
ಭಾರತ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ನಲ್ಲಿ ಇಂದು ಶ್ರೀಲಂಕಾ (India vs Sri Lanka) ವಿರುದ್ಧ ತನ್ನ ಏಳನೇ ಪಂದ್ಯವನ್ನು ಆಡಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಈಗಾಗಲೇ ಈ ಮ್ಯಾಚ್ಗಾಗಿ ಟೀಮ್ ಇಂಡಿಯಾ ಆಟಗಾರರು ಮುಂಬೈ ತಲುಪಿದ್ದು, ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ, ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ವಿಭಿನ್ನ ರೂಪತಾಳಿ ಕ್ಯಾಮೆರಾ ಹಿಡಿದುಕೊಂಡು ಮುಂಬೈ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸೂರ್ಯಕುಮಾರ್ ಅವರು ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಮುಂಬೈ ಜನರ ಮನಸ್ಥಿತಿಯನ್ನು ತಿಳಿದುಕೊಳ್ಳಲು ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಸಾಮಾಜಿಕ ತಾಣಗಳಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ಸೂರ್ಯಕುಮಾರ್ ಈ ಬಾರಿಯ ವಿಶ್ವಕಪ್ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಕಣಕ್ಕಿಳಿದಿದ್ದಾರೆ. ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯಗಳನ್ನು ಆಡಿದ್ದಾರೆ. ಇದರ ನಡುವೆ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಸೂರ್ಯ ಗುರುತು ಸಿಗದಂತೆ ಮುಂಬೈ ಬೀದಿಗೆ ಇಳಿದು ಕ್ರಿಕೆಟ್ ಅಭಿಮಾನಿಗಳನ್ನು ಸಂದರ್ಶಿಸಿದರು. ಮಾಸ್ಕ್ ಧರಿಸಿ, ತಲೆಯನ್ನು ಟೋಪಿಯಿಂದ ಮುಚ್ಚಿಕೊಂಡಿದ್ದರಿಂದ ಸೂರ್ಯ ಗುರುತು ಯಾರಿಗೂ ಸಿಗಲಿಲ್ಲ.
2 ಪಂದ್ಯಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಲಭ್ಯ..!
ಸೂರ್ಯ ನಡೆಸಿದ ಸಂದರ್ಶನದಲ್ಲಿ ಭಾರತದ ಪ್ರದರ್ಶನವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಜೊತೆಗೆ ಸೂರ್ಯಕುಮಾರ್ ಆಟದ ಬಗ್ಗೆಯೂ ಅಭಿಮಾನಿಗಳು ಮಾತನಾಡಿದ್ದಾರೆ. ಸಾಮಾನ್ಯವಾಗಿ ಫಿನಿಶರ್ ಪಾತ್ರವನ್ನು ನಿರ್ವಹಿಸುವ ಸೂರ್ಯಕುಮಾರ್, ಇನ್ನೂ ಬೇಗನೆ ಬ್ಯಾಟಿಂಗ್ಗೆ ಬರಬೇಕು ಎಂದು ಫ್ಯಾನ್ಸ್ ಹೇಳಿದ್ದಾರೆ. “ಸೂರ್ಯ ಇನ್ನೂ ಸ್ವಲ್ಪ ಬೇಗನೆ ಬ್ಯಾಟ್ ಮಾಡಲು ಬರಬೇಕು, ಅವರು ಈಗ ಐದು/6 ನೇ ಸ್ಥಾನದಲ್ಲಿ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಆಡಲು ಸಾಕಷ್ಟು ಚೆಂಡುಗಳು ಸಿಗುತ್ತಿಲ್ಲ. ಅವರು ತಮ್ಮ ಆಟವನ್ನು ಸುಧಾರಿಸಲು ಬೇಗನೆ ಬ್ಯಾಟ್ ಮಾಡಲು ಬರಬೇಕು,” ಎಂದಿದ್ದಾರೆ.
ಅಭಿಮಾನಿ ತಮ್ಮ ಅಭಿಪ್ರಾಯವನ್ನು ಹೇಳಿ ಮುಗಿಸಿದ ತಕ್ಷಣ, ಸೂರ್ಯ ತನ್ನ ಕ್ಯಾಪ್ ಮತ್ತು ಮಾಸ್ಕ್ ತೆಗೆದು, “ಧನ್ಯವಾದಗಳು, ನಾನು ಸೂರ್ಯಕುಮಾರ್ ಯಾದವ್” ಎಂದು ಹೇಳಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಖುಷಿಯಾಗಿದ್ದು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ