ಬದಲಾಗುತ್ತಾ ಸಿದ್ದರಾಮಯ್ಯ ಟೀಮ್? ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!

Updated on: Apr 18, 2026 | 9:12 PM

ಕಾಂಗ್ರೆಸ್ ನಾಯಕ ಬೇಲೂರು ಗೋಪಾಲಕೃಷ್ಣ ಅವರು ಮುಂದಿನ ತಿಂಗಳೊಳಗೆ ಸಂಪುಟ ಪುನಾರಚನೆ ಸಾಧ್ಯತೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ ಪಕ್ಷದ ಬೆಂಬಲವಿದೆ ಎಂದರೂ, ಚುನಾವಣೆ ಪೂರ್ವದಲ್ಲಿ ಮೂರು ಮಸೂದೆಗಳನ್ನು ಚರ್ಚೆಯಿಲ್ಲದೆ ಏಕಾಏಕಿ ಮಂಡಿಸಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತಕ್ಕೆ ಇದರಿಂದಾಗುವ ತೊಂದರೆಯ ಬಗ್ಗೆ ಕೂಲಂಕಷ ಚರ್ಚೆಗೆ ಆಗ್ರಹಿಸಿದ್ದಾರೆ.

ದೆಹಲಿ, ಏ,18: ಕಾಂಗ್ರೆಸ್ ನಾಯಕ ಬೇಲೂರು ಗೋಪಾಲಕೃಷ್ಣ ಅವರು ದೆಹಲಿ ಭೇಟಿ ಬಳಿಕ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ತಿಂಗಳೊಳಗೆ ಸಂಪುಟದಲ್ಲಿ ಬದಲಾವಣೆಗಳ ಕುರಿತು ಉತ್ತಮ ಸುದ್ದಿ ಹೊರಬೀಳಬಹುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ನಾರಿಶಕ್ತಿ ವಂದನ್ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಬಗ್ಗೆಯೂ ಬೇಲೂರು ಗೋಪಾಲಕೃಷ್ಣ ಮಾತನಾಡಿದರು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಹಿಂದೆ 2011ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೂ ಈ ಕುರಿತು ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದರು. ಆದರೆ, ಮುಂಬರುವ ಪಂಚರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಮಸೂದೆಯನ್ನು ಅವಸರದಲ್ಲಿ ಮಂಡಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು. ಒಂದೇ ಬಾರಿಗೆ ಮಹಿಳಾ ಮೀಸಲಾತಿ, ಕ್ಷೇತ್ರ ವಿಂಗಡಣೆ (ಬೈಪರ್ಕೇಶನ್) ಸೇರಿದಂತೆ ಮೂರು ಮಸೂದೆಗಳನ್ನು ಚರ್ಚೆಯಿಲ್ಲದೆ ಮಂಡಿಸುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಂದು ಮಸೂದೆಗೂ ಪ್ರತ್ಯೇಕವಾಗಿ, ಕನಿಷ್ಠ 15-20 ದಿನಗಳ ಕಾಲ ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಸಬೇಕು ಎಂದು ಗೋಪಾಲಕೃಷ್ಣ ಆಗ್ರಹಿಸಿದರು. ವಿಶೇಷವಾಗಿ ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಆಗಬಹುದಾದ ಸಂಭವನೀಯ ತೊಂದರೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us