ಬಾಗಲಕೋಟೆ, ಜುಲೈ 31: ಗ್ರಾಮದಲ್ಲಿ ಸಾವು ಸಂಭವಿಸಿದರೆ ಹೂಳಲು ಸ್ಮಶಾನವಿಲ್ಲ. ಹೀಗಾಗಿ ಗ್ರಾಮಕ್ಕೊಂದು ಸ್ಮಶಾನ ಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಶಂಕ್ರಪ್ಪ ಚಲವಾದಿ ಎಂಬ 95 ವರ್ಷದ ವೃದ್ಧರೋರ್ವರು ಮೃತಪಟ್ಟಿದ್ದಾರೆ. ವೃದ್ದನ ಹೂಳಲು ಗ್ರಾಮದಲ್ಲಿ ಸ್ಮಶಾನ ಇಲ್ಲ. ಹೀಗಾಗಿ ಸ್ಮಶಾನಕ್ಕಾಗಿ ಆಗ್ರಹಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ. ಸೀಗಿಕೇರಿ ಗ್ರಾಮದ ಬಳಿ ರಾಯಚೂರು-ಬಾಗಲಕೋಟೆ ಮಾರ್ಗದ ರಸ್ತೆ ತಡೆದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ನಿನ್ನೆ ರಾತ್ರಿ ವಯೋಸಹಜವಾಗಿ ಶಂಕ್ರಪ್ಪ ಚಲವಾದಿ ಕೊನೆಯುಸಿರೆಳೆದಿದ್ದು ಅಂತ್ಯ ಸಂಸ್ಕಾರಕ್ಕೆ ಖಾಸಗಿ ಜಮೀನಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನಮಗೆ ಸ್ಮಶಾನ ಇಲ್ಲ, ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕು. ನಮಗೆ ಖಾಯಂ ಸ್ಮಶಾನ ಬೇಕೆಂದು ರಸ್ತೆಗೆ ಮುಳ್ಳು ಕಂಟಿ ಹಾಕಿ ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಿದ್ದಾರೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕೆಎಸ್ಆರ್ಟಿಸಿ ಬಸ್, ಶಾಲಾ ಕಾಲೇಜು ಬಸ್ ಸೇರಿದಂತೆ ಎಲ್ಲ ವಾಹನ ತಡೆಯಲಾಗಿದೆ. ಶಾಲೆಗೆ ಹೋಗಲಾಗದೆ ವಿದ್ಯಾರ್ಥಿಗಳು ಪರದಾಡಿದ್ದಾರೆ.