ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಅಜ್ಜಯ್ಯನ ಮುಹೂರ್ತ ಫಿಕ್ಸ್!: ಜಾತಕದ ಆಧಾರದ ಮೇಲೆ ದಿನಾಂಕ ನಿಗದಿ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ರಾಜಕೀಯ ಗುರುಗಳಾದ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ಆದೇಶದಂತೆ ಈ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಅಜ್ಜಯ್ಯ ಪೀಠದ ಶ್ರೀಗಳು ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಜಾತಕ ಪರಿಶೀಲಿಸಿ, ಜೂನ್ 3 ಅತ್ಯಂತ ಶ್ರೇಷ್ಠ ಹಾಗೂ ವಿಜಯದಾಯಕ ಮುಹೂರ್ತ ಎಂದು ತಿಳಿಸಿದ್ದಾರೆ. ಈ ನಿರ್ಧಾರ ಡಿಕೆಶಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಬೆಂಗಳೂರು, ಮೇ.30 : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಕೊನೆಗೂ ದಿನಾಂಕ ಮತ್ತು ಶುಭ ಮುಹೂರ್ತ ನಿಗದಿಯಾಗಿದೆ. ತಮ್ಮ ಪ್ರತಿಯೊಂದು ರಾಜಕೀಯ ಹೆಜ್ಜೆಯಲ್ಲೂ ಆರಾಧ್ಯ ದೈವವಾಗಿ ನಂಬಿರುವ ತುಮಕೂರು ಜಿಲ್ಲೆಯ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ಆದೇಶದಂತೆ, ಜೂನ್ 3ರಂದು (ಬುಧವಾರ) ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜಕೀಯ ವಲಯದಲ್ಲಿ ಈ ಮುನ್ನ ಮೇ 31 ಅಥವಾ ಜೂನ್ 1ರಂದು ಪ್ರಮಾಣ ವಚನ ನಡೆಯಲಿದೆ ಎಂಬ ಚರ್ಚೆಗಳಿದ್ದವು. ಆದರೆ, ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಜಾತಕ ಮತ್ತು ಗ್ರಹಗತಿಗಳ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಅಜ್ಜಯ್ಯನ ಪೀಠದ ಶ್ರೀಗಳು, ಜೂನ್ 3ರ ಬುಧವಾರದಂದು ಅತ್ಯಂತ ಶ್ರೇಷ್ಠ ಹಾಗೂ ವಿಜಯದಾಯಕ ಮುಹೂರ್ತವಿದೆ ಎಂದು ತಿಳಿಸಿದ್ದಾರೆ. ಅಜ್ಜಯ್ಯನವರ ವಾಕ್ಯ ಹಾಗೂ ಪೀಠದ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುವ ಡಿಕೆಶಿ, ಇದೇ ದಿನಾಂಕವನ್ನು ಅಂತಿಮಗೊಳಿಸುವಂತೆ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಅಜ್ಜಯ್ಯನವರ ಪೀಠದ ಪರಮ ಭಕ್ತರಾಗಿದ್ದು, ವಿಧಾನಸಭಾ ಚುನಾವಣೆ, ಸಿಎಂ ರೇಸ್ ಹಾಗೂ ಇತ್ತೀಚಿನ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲೂ ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. “ಅಜ್ಜಯ್ಯನವರು ಹೇಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಈಗ ಅವರೇ ನೀಡಿದ ಮುಹೂರ್ತದ ಪ್ರಕಾರ ಪದಗ್ರಹಣ ನಡೆಯಲಿದೆ” ಎಂದು ಅವರ ಆಪ್ತ ವಲಯದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜಭವನದಲ್ಲಿ ದಿನಾಂಕದ ಅಧಿಕೃತ ಪ್ರಕಟಣೆಯ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಜೂನ್ 3ರ ಮಹೂರ್ತದ ಸುದ್ದಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಸಡಗರ ತಂದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
