
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಭಾರತದ ಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಹಿಟ್ಮ್ಯಾನ್ ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸಿದ್ದರು. ಇದೇ ವೇಳೆ ಅವರು ಧ್ವಜವನ್ನು ನೆಡಲು ಪ್ರಯತ್ನಿಸಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ಅದೇ ಫೋಟೋವನ್ನು ರೋಹಿತ್ ಶರ್ಮಾ ತಮ್ಮ ಎಕ್ಸ್ ಖಾತೆಯ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ವಿವಾದ ಶುರುವಾಗಿದ್ದು, ಟೀಮ್ ಇಂಡಿಯಾ ನಾಯಕನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ರೋಹಿತ್ ಅವರ ಪ್ರೊಫೈಲ್ ಚಿತ್ರದಲ್ಲಿ ಭಾರತದ ತ್ರಿವರ್ಣ ಧ್ವಜವು ನೆಲವನ್ನು ಸ್ಪರ್ಶಿಸುತ್ತಿರುವುದು ಕಾಣಬಹುದು. ಇದು ಭಾರತಕ್ಕೆ ಮಾಡಿದ ಅವಮಾನ. ಏಕೆಂದರೆ 1971ರ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯಿದೆಯ ಪ್ರಕಾರ, "ಧ್ವಜವನ್ನು ಉದ್ದೇಶಪೂರ್ವಕವಾಗಿ ನೆಲ ಅಥವಾ ನೀರಿನಲ್ಲಿ ಸ್ಪರ್ಶಿಸುವಂತೆ ಬಳಸುವಂತಿಲ್ಲ" ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಭಾರತದ ಧ್ವಜವು ನೆಲವನ್ನು ಮುಟ್ಟಬಾರದು ಎಂಬುದು ಸರಳ ಕಾನೂನು! ಇದು ಕೂಡ ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ತಿಳಿದಿಲ್ಲವೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ರೋಹಿತ್ ಶರ್ಮಾ ಎಚ್ಚರವಹಿಸಬೇಕೆಂದು ಕೆಲವರು ಕಿವಿಮಾತು ಹೇಳಿದ್ದಾರೆ.

ಒಟ್ಟಿನಲ್ಲಿ ರೋಹಿತ್ ಶರ್ಮಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ತ್ರಿವರ್ಣ ಧ್ವಜವು ನೆಲಕ್ಕೆ ತಾಗಿರುವುದು ಸ್ಪಷ್ಟ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ನಾಯಕನ ವಿರುದ್ಧ ಇದೀಗ ಅನೇಕರು ಅಸಮಾಧಾನ ಹೊರಹಾಕಿದ್ದು, ರಾಷ್ಟ್ರ ಧ್ವಜವನ್ನು ಗೌರವಿಸುವಂತೆ ತಿಳಿಸಿದ್ದಾರೆ. ಅಲ್ಲದೆ ಕೂಡಲೇ ತಮ್ಮ ಪ್ರೊಫೈಲ್ ಪಿಕ್ಚರ್ನಿಂದ ಆ ಫೋಟೋವನ್ನು ತೆಗೆದು ಹಾಕುವಂತೆ ಸೂಚಿಸಿದ್ದಾರೆ.