ಒಲಿಂಪಿಕ್ಸ್​ ಪದಕ ವಿಜೇತರಿಗೆ 42 ಕೋಟಿ ರೂ. ನಗದು ಬಹುಮಾನ ವಿತರಿಸಿದ ಉತ್ತರ ಪ್ರದೇಶ ಸರ್ಕಾರ

ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ 2 ಕೋಟಿ ನಗದು ಬಹುಮಾನ ನೀಡಲಾಯಿತು. ಬೆಳ್ಳಿ ಪದಕ ವಿಜೇತ ರವಿ ದಹಿಯಾ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ತಲಾ 1.5 ಕೋಟಿ ರೂ. ಬಹುಮಾನ ನೀಡಿತು.

ಒಲಿಂಪಿಕ್ಸ್​ ಪದಕ ವಿಜೇತರಿಗೆ 42 ಕೋಟಿ ರೂ. ನಗದು ಬಹುಮಾನ ವಿತರಿಸಿದ ಉತ್ತರ ಪ್ರದೇಶ ಸರ್ಕಾರ
ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತರು
Edited By:

Updated on: Aug 20, 2021 | 6:21 PM

ಭಾರತೀಯ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತಕ್ಕೆ ಮರಳಿದ್ದಾರೆ. ಅವರು ಬಂದ ದಿನದಿಂದ ವಿವಿಧ ಸ್ಥಳಗಳಲ್ಲಿ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಪ್ರಧಾನಿ, ಕ್ರೀಡಾ ಸಚಿವರು, ಕೆಲವು ರಾಜ್ಯಗಳು ಅವರನ್ನು ಗೌರವಿಸಿದ ನಂತರ, ಈಗ ಉತ್ತರ ಪ್ರದೇಶ ಸರ್ಕಾರವು ಗುರುವಾರ ಪದಕ ವಿಜೇತರಿಗೆ ಬಹುಮಾನಗಳ ಮಳೆ ಸುರಿಸಿತು. ರಾಜಧಾನಿ ಲಕ್ನೋದಲ್ಲಿ ಯುಪಿ ಸರ್ಕಾರವು ಪದಕ ವಿಜೇತರನ್ನು ಗೌರವಿಸಲು ಭವ್ಯ ಸಮಾರಂಭವನ್ನು ನಡೆಸಿತು.

ಅಟಲ್ ಬಿಹಾರಿ ವಾಜಪೇಯಿ ಇಕಾನ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ 2 ಕೋಟಿ ನಗದು ಬಹುಮಾನ ನೀಡಲಾಯಿತು. ಬೆಳ್ಳಿ ಪದಕ ವಿಜೇತ ರವಿ ದಹಿಯಾ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ತಲಾ 1.5 ಕೋಟಿ ರೂ. ಕಂಚಿನ ಪದಕ ವಿಜೇತ ಪಿವಿ ಸಿಂಧು, ಬಾಕ್ಸರ್ ಲೊವೆಲಿನಾ ಬೊರ್ಗೊಹೆನ್ ಮತ್ತು ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ತಲಾ 1 ಕೋಟಿ ರೂ. ಜೊತೆಗೆ, 41 ವರ್ಷಗಳ ನಂತರ, ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೆ 1 ಕೋಟಿ ನಗದು ಬಹುಮಾನ ನೀಡಲಾಯಿತು. ಭಾರತ ನಿಧಾನವಾಗಿ ಕ್ರೀಡಾಶಕ್ತಿಯಾಗುತ್ತಿದೆ ಎಂದು ಭಾರತೀಯ ಒಲಿಂಪಿಕ್ ತಂಡದ ಅಧ್ಯಕ್ಷ ನರೇಂದ್ರ ಬಾತ್ರಾ ಪ್ರತಿಕ್ರಿಯಿಸಿದ್ದಾರೆ.

ನಾಲ್ಕನೇ ಸ್ಥಾನ ಪಡೆದ ಆಟಗಾರರಿಗೂ ಬಹುಮಾನ
ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ರೂ .50 ಲಕ್ಷ ಬಹುಮಾನ ನೀಡಲಾಯಿತು. ಕುಸ್ತಿಪಟುಗಳಾದ ದೀಪಕ್ ಪುನಿಯಾ ಮತ್ತು ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಕೂಡ ಕಂಚನ್ನು ಕಳೆದುಕೊಂಡರು, ಆದರೆ ಅವರು ನಾಲ್ಕನೇ ಸ್ಥಾನಕ್ಕೆ ತಲುಪಿದರಿಂದ ಅವರಿಗೂ ತಲಾ 50 ಲಕ್ಷ ರೂ. ಬಹುಮಾನ ನೀಡಲಾಯಿತು. ಇದಲ್ಲದೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಉತ್ತರ ಪ್ರದೇಶದ 10 ಕ್ರೀಡಾಪಟುಗಳಿಗೆ ಸರ್ಕಾರ ತಲಾ 25 ಲಕ್ಷ ರೂ. ಬಹುಮಾನ ನೀಡಲಾಯಿತು.