯರಿಗೂ ಚೈತನ್ಯ ಲಭಿಸುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Sat, 11 October 25