White Owl: ಬಿಳಿ ಗೂಬೆ ಕಾಣಿಸಿಕೊಂಡರೆ ಏನರ್ಥ? ಜ್ಯೋತಿಷಿಗಳು ಹೇಳುವುದೇನು?

ಹಿಂದೂ ಧರ್ಮದಲ್ಲಿ ಬಿಳಿ ಗೂಬೆ ದರ್ಶನವು ಮಹಾಲಕ್ಷ್ಮಿಯ ಕೃಪೆ ಮತ್ತು ಅದೃಷ್ಟದ ಸಂಕೇತವಾಗಿದೆ. ಡಾ. ಬಸವರಾಜ್ ಗುರೂಜಿ ಪ್ರಕಾರ, ಇದು ಹಲವು ಜನ್ಮಗಳ ಪಾಪಗಳನ್ನು ನಿವಾರಿಸಿ, ಆರೋಗ್ಯ, ಸಂಪತ್ತು ಮತ್ತು ಯಶಸ್ಸನ್ನು ತರುತ್ತದೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಗೋಧೂಳಿ ಕಾಲದಲ್ಲಿ ಇದರ ದರ್ಶನವು ಅತ್ಯಂತ ಶುಭ. ಅದರಲ್ಲೂ ದೀಪಾವಳಿಯ ಸಮಯದಲ್ಲಿ ಬಿಳಿ ಗೂಬೆ ಕಾಣಿಸಿಕೊಂಡರೆ ನಿಮ್ಮ ಅದೃಷ್ಟವೇ ತೆರೆದಂತೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

White Owl: ಬಿಳಿ ಗೂಬೆ ಕಾಣಿಸಿಕೊಂಡರೆ ಏನರ್ಥ? ಜ್ಯೋತಿಷಿಗಳು ಹೇಳುವುದೇನು?
ಬಿಳಿ ಗೂಬೆ

Updated on: Oct 10, 2025 | 11:29 AM

ಹಿಂದೂ ಸಂಪ್ರದಾಯದಲ್ಲಿ, ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪನಾಶನಂ ಎಂಬ ಮಾತು ಚಾಲ್ತಿಯಲ್ಲಿದೆ. ದೇವಸ್ಥಾನ, ನದಿ ಹಾಗೂ ಪರ್ವತ ಶಿಖರಗಳ ದರ್ಶನ ಇವೆಲ್ಲವೂ ಪುಣ್ಯಕಾರಿಯಾಗಿವೆ. ಇದೇ ರೀತಿಯಾಗಿ ಪ್ರಕೃತಿಯಲ್ಲಿ ಕೆಲವು ಪ್ರಾಣಿಗಳನ್ನು ದೇವತಾ ವಾಹನಗಳೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಗೂಬೆಯ ದರ್ಶನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಅದರಲ್ಲೂ ಬಿಳಿ ಗೂಬೆಯ ದರ್ಶನವು ಅತ್ಯಂತ ಶುಭ ಮತ್ತು ಮಹಾ ಪುಣ್ಯವೆಂದು ಶಾಸ್ತ್ರಗಳು ತಿಳಿಸುತ್ತವೆ. ಆದ್ದರಿಂದ ಬಿಳಿ ಗೂಬೆ ಕಾಣಿಸಿಕೊಂಡರೆ ಅದರ ಅರ್ಥವೇನು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಹಿಂದೂ ಧರ್ಮದಲ್ಲಿ ಗೂಬೆಯನ್ನು ಮಹಾಲಕ್ಷ್ಮಿಯ ವಾಹನವೆಂದು ಪೂಜಿಸಲಾಗುತ್ತದೆ. ಬಿಳಿ ಗೂಬೆ ಕಾಣಿಸಿಕೊಳ್ಳುವುದು ಸಾಮಾನ್ಯವಲ್ಲ, ಅದು ಕಾಣಿಸಿಕೊಂಡರೆ ಅನೇಕ ಜನ್ಮಗಳ ಪಾಪಗಳು ದೂರವಾಗಿ, ಶುಭ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದು ನಂಬಲಾಗಿದೆ. ಇದು ಭಗವಂತನ ಕೃಪೆಗೆ ಪಾತ್ರರಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸುತ್ತದೆ. ಬಿಳಿ ಗೂಬೆಯ ದರ್ಶನವು ಅತೀ ಶುಭಕರವಾಗಿದ್ದು, ಶ್ರೇಷ್ಠ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಬಿಳಿ ಗೂಬೆ ದರ್ಶನದಿಂದ ದೊರೆಯುವ ಪ್ರಯೋಜನಗಳು:

  • ಬಿಳಿ ಗೂಬೆ ದರ್ಶನದಿಂದ ವ್ಯಕ್ತಿಯ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಕುಟುಂಬದಲ್ಲಿ ಸೌಖ್ಯ ಮತ್ತು ನೆಮ್ಮದಿ ನೆಲೆಯಾಗುತ್ತದೆ.
  • ಕಳೆದುಹೋದ ಆಸ್ತಿಪಾಸ್ತಿಗಳು, ಭೂಮಿ ಅಥವಾ ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಶುಭ ಫಲಗಳು ದೊರೆಯುವ ಸಾಧ್ಯತೆ ಇರುತ್ತದೆ.
  • ಶಾಸ್ತ್ರಗಳ ಪ್ರಕಾರ, ಗೂಬೆ ದರ್ಶನವು ಸಂಪತ್ತು, ಆಯಸ್ಸು, ಯಶಸ್ಸು, ಕೀರ್ತಿ, ವಿವಾಹ ಯೋಗ, ಉತ್ತಮ ವಿದ್ಯಾಭ್ಯಾಸ ಮತ್ತು ಉದ್ಯೋಗ ಪ್ರಾಪ್ತಿಗೆ ಸಹಾಯಕವಾಗಿದೆ.

ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಯಾವ ದಿನ ಮತ್ತು ಸಮಯಗಳು ಹೆಚ್ಚು ಶುಭಕರ?

ಬಿಳಿ ಗೂಬೆಯ ದರ್ಶನಕ್ಕೆ ಕೆಲವು ದಿನಗಳು ಮತ್ತು ಸಮಯಗಳು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿವೆ:

  • ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬಿಳಿ ಗೂಬೆಯನ್ನು ಕಾಣುವುದು ಮಹಾ ಪುಣ್ಯವೆಂದು ಪರಿಗಣಿಸಲಾಗುತ್ತದೆ.
  • ಗೋಧೂಳಿ ಕಾಲ (ಸೂರ್ಯಾಸ್ತದ ಸಮಯ), ಬ್ರಾಹ್ಮೀ ಮುಹೂರ್ತ (ಬೆಳಗಿನ ಜಾವ) ಅಥವಾ ಸಂಧ್ಯಾಕಾಲದಲ್ಲಿ ಗೂಬೆ ಕಾಣಿಸಿಕೊಂಡರೆ ಅತ್ಯಂತ ಶುಭ ಫಲಗಳು ಲಭಿಸುತ್ತವೆ ಎಂದು ನಂಬಲಾಗಿದೆ. ಗೂಬೆಗಳು ಸಾಮಾನ್ಯವಾಗಿ ರಾತ್ರಿ ವೇಳೆ ಸಕ್ರಿಯವಾಗಿರುತ್ತವೆ, ಆದ್ದರಿಂದ ಇಂತಹ ಸಮಯದಲ್ಲಿ ಅವುಗಳ ದರ್ಶನ ವಿಶೇಷವೆಂದು ಪರಿಗಣಿಸಲಾಗುತ್ತದೆ.

ದೀಪಾವಳಿ ಮತ್ತು ಗೂಬೆ ದರ್ಶನ:

ದೀಪಾವಳಿ ಹಬ್ಬವು ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದದ್ದು. ಈ ಹಬ್ಬದ ಆಸುಪಾಸಿನಲ್ಲಿ ಬಿಳಿ ಗೂಬೆಯ ದರ್ಶನವಾದರೆ, ಅದು ನಿಜವಾಗಿಯೂ ಧನ್ಯಕರವಾಗಿದೆ. ಇದು ಮಹಾಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಿದ್ದೀರಿ ಎಂಬುದರ ಸಂಕೇತವಾಗಿದೆ ಮತ್ತು ಅಪಾರ ಶುಭವನ್ನು ತರುತ್ತದೆ. ಅಕ್ಷಯ ತೃತೀಯ ಮತ್ತು ಶುಕ್ರವಾರಗಳೂ ಸಹ ಮಹಾಲಕ್ಷ್ಮಿಗೆ ಸಂಬಂಧಿಸಿದ್ದರೂ, ದೀಪಾವಳಿ ಸಮಯದಲ್ಲಿ ಗೂಬೆ ದರ್ಶನಕ್ಕೆ ವಿಶೇಷ ಮಹತ್ವವಿದೆ.

ಇತರ ಶುಭ ಸಂದರ್ಭಗಳು:

  • ದೇವಸ್ಥಾನಗಳಲ್ಲಿ ಅಥವಾ ದೇವಾಲಯದ ಗೋಪುರಗಳಲ್ಲಿ ಬಿಳಿ ಗೂಬೆ ಕಾಣಿಸಿಕೊಂಡರೆ, ಆ ದೇವಾಲಯದ ಅಧಿಷ್ಠಾನ ದೇವರ ಅನುಗ್ರಹ ಸಿಕ್ಕಿದೆ ಎಂದು ಭಾವಿಸಬೇಕು.
  • ಪ್ರಯಾಣದಲ್ಲಿ ಗೂಬೆ ದರ್ಶನವಾದರೆ ಶುಭ. ಅಲ್ಲದೆ, ತಂತ್ರ ಸಂಪ್ರದಾಯದಲ್ಲಿ ಯಾವುದೇ ಸಂಕಲ್ಪ ಮಾಡಿ ಗೂಬೆ ಕಾಣಿಸಿಕೊಂಡರೆ ಅದು ನಿಮ್ಮ ಸಂಕಲ್ಪ ಸಿದ್ಧಿಯಾಗುತ್ತದೆ ಎಂಬುದರ ಸೂಚಕವಾಗಿದೆ.

ಬಿಳಿಗೂಬೆ ಕಂಡಾಗ ಏನು ಮಾಡಬೇಕು?

ಬಿಳಿ ಗೂಬೆ ಕಂಡ ತಕ್ಷಣ, ಕಣ್ಣು ಮುಚ್ಚಿಕೊಂಡು ಲಕ್ಷ್ಮಿ ನಾರಾಯಣ, ಲಕ್ಷ್ಮಿ ನಾರಾಯಣ, ಲಕ್ಷ್ಮಿ ಸಮೇತ ನಾರಾಯಣ ಎಂಬ ಮಂತ್ರವನ್ನು ಜಪಿಸಬೇಕು. ಇದು ನಿಮ್ಮ ಪುಣ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಶುಭ ಫಲಗಳನ್ನು ನೀಡುತ್ತದೆ. ಬಿಳಿ ಗೂಬೆಯ ದರ್ಶನವು ಒಂದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದ್ದು, ಜೀವನದಲ್ಲಿ ಒಳಿತನ್ನು ಬಯಸುವವರಿಗೆ ಆಶಾಕಿರಣವಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ