ಬೆಳಗಾವಿ, ಜುಲೈ 09: ಪಶ್ಚಿಮ ಘಟ್ಟ (Western Ghats) ಪ್ರದೇಶದಲ್ಲಿ ಮುಂದುವರಿದ ಮಳೆಯ (Rain) ಅಬ್ಬರ ಮುಂದುವರೆದಿದೆ. ಒಂದೇ ವಾರದಲ್ಲಿ ಬೆಳಗಾವಿ (Belagavi) ಜಿಲ್ಲೆಯಲ್ಲಿ 24 ಮನೆಗಳಿಗೆ ಹಾನಿಯಾಗಿದೆ. ಖಾನಾಪುರ (Khanapur) ತಾಲೂಕಿನ ಗ್ರಾಮೀಣ ಹೋಬಳಿಯಲ್ಲಿ 12 ಮನೆ, ಜಾಂಬೋಟಿ ಹೋಬಳಿಯಲ್ಲಿ 4 ಮನೆಗಳಿಗೆ, ಬೀಡಿ ಹೋಬಳಿ ಮೂರು, ಗುಂಜಿ ಹೋಬಳಿಯಲ್ಲಿ 3 ಮನೆಗಳಿಗೆ ಹಾನಿಯಾಗಿದೆ ಎಂದು ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ ಮಾಹಿತಿ ನೀಡಿದ್ದಾರೆ. ಇನ್ನಷ್ಟು ಮನೆಗಳು ಬೀಳುವ ಆತಂಕದಲ್ಲಿ ಗ್ರಾಮೀಣ ಭಾಗದ ಜನರು ಇದ್ದಾರೆ. ಖಾನಾಪುರದ ಮಲಪ್ರಭಾ, ಪಾಂಡ್ರಿ ನದಿಗಳಿಗೆ ಒಳಹರಿವು ಹೆಚ್ಚಳವಾಗಿದೆ.
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಒಂದೇ ವಾರದಲ್ಲಿ 10 ಟಿಎಂಸಿ ನೀರು ಹೆಚ್ಚಳವಾಗಿದೆ. ಎರಡು ಜಿಲ್ಲೆಗಳಿಗೆ ಕುಡಿಯುವ ನೀರು ಕೃಷಿಗೆ ಆಧಾರವಾಗಿರುವ ಹಿಡಿಕಲ್ ಡ್ಯಾಂಗೆ ಸದ್ಯ 21 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಸದ್ಯ 18 ಟಿಎಂಸಿ ಭರ್ತಿಯಾಗಿದೆ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರಲ್ಲಿ ಸಂತಸ ಮೂಡಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಸೊಲ್ಲಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಈ ರೈಲುಗಳ ಸಮಯ ಬದಲಾವಣೆ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ