ಮತ್ತೊಮ್ಮೆ ನೀನು ಹಾಗೆ ಮಾಡಿದರೆ ನನ್ನ ಎಸೆತ ನೇರ ನಿನ್ನ ತಲೆಗೆ ಬೀಳಬಹುದು! ಅಖ್ತರ್ ಕುತಂತ್ರ ನೆನೆದ ಉತ್ತಪ್ಪ

ರಾಬಿನ್ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ ಮತ್ತು ನೀವು ನನ್ನ ಎಸೆತಗಳನ್ನು ಸರಿಯಾಗಿಯೇ ದಂಡಿಸಿದ್ದೀರಿ. ಆದರೆ ಮುಂದಿನ ಬಾರಿ ನೀವು ಹಾಗೆ ಮಾಡಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ.

ಮತ್ತೊಮ್ಮೆ ನೀನು ಹಾಗೆ ಮಾಡಿದರೆ ನನ್ನ ಎಸೆತ ನೇರ ನಿನ್ನ ತಲೆಗೆ ಬೀಳಬಹುದು! ಅಖ್ತರ್ ಕುತಂತ್ರ ನೆನೆದ ಉತ್ತಪ್ಪ
ಶೋಯೆಬ್ ಅಖ್ತರ್

Updated on: May 16, 2021 | 5:47 PM

ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ತನ್ನ ಎದುರಾಳಿಗಳಲ್ಲಿ ನಡುಕವನ್ನುಂಟು ಮಾಡುವ ಆಟಗಾರನೆಂದು ಎಲ್ಲರಿಗು ಗೊತ್ತಿರುವ ವಿಚಾರವೆ. ರಾವಲ್ಪಿಂಡಿ ಎಕ್ಸ್​ಪ್ರೆಸ್ ಎಂದು ಕರೆಯಲ್ಪಡುವ ಈ ಬೌಲರ್, ಬ್ಯಾಟ್ಸ್‌ಮನ್​ಗಳಿಗೆ ಹಲವು ಬಾರಿ ತಮ್ಮ ಘಾತಕ ವೇಗದ ಮೂಲಕ ಭಯವನ್ನುಂಟು ಮಾಡುತ್ತಿದ್ದರು. ಜೊತೆಗೆ ಶೋಯೆಬ್ ಅಖ್ತರ್ ಅವರ ಬೌನ್ಸರ್ ಎಷ್ಟು ಅಪಾಯಕಾರಿ ಆಗಿರುತ್ತಿತ್ತೆಂದರೆ ಅದರ ಸಹಾಯದಿಂದ ಅವರು ಅನೇಕ ಆಟಗಾರರನ್ನು ಗಾಯಗೊಳಿಸಿದ್ದರು. ಈ ಭಯಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಒಳಗಾಗಿದ್ದರು. ಈ ವಿಚಾರವನ್ನು ಇತ್ತೀಚೆಗೆ ಉತ್ತಪ್ಪ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೋಯೆಬ್ ಅಖ್ತರ್ ಪಂದ್ಯದ ಸಮಯದಲ್ಲಿ ಹೇಗೆ ಬೆದರಿಕೆ ಹಾಕಿದ್ದರೆಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನಡೆದ ಘಟನೆಯನ್ನು ರಾಬಿನ್ ಯೂಟ್ಯೂಬ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ರಾಬಿನ್​ಗೆ ಅಖ್ತರ್ ಹೇಗೆ ಬೆದರಿಕೆ ಹಾಕಿದ್ದರು ಎಂಬುದನ್ನು ವಿವರಿಸಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನದ ತಂಡ ಭಾರತ ಪ್ರವಾಸದಲ್ಲಿತ್ತು. ಈ ಪಂದ್ಯವನ್ನು ಎರಡೂ ತಂಡಗಳು ಗುವಾಹಟಿಯಲ್ಲಿ ಆಡುತ್ತಿದ್ದವು. ಭಾರತ ಗೆಲ್ಲಲು 25 ಎಸೆತಗಳಲ್ಲಿ 12 ರನ್ ಗಳಿಸಬೇಕಿತ್ತು. ಈ ವೇಳೆ ರಾಬಿನ್ ಮತ್ತು ಇರ್ಫಾನ್ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದರು.

ಶೋಯೆಬ್ ಎಸೆತದಿಂದ ರಾಬಿನ್ ಆಘಾತ
ನನಗೆ ತುಂಬಾ ಚೆನ್ನಾಗಿ ನೆನಪಿದೆ, ನಾನು ಬ್ಯಾಟಿಂಗ್ ಮಾಡುವಾಗ ಶೋಯೆಬ್ ನನಗೆ ಯಾರ್ಕರ್ ಅನ್ನು ಎಸೆದರು, ಅದರೆ ಆ ಎಸೆತವನ್ನು ದಂಡಿಸುವಲ್ಲಿ ನಾನು ವಿಫಲನಾದೆ. ಆದರೆ ಆ ಚೆಂಡನ್ನು ಅಲ್ಲಿಯೇ ಡಿಫೆಂಡ್ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೆ. ಆ ಚೆಂಡಿನ ವೇಗ ಗಂಟೆಗೆ 154 ಕಿಲೋಮೀಟರ್ ಆಗಿತ್ತು. ಇದರ ನಂತರ, ನಾನು ಅವರ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದೆ. ನಂತರ ನಮಗೆ ಗೆಲ್ಲಲು 3 ಅಥವಾ 4 ರನ್ಗಳು ಬೇಕಾಗಿದ್ದವು. ಅಖ್ತರ್ ಎಸೆದ ಮುಂದಿನ ಎಸೆತವನ್ನು ನಾನು ಬೌಂಡರಿ ಬಾರಿಸಿದ್ದೆ. ಈ ಮೂಲಕ ತಂಡಕ್ಕೆ ಗೆಲುವು ಸಹ ಸಿಕ್ಕಿತ್ತು.

ರಾಬಿನ್‌ಗೆ ಬೆದರಿಕೆ ಹಾಕಿದ ಶೋಯೆಬ್
ಪಂದ್ಯದ ನಂತರ ತಂಡ ಹೋಟೆಲ್‌ಗೆ ಮರಳಿತು. ಮುಂದಿನ ಪಂದ್ಯ ಗ್ವಾಲಿಯರ್‌ನಲ್ಲಿತ್ತು. ಹೋಟೆಲ್​ನಲ್ಲಿ ಊಟದ ವೇಳೆ ರಾಬಿನ್ ಬಳಿಗೆ ಹೋದ ಶೋಯೆಬ್ ಅಖ್ತರ್, ರಾಬಿನ್ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ ಮತ್ತು ನೀವು ನನ್ನ ಎಸೆತಗಳನ್ನು ಸರಿಯಾಗಿಯೇ ದಂಡಿಸಿದ್ದೀರಿ. ಆದರೆ ಮುಂದಿನ ಬಾರಿ ನೀವು ಹಾಗೆ ಮಾಡಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ನೀವು ವಿಕೆಟ್​ನಿಂದ ಮುಂದೆ ಬಂದು ಆಡಿದರೆ, ನಾನು ಚೆಂಡನ್ನು ನೇರವಾಗಿ ನಿಮ್ಮ ತಲೆಯ ಮೇಲೆ ಎಸೆಯಬಹುದು ಎಂದು ಎಚ್ಚರಿಸಿದರಂತೆ. ಆದರಿಂದ ಈ ಘಟನೆಯ ನಂತರ ನಾನು ಅವರ ವಿರುದ್ಧ ವಿಕೆಟ್​ನಿಂದ ಮುಂದೆ ಆಡುವುದನ್ನು ನಿಲ್ಲಿಸಿದೆ ಎಂದು ಉತ್ತಪ್ಪ ಹೇಳಿದರು.

ಇದನ್ನೂ ಓದಿ:ಫೈನಲ್​ ಆಡುವುದು ನಾವು, ನಿಮ್ಮ ಕುಟುಂಬದವರಿಗ್ಯಾಕೆ ಟಿಕೆಟ್?​ ಕುಚೇಷ್ಟೆ ಮಾಡಿದ್ದ ಅಖ್ತರ್​ಗೆ, ಬಜ್ಜಿ ನೀಡಿದ್ರು ಮಾತಿನ ಚಡಿ ಏಟು!

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us