ವಾಯುಭಾರ ಕುಸಿತದಿಂದ ಅರಬ್ಬೀ ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳಿಂದ ಕಡಲ್ಕೊರೆತ, ಜನರಲ್ಲಿ ಭೀತಿ

Updated on: Jul 20, 2024 | 12:03 PM

ಹವಾಮಾನ ವೈಪ್ಯರೀತದಿಂದಾಗಿ ಅರಬ್ಬೀ ಸಮುದ್ರದಲ್ಲಿ ಸುಮಾರು 5 ಮೀಟರ್ ಗಾತ್ರದ ಅಲೆಗಳು ಏಳುತ್ತಿವೆ ಎಂದು ನಮ್ಮ ಉಡುಪಿ ವರದಿಗಾರ ಹೇಳುತ್ತಾರೆ. ಹಾಗೆಯೇ, 55-65 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆಯಂತೆ. ವಾಯುಭಾರ ಕುಸಿತದಿಂದ ಸಹಜವಾಗೇ ಮಳೆಯ ಪ್ರಮಾಣ ಹೆಚ್ಚಾಗಲಿದ್ದು ಜನರಲ್ಲಿ ಆತಂಕವೂ ದುಪ್ಪಟ್ಟುಗೊಂಡಿದೆ.

ಉಡುಪಿ: ಉಡುಪಿ ಜಿಲ್ಲೆ ಮತ್ತು ಕರಾವಳಿ ಪ್ರಾಂತ್ಯದ ಜನರಿಗೆ ಡಬಲ್ ಸಂಕಷ್ಟ ಎದುರಾಗಿದೆ. ಕಳೆದ ಎರಡು ವಾರಗಳಿಂದ ಈ ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ ಮತ್ತು ಈಗ ಅರಬ್ಬೀ ಸಮುದ್ರದ ಮೇಲೆ ವಾಯಭಾರ ಕುಸಿತ ಉಂಟಾಗಿರುವುದರಿಂದ ರಾಕ್ಷಸ ಗಾತ್ರದ ಅಲೆಗಳು ಸೃಷ್ಟಿಯಾಗಿ ಕಡಲ್ಕೊರತದ ಸಮಸ್ಯೆ ಎದುರಾಗಿದೆ ಮತ್ತು ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ಕಾರಣ ತೀರದಲ್ಲಿದ್ದ ತೆಂಗಿನ ಮರಗಳು ನೆಲಕ್ಕುರುಳಿವೆ. ಕಡಲ್ಕೊರೆತವನ್ನು ತಡೆಯಲೆಂದು ನಿರ್ಮಿಸಲಾಗಿದ್ದ ತಡಗೋಡೆಗಳು ಅಲೆಗಳ ರಭಸಕ್ಕೆ ದ್ವಂಸಗೊಂಡಿವೆ. ಸಮುದ್ರದ ಪ್ರಕ್ಷುಬ್ದತೆ ತೀರದಲ್ಲಿ ವಾಸಿಸುವ ಜನರನ್ನು ಆತಂಕಕ್ಕೀಡು ಮಾಡಿದೆ. ಕಡಲ್ಕೊರತದಿಂದ ಆಗುತ್ತಿರುವ ಹಾನಿಯನ್ನು ತಡೆಯಲು ಶಾಶ್ವತ ಪರಿಹಾರದ ಯೋಜನೆ ರೂಪಿಸುವಂತೆ ಅವರು ಸರ್ಕಾರಕ್ಕೆ ನೀಡಿರುವ ಮನವಿಗಳು ಸಮುದ್ರ ಅಲೆಗಳ ಜೊತೆ ಕೊಚ್ಚಿಹೋಗಿವೆ. ಇನ್ನೂ 4-5 ದಿನಗಳ ಕಾಲ ಮಳೆ ಸುರಿಯಲಿರುವುದರಿಂದ ಸಮುದ್ರ ತೀರಕ್ಕಿರುವ ಜನ ಜಾಗ್ರತೆಯಿಂದ ಇರುವಂತೆ ಮತ್ತು ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಡಲ್ಕೊರೆತ ತಡೆಗೆ ನೈಸರ್ಗಿಕ ಪರಿಹಾರ; ಸರ್ಕಾರ ಕಂಡುಕೊಂಡಿರುವ ಹೊಸ ವಿಧಾನ ಇಲ್ಲಿದೆ ನೋಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More