Rahul Dravid: ನಾನು ನಿರುದ್ಯೋಗಿ, ಕೆಲಸ ಇದ್ರೆ ತಿಳಿಸಿ: ರಾಹುಲ್ ದ್ರಾವಿಡ್

Rahul Dravid: ವಿಶ್ವಕಪ್ ಗೆಲ್ಲಬೇಕೆಂಬ ರಾಹುಲ್ ದ್ರಾವಿಡ್ ಅವರ ಬಹುದೊಡ್ಡ ಕನಸು ಕೊನೆಗೂ ಈಡೇರಿದೆ. ಈ ಹಿಂದೆ ಭಾರತದ ಪರ ವಿಶ್ವಕಪ್​ ಟೂರ್ನಿಗಳನ್ನು ಆಡಿದರೂ ದ್ರಾವಿಡ್ ಅವರಿಗೆ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ರಾಹುಲ್ ದ್ರಾವಿಡ್ ಕೋಚ್ ಆಗಿ ತಮ್ಮ ವಿಶ್ವಕಪ್ ಗೆಲ್ಲುವ ಕನಸನ್ನು ಈಡೇರಿಸಿಕೊಂಡಿದ್ದಾರೆ.

Rahul Dravid: ನಾನು ನಿರುದ್ಯೋಗಿ, ಕೆಲಸ ಇದ್ರೆ ತಿಳಿಸಿ: ರಾಹುಲ್ ದ್ರಾವಿಡ್
Rahul Dravid

Updated on: Jul 02, 2024 | 10:09 AM

ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಾರ್ಯಾವಧಿ ಮುಗಿದಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ದ್ರಾವಿಡ್ ಕೋಚ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ವಿವಿಎಸ್​ ಲಕ್ಷ್ಮಣ್ ಅವರನ್ನು ತಾತ್ಕಾಲಿಕ ಕೋಚ್ ಆಗಿ ನೇಮಿಸಲಾಗಿದೆ.

ಹಾಗೆಯೇ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ನೂತನ ಕೋಚ್ ಅನ್ನು ಘೋಷಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ. ಅತ್ತ ಟೀಮ್ ಇಂಡಿಯಾ ಕೋಚ್ ರೇಸ್​ನಲ್ಲಿ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಭಾರತ ತಂಡದ ತರಬೇತುದಾರನಾಗಿ ಗೌತಿ ಹೊಸ ಇನಿಂಗ್ಸ್ ಆರಂಭಿಸಿದರೂ ಅಚ್ಚರಿಪಡಬೇಕಿಲ್ಲ.

ಇತ್ತ ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದಿರುವ ರಾಹುಲ್ ದ್ರಾವಿಡ್ ಅವರಿಗೆ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಏನಾದರು ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದೀಗ ರಾಹುಲ್ ದ್ರಾವಿಡ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ದ್ರಾವಿಡ್​ಗೆ ಗೆಲುವಿನ ಬೀಳ್ಕೊಡುಗೆ:

ಬಾರ್ಬಡೋಸ್​ನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ರನ್​ಗಳ ರೋಚಕ ಜಯ ಸಾಧಿಸಿ ವಿಶ್ವಕಪ್ ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (76) ಅಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದ ನೆರವಿನಿಂದ ಭಾರತ ತಂಡವು 20 ಓವರ್​ಗಳಲ್ಲಿ 176 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಪರಿಣಾಮ ಕೊನೆಯ ಓವರ್​ನಲ್ಲಿ 16 ರನ್​ಗಳು ಬೇಕಿತ್ತು. ಅಂತಿಮ ಓವರ್ ಎಸೆದ ಹಾರ್ದಿಕ್ ಪಾಂಡ್ಯ ಕೇವಲ 8 ರನ್ ನೀಡುವ ಮೂಲಕ ಸೌತ್ ಆಪ್ರಿಕಾ ತಂಡವನ್ನು 169 ರನ್​ಗಳಿಗೆ ನಿಯಂತ್ರಿಸಿದರು. ಈ ಮೂಲಕ ಭಾರತ ತಂಡವು 7 ರನ್​ಗಳ ಜಯ ಸಾಧಿಸಿತು.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಪಾಲಿಗೆ ಮರೀಚಿಕೆಯಾಗಿರುವ 2 ಟ್ರೋಫಿ

ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಆಟಗಾರರು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅಭೂತಪೂರ್ವ ಬೀಳ್ಕೊಡುಗೆ ನೀಡಿದ್ದಾರೆ. ಇದರೊಂದಿಗೆ ದ್ರಾವಿಡ್ ಅವರ ಕೋಚಿಂಗ್ ಕೆರಿಯರ್ ಕೂಡ ಅಂತ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಅವರು ಬಿಸಿಸಿಐ ಜೊತೆ ಕೈ ಜೋಡಿಸಲಿದ್ದಾರಾ ಕಾದು ನೋಡಬೇಕಿದೆ.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us