IND vs SA: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ
India vs South Africa 4th T20 Cancelled:ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಲಕ್ನೋದಲ್ಲಿ ರದ್ದಾಗಿದೆ. ಹವಾಮಾನ ವೈಪರಿತ್ಯ, ದಟ್ಟ ಮಂಜು ಕ್ರೀಡಾಂಗಣವನ್ನು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದರು. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯ ಟಾಸ್ ಕೂಡ ನಡೆಯದೆ ಸ್ಥಗಿತಗೊಂಡಿತು. ಇದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಭಾರೀ ಮುಸುಕು ಹಾಗೂ ದಟ್ಟ ಮಂಜು ಮೈದಾನದ ತುಂಬಾ ಹರಡಿದ್ದರಿಂದ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಪಂದ್ಯ ಟಾಸ್ ಕೂಡ ನಡೆಯದೆ ರದ್ದಾಗಿದೆ. ವಾಸ್ತವವಾಗಿ ಪೂರ್ವನಿಗದಿಯಂತೆ ಈ ನಾಲ್ಕನೇ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆ ಬಳಿಕ ಸಂಜೆ 7 ಗಂಟೆಗೆ ಆಟ ಆರಂಭವಾಗಬೇಕಿತ್ತು. ಆದರೆ ರಾತ್ರಿ 9:30 ರವರೆಗೂ ಕಾದರೂ ಮಂಜು ಕಡಿಮೆಯಾಗದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.
6 ಬಾರಿ ಟಾಸ್ ಮುಂದೂಡಿದ ಅಂಪೈರ್ಸ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಬೇಕಿತ್ತು. ಆ ಬಳಿಕ ಪಂದ್ಯ ಸಂಜೆ 7 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಲಕ್ನೋ ಮೈದಾನದಲ್ಲಿ ಮಂಜು ಆವರಿಸಿದರಿಂದ ಟಾಸ್ ನಡೆಯಲು ಅವಕಾಶ ನೀಡಲಿಲ್ಲ. ಪಂದ್ಯದ ಅಧಿಕಾರಿಗಳು ಬರೋಬ್ಬರಿ 6 ಬಾರಿ ಟಾಸ್ ಮುಂದೂಡಿದರು. ಆದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಮಂಜಿನ ಕಾರಣ, ಪಂದ್ಯದ ಅಧಿಕಾರಿಗಳು ಮೊದಲ ತಪಾಸಣೆಯನ್ನು ಸಂಜೆ 6:50 ಕ್ಕೆ ನಿಗದಿಪಡಿಸಿದರು. ಪರಿಸ್ಥಿತಿ ಹದಗೆಟ್ಟಂತೆ, ತಪಾಸಣೆ ಸಮಯವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ನಂತರದ ತಪಾಸಣೆಗಳನ್ನು ಸಂಜೆ 7:30 ಕ್ಕೆ, ನಂತರ ರಾತ್ರಿ 8:00, ರಾತ್ರಿ 8:30, ರಾತ್ರಿ 9:00 ಕ್ಕೆ ಮತ್ತು ಅಂತಿಮವಾಗಿ, ಅಂತಿಮ ತಪಾಸಣೆಯನ್ನು ರಾತ್ರಿ 9:25 ಕ್ಕೆ ನಡೆಸಲಾಯಿತು.
ಐಸಿಸಿ ನಿಯಮಗಳ ಪ್ರಕಾರ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯವನ್ನು ತಲಾ ಐದು ಓವರ್ಗಳಾದರೂ ಆಡಿಸಬೇಕಾದರೆ, ಪಂದ್ಯ ರಾತ್ರಿ 9:46 ರೊಳಗೆ ಆರಂಭವಾಗಬೇಕಿತ್ತು. ಆದರೆ ರಾತ್ರಿ 9:25 ಕ್ಕೆ ಅಂಪೈರ್ಗಳು ಪರಿಶೀಲಿಸಿದಾಗ ಮೈದಾನ ಆಟಕ್ಕೆ ಸೂಕ್ತವಾಗಿರದ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.
IND vs SA: ಟಿ20 ಸರಣಿಯಿಂದ ಹೊರಬಿದ್ದ ಶುಭ್ಮನ್ ಗಿಲ್! ಇಂಜುರಿಯೋ, ಉದ್ದೇಶಪೂರ್ವಕವೋ?
ಅಜೇಯ ಓಟ ಮುಂದುವರೆಸಿದ ಭಾರತ
4ನೇ ಟಿ20 ಪಂದ್ಯ ರದ್ದಾಗಿರುವುದರಿಂದ ಭಾರತ ತಂಡ ಸರಣಿ ಸೋಲುವ ಆತಂಕದಿಂದ ಹೊರಬಂದಿದೆ. ಈ ಸರಣಿಯಲ್ಲಿ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿರುವ ಸೂರ್ಯ ಪಡೆ, ಕೊನೆಯ ಪಂದ್ಯವನ್ನು ಗೆದ್ದರೆ, ಸರಣಿ 3-1 ಅಂತರದಿಂದ ಭಾರತದ ಪಾಲಾಗಲಿದೆ. ಒಂದು ವೇಳೆ ಸೋತರೆ ಸರಣಿ 2-2 ರಿಂದ ಅಂತ್ಯವಾಗಲಿದೆ.ಈ ಮೂಲಕ ಭಾರತ ಸತತ 11 ಸರಣಿಗಳ ಅಜೇಯ ಓಟವನ್ನು ಭಾರತ ಮುಂದುವರೆಸಲಿದೆ.
Published On - 9:37 pm, Wed, 17 December 25
