ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ

|

Updated on: Jul 18, 2024 | 12:20 PM

ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಅಧಿವೇಶನ ಆರಂಭದಲ್ಲೇ ಜಿಟಿ ಮಾಲ್​ ವಿಚಾರವಾಗಿ ಚರ್ಚೆ ನಡೆಯಿತು. ರೈತನನ್ನು ಒಳಗಡೆ ಬಿಡದೆ ಅವಮಾನ ಮಾಡಿದ ಜಿಟಿ ಮಾಲ್​ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ಅಧಿವೇಶನಕ್ಕೆ ಸಚಿವರು ತಿಳಿಸಿದರು.

ಕರ್ನಾಟಕ ವಿಧಾನಮಂಡಲ (Karnataka legislative Assembly Session) ಮುಂಗಾರು ಅಧಿವೇಶನ ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನವಾದ ಇಂದು (ಜುಲೈ.18) ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭದಲ್ಲೇ ಜಿಟಿ ಮಾಲ್​ ವಿಚಾರವಾಗಿ ಚರ್ಚೆ ನಡೆಯಿತು. ಬೆಂಗಳೂರಿನ ಜಿಟಿ ಮಾಲ್​ ಒಳಗಡೆ ಓರ್ವ ರೈತರಿಗೆ ಬಿಡದೆ ಅವಮಾನ ಮಾಡಿರುವ ಇರುವ ವಿಚಾರವಾಗಿ ಚರ್ಚೆ ನಡೆಯಿತು. ರೈತನನ್ನು ಮಾಲ್ ಒಳಗಡೆ ಬಿಡದೆ ಅವಮಾನಿಸಲಾಗಿದೆ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒಕ್ಕೊರಲಿನಿಂದ ಧ್ವನಿ ಎತ್ತಿದರು.​ ಶಾಸಕರ ಒತ್ತಾಯಾಕ್ಕೆ ಮಣಿದ ಸರ್ಕಾರ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್​ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ಸಚಿವರು ಅಧಿವೇಶಕ್ಕೆ ತಿಳಿಸಿದರು.

ಸರ್ಕಾರದ ಮೇಲೆ ಶಾಸಕರ ಒತ್ತಡ

ಮಾಲ್ ಸೆಕ್ಯುರಿಟಿ ಏಜೆನ್ಸಿ ಮೇಲೆ ಕ್ರಮ ಆಗಬೇಕು. ಮಾಲ್ ಮಾಲೀಕರ ಮೇಲೆ ಎಫ್​ಐಆರ್ ಆಗಬೇಕು ಎಂದು ಗುರುಮಿಠಕಲ್ ಕಾಂಗ್ರೆಸ್​ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು. ಬಳಿಕ ಮಾತನಾಡಿದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇದಕ್ಕೆ ಕಾಂಗ್ರೆಸ್​ ಶಾಸಕ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ್ದು “ವರದಿ ತರಿಸಿಕೊಂಡು ಏನು ಕ್ರಮ ಕೈಗೊಳ್ಳುತ್ತೀರಿ? ಸಚಿವರಾಗಿ ಈ ರೀತಿ ಮಾತಾಡಬೇಡಿ. ಇದು ರೈತರ ವಿಚಾರ ಗಂಭೀರವಾಗಿ ಪರಿಗಣಿಸಿ. ಕೂಡಲೆ ಮಾಲ್​​ಗೆ ಒಂದು ವಾರ ವಿದ್ಯುತ್​ ಸರಬರಾಜು ಬಂದ್​ ಮಾಡಿ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದರು.

ಬಳಿಕ ವಿಧಾನಸಭೆ ಸಭಾಪತಿ ಯುಟಿ ಖಾದರ್​, ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಎಂದು ಸ್ಪಷ್ಟಪಡಿಸಿ ಎಂದು ಸಚಿವರಿಗೆ ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ “ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಚರ್ಚೆ ಮಾತಾಡಿದ್ದೇವೆ. 7 ದಿನ ಜಿ.ಟಿ.ಮಾಲ್ ಮುಚ್ಚಿಸಲಾಗುತ್ತದೆ. ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ” ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Thu, 18 July 24

Follow us on