Asia Cup 2025: ಅಂಪೈರ್ ನಿರ್ಧಾರವನ್ನು ಸೂರ್ಯಕುಮಾರ್ ನಿರಾಕರಿಸಿದ್ಯಾಕೆ? ವಿಡಿಯೋ ನೋಡಿ

Updated on: Sep 11, 2025 | 9:23 PM

Asia Cup 2025: 2025ರ ಏಷ್ಯಾಕಪ್‌ನಲ್ಲಿ ಭಾರತ ತಂಡ ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ 9 ವಿಕೆಟ್‌ಗಳ ಅಂತರದಿಂದ ಗೆದ್ದಿದೆ. ಯುಎಇ ತಂಡ 57 ರನ್‌ಗಳಿಗೆ ಆಲೌಟ್ ಆಗಿತು. ಭಾರತ 60 ರನ್ ಗಳಿಸಿತು. ಆದರೆ ಪಂದ್ಯದಲ್ಲೊಂದು ಮಹತ್ವದ ಘಟನೆ ನಡೆಯಿತು. ಸೂರ್ಯಕುಮಾರ್ ಯಾದವ್ ತಮ್ಮ ಕ್ರೀಡಾ ಮನೋಭಾವದಿಂದ ರನ್ ಔಟ್ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು.

2025 ರ ಏಷ್ಯಾಕಪ್‌ನಲ್ಲಿ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ, ಪ್ರಸ್ತುತ ಟೂರ್ನಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು 13.1 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ, ಭಾರತ ತಂಡವು 4.3 ಓವರ್‌ಗಳಲ್ಲಿ ಅಂದರೆ ಕೇವಲ 27 ಎಸೆತಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 60 ರನ್‌ಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಇದು ಪಂದ್ಯದ ಸಾರಾಂಶವಾದರೆ, ಇನ್ನು ಇದೇ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಕ್ರೀಡಾ ಸ್ಫೂರ್ತಿಯಿಂದ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದ ಘಟನೆಯೂ ನಡೆಯಿತು.

ಇನ್ನಿಂಗ್ಸ್​ನ 13 ನೇ ಓವರ್ ಬೌಲ್ ಮಾಡಿದ ಶಿವಂ ದುಬೆ ಓವರ್‌ನ ಮೂರನೇ ಎಸೆತದಲ್ಲಿ ಬೌನ್ಸರ್ ಎಸೆದರು. ಆದರೆ ಜುನೈದ್ ಪುಲ್ ಶಾಟ್ ಆಡಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಚೆಂಡು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕೈಗೆ ಹೋಯಿತು, ಕೂಡಲೇ ಸಂಜು ಚೆಂಡನ್ನು ನೇರವಾಗಿ ಸ್ಟಂಪ್‌ಗೆ ಹೊಡೆದರು. ಆ ಸಮಯದಲ್ಲಿ ಸ್ಟ್ರೈಕ್​​ನಲ್ಲಿದ್ದ ಜುನೈದ್ ಕ್ರೀಸ್‌ನಿಂದ ಹೊರಗಿದ್ದ ಕಾರಣ ಭಾರತ ತಂಡವು ರನ್ ಔಟ್‌ಗೆ ಮನವಿ ಮಾಡಿತು. ಮೈದಾನದಲ್ಲಿರುವ ಅಂಪೈರ್ ಈ ನಿರ್ಧಾರವನ್ನು ಮೂರನೇ ಅಂಪೈರ್‌ಗೆ ಕಳುಹಿಸಿದರು. ಮೂರನೇ ಅಂಪೈರ್ ಹಲವಾರು ಬಾರಿ ವಿಡಿಯೋವನ್ನು ವೀಕ್ಷಿಸಿ ಜುನೈದ್ ರನ್ ಔಟ್ ಎಂದು ತಮ್ಮ ನಿರ್ಧಾರವನ್ನು ನೀಡಿದರು. ಆದರೆ ಇಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಸೂರ್ಯಕುಮಾರ್ ಯಾದವ್ ಫೀಲ್ಡ್ ಅಂಪೈರ್ ಜೊತೆ ಚರ್ಚಿಸಿ ತಮ್ಮ ಮೇಲ್ಮನವಿಯನ್ನು ಹಿಂತೆಗೆದುಕೊಂಡರು.