ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ಬೆಂಗಳೂರು ಕರಗಕ್ಕೆ ಹೆಸರಾಗಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಭಾರೀ ಅವ್ಯವಹಾರ ಮತ್ತು ಕಳ್ಳತನ ನಡೆದಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ದೇವಸ್ಥಾನದ ಆವರಣದಲ್ಲಿ ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ್ದ ದ್ರೌಪದಿ ದೇವಿಯ 120 ಗ್ರಾಂ ತೂಕದ ಚಿನ್ನದ ಸರವನ್ನು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರು ಕದ್ದು ಜೇಬಿಗೆ ಹಾಕಿಕೊಂಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಫೆಬ್ರವರಿ.03): ಐತಿಹಾಸಿಕ ಬೆಂಗಳೂರು ಕರಗಕ್ಕೆ (Bengaluru Karaga)ಹೆಸರಾಗಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ( dharmaraya swamy temple) ಭಾರೀ ಅವ್ಯವಹಾರ ಮತ್ತು ಕಳ್ಳತನ ನಡೆದಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ದೇವಸ್ಥಾನದ ಆವರಣದಲ್ಲಿ ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ್ದ ದ್ರೌಪದಿ ದೇವಿಯ 120 ಗ್ರಾಂ ತೂಕದ ಚಿನ್ನದ ಸರವನ್ನು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರು ಕದ್ದು ಜೇಬಿಗೆ ಹಾಕಿಕೊಂಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶ್, ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದಾರೆ. ‘ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದಾಗ ದೇವಿಗೆ ಸೇರಿದ 120 ಗ್ರಾಂ ತೂಕದ ಚಿನ್ನದ ಸರ ಪತ್ತೆಯಾಗಿತ್ತು. ನಿಯಮದ ಪ್ರಕಾರ ದೇವಸ್ಥಾನದ ಯಾವುದೇ ಆಸ್ತಿಯು ಸೂಕ್ತ ಪ್ರಕ್ರಿಯೆ ಇಲ್ಲದೆ ದೇವಸ್ಥಾನದ ಆವರಣ ಬಿಟ್ಟು ಹೊರಹೋಗುವಂತಿಲ್ಲ. ಆದರೆ, ಇಒ ನಾಗರಾಜ್ ಅವರು ಕಾನೂನು ಉಲ್ಲಂಘಿಸಿ ಆ ಸರವನ್ನು ತಮ್ಮ ಜೇಬಿಗೆ ಹಾಕಿಕೊಂಡು ಹೋಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾನು ಆರ್ಟಿಐ (RTI) ಮೂಲಕ ಮಾಹಿತಿ ಪಡೆದು ವಿಡಿಯೋ ಪರಿಶೀಲಿಸಿದಾಗ ಸತ್ಯ ಬಯಲಾಗಿದೆ ಎಂದಿದ್ದಾರೆ.
