ಚಾಮರಾಜನಗರ ಅಣ್ಣೂರುಕೇರಿಯಲ್ಲಿ ಮಾರಿ ಹಬ್ಬದ ವೇಳೆ 100ಕ್ಕೂ ಹೆಚ್ಚು ಕುರಿಗಳ ಬಲಿ: ರಕ್ತ ಹೀರಿದ ಅರ್ಚಕ, ಭಯಾನಕ ವಿಡಿಯೋ ವೈರಲ್
ಚಾಮರಾಜನಗರ ಅಣ್ಣೂರುಕೇರಿಯಲ್ಲಿ ಮಾರಿ ಹಬ್ಬದ ವೇಳೆ 100ಕ್ಕೂ ಹೆಚ್ಚು ಕುರಿಗಳ ಬಲಿ ಕೊಟ್ಟಿದ್ದಲ್ಲದೆ, ಕುರಿಗಳ ಕತ್ತು ಕುಯ್ದಾಗ ಬರುವ ರಕ್ತವನ್ನು ಅರ್ಚಕ ಹೀರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಇಂತಹ ಆಚರಣೆಗಳ ಬಗ್ಗೆ ಸಾಮಾಜಿಕ ವಲಯದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಚಾಮರಾಜನಗರ, ಮಾರ್ಚ್ 7: ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ (Gundlupet) ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಮಾರಿ ಹಬ್ಬದ ವೇಳೆ ವಿಚಿತ್ರ ಹಾಗೂ ಭಯಾನಕ ಆಚರಣೆ ನಡೆದಿರುವುದು ಬೆಳಕಿಗೆ ಬಂದಿದೆ. ದೇವಿಯ ಜಾತ್ರೆ ಸಂದರ್ಭದಲ್ಲಿ ಗ್ರಾಮಸ್ಥರು ಹರಕೆ ತೀರಿಸುವ ಸಲುವಾಗಿ 100ಕ್ಕೂ ಹೆಚ್ಚು ಕುರಿಗಳನ್ನು ಬಲಿ ನೀಡಿದ್ದಾರೆ. ಗ್ರಾಮದಲ್ಲಿರುವ ದೊಡ್ಡಮ್ಮ ತಾಯಿ ದೇವಿಯ ಮಾರಿ ಹಬ್ಬದ ಅಂಗವಾಗಿ ಈ ಆಚರಣೆ ನಡೆಯುತ್ತದೆ ಎಂದು ತಿಳಿದುಬಂದಿದೆ. ಹಬ್ಬದ ಸಂದರ್ಭದಲ್ಲಿ ಹರಕೆ ಹೊತ್ತಿರುವ ಗ್ರಾಮಸ್ಥರು ತಮ್ಮ ಕುರಿಗಳನ್ನು ಬಲಿಯಾಗಿ ಅರ್ಪಿಸುತ್ತಾರೆ. ಕುರಿಗಳ ಕತ್ತು ಸೀಳಿ ಹರಿಯುವ ರಕ್ತವನ್ನು ಅರ್ಚಕ ಕುಡಿಯುವ ದೃಶ್ಯಗಳು ಕೂಡ ಕಂಡುಬಂದಿವೆ.
ಕುರಿಗಳ ಕತ್ತು ಸೀಳಿ ಹೊರಬರುವ ರಕ್ತವನ್ನು ಅರ್ಚಕ ಮಾದಶೆಟ್ಟಿ ಎನ್ನುವವರು ನೇರವಾಗಿ ಹೀರಿಕೊಳ್ಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಪ್ರತಿವರ್ಷ ಮಾರಿ ಹಬ್ಬದ ಸಂದರ್ಭದಲ್ಲಿ ಇದೇ ರೀತಿಯ ಆಚರಣೆ ನಡೆಯುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಭಯಾನಕ ವಿಡಿಯೋ ತುಣುಕಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗ್ರಾಮದಲ್ಲಿ ಪೀಳಿಗೆಯಿಂದಲೂ ನಡೆಯುತ್ತಿರುವ ಈ ಆಚರಣೆ ಬಗ್ಗೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದನ್ನು ದೇವಿಯ ಆರಾಧನೆಯ ಭಾಗವೆಂದು ಸಮರ್ಥಿಸಿಕೊಂಡಿದ್ದಾರೆ.