ದೊಡ್ಡಬಳ್ಳಾಪುರ, ಜನವರಿ 21: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅಯೋಧ್ಯೆ ರಾಮಮಂದಿರ (Ayodhya Ram Mandir) ಸೆಟ್ ಹಾಕಲಾಗಿದೆ. ಬಿಜೆಪಿ (BJP) ಯುವಘಟಕ ರಾಜ್ಯಾಧ್ಯಕ್ಷ ಹಾಗೂ ಸ್ಥಳಿಯ ಶಾಸಕ ದೀರಜ್ ಮುನಿರಾಜು ಅವರು ರಾಮಮಂದಿರ ಸೆಟ್ ಅನ್ನು ನಿರ್ಮಾಣ ಮಾಡಿಸಿದ್ದಾರೆ. ಈ ಸೆಟ್ ಜನರ ಕಣ್ಮನ ಸೆಳೆಯುತ್ತಿದೆ. ರಾಮಮಂದಿರ ಸೆಟ್ ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಪೋಷಕರು ಮಕ್ಕಳಿಗೆ ರಾಮ, ಸೀತೆ ಮತ್ತು ಆಂಜನೇಯನ ವೇಷ ಹಾಕಿಸಿ ಸೆಟ್ ಮುಂದೆ ನಿಲ್ಲಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಅಲ್ಲದೇ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ ವೀಕ್ಷಿಸಲು ಬೃಹತ್ ಎಲ್ಇಡಿ ವಾಲ್ ಅಳವಡಿಸಲಾಗಿದೆ.