
ಅಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ತಲೆಗೆ ಪೆಟ್ಟು ತಿಂದು ಕನ್ಕಶನ್ಗೊಳಗಾಗಿದ್ದ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಮೆಲ್ಬರ್ನ್ನಲ್ಲಿ ನಡೆಯುವ ಎರಡನೆ ಟೆಸ್ಟ್ನಲ್ಲಿ ಆಡಿಸುವ ಬಗ್ಗೆ ಟೀಮ್ ಇಂಡಿಯಾದ ಥಿಂಕ್ ಟ್ಯಾಂಕ್ ಗಂಭೀರ ಚಿಂತನೆ ನಡೆಸಿದೆ. ತೊಡೆನೋವಿನ ಸಮಸ್ಯೆಯನ್ನೂ ಅನುಭವಿಸುತ್ತಿದ್ದ ಜಡೇಜಾ ನೆಟ್ಸ್ನಲ್ಲಿ ಭಾಗಿಯಾಗುತ್ತಿರುವರಾದರೂ ಶೇಕಡಾ ನೂರರಷ್ಟು ಫಿಟ್ ಆದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕ್ರಿಸ್ಮಸ್ಗೆ ಮೊದಲು ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡರೆ ಅವರನ್ನು ಹನುಮ ವಿಹಾರಿ ಸ್ಥಾನದಲ್ಲಿ ಆಡಿಸಲಾಗುವುದು. ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ನನ್ನು ಆಲ್ರೌಂಡರ್ ರಿಪ್ಲೇಸ್ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಟೀಮಿನ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಕೈ ಮೂಳೆ ಮುರಿದುಕೊಂಡು ಸರಣಿಯಿಂದ ಹೊರಬಿದ್ದಿರುವುದರಿಂದ ಭಾರತ ತನ್ನ ನಾಲ್ಕು ಬೌಲರ್ಗಳ ಪಾಲಿಸಿಯನ್ನು ಬದಲಾಯಿಸಿ ಐದು ಬೌಲರ್ಗಳನ್ನು ಆಡಿಸುವ ನಿರ್ಧಾರಕ್ಕೆ ಬಂದಿದೆ.
ಹಾಗೆ ನೋಡಿದರೆ, ಟೆಸ್ಟ್ಗಳಲ್ಲಿ ಜಡೇಜಾ ಅವರ ಬ್ಯಾಟಿಂಗ್ ಪ್ರದರ್ಶನ ವಿಹಾರಿಗಿಂತ ಸ್ವಲ್ಪ ಚೆನ್ನಾಗಿದೆ. ಇದುವರೆಗೆ 49 ಟೆಸ್ಟ್ಗಳನ್ನಾಡಿರುವ ಜದ್ದು, 35ರ ಸರಾಸರಿಯಲ್ಲಿ 1,869 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 14 ಅರ್ಧ ಶತಕಗಳು ಸೇರಿವೆ. ಗಮನಿಸಬೇಕಿರುವ ಅಂಶವೇನೆಂದರೆ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನೆಲೆಗಳ ಮೇಲೆ ಅವರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ಹನುಮ ವಿಹಾರಿ
10 ಟೆಸ್ಟ್ಗಳನ್ನಾಡಿರುವ ವಿಹಾರಿ ಒಂದು ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 33ರ ಸರಾಸರಿಯಲ್ಲಿ 576 ರನ್ ಶೇಖರಿಸಿದ್ದಾರೆ.
‘ಜಡೇಜಾ ಸುದೀರ್ಘ ಸ್ಪೆಲ್ಗಳನ್ನು ಬೌಲ್ ಮಾಡುವಷ್ಟು ಫಿಟ್ ಆದರೆ, ಚರ್ಚೆಯೇ ಉದ್ಭವಿಸುವುದಿಲ್ಲ. ನಿಶ್ಚಿತವಾಗಿಯೂ ವಿಹಾರಿ ಸ್ಥಾನದಲ್ಲಿ ಜಡೇಜಾ ಆಡುತ್ತಾರೆ. ಮೆಲ್ಬರ್ನ್ ಮೈದಾನದಲ್ಲಿ ಐವರು ಬೌಲರ್ಗಳನ್ನು ಆಡಿಸುವ ಅವಕಾಶ ನಮಗೆ ಲಭ್ಯವಾಗುತ್ತದೆ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಡಿಲೇಡ್ ಮೈದಾನದಲ್ಲಿ ಟೀಮ್ ಇಂಡಿಯಾ
ಏತನ್ಮಧ್ಯೆ, ಮಂಗಳವಾರದಂದು ಭಾರತಕ್ಕೆ ವಾಪಸ್ಸಾಗಲಿರುವ ವಿರಾಟ್ ಕೊಹ್ಲಿ ಇಂದು ಭಾರತೀಯ ಆಟಗಾರರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದರೆಂದು ಗೊತ್ತಾಗಿದೆ. ಮಳೆಯ ಕಾರಣ ಭಾರತದ ಆಟಗಾರರು ಅಭ್ಯಾಸಕ್ಕಾಗಿ ತೆರಳದೆ ತಮ್ಮ ರೂಮುಗಳಲ್ಲಿ ಉಳಿದುಬಿಟ್ಟಿದ್ದರು.
Published On - 9:06 pm, Mon, 21 December 20