ಸಂಚಾರ ಪೊಲೀಸ್ ಆಗಿ ಕರ್ತವ್ಯ ನಿರ್ವಹಣೆ: ಅನುಭವ ಹಂಚಿಕೊಂಡ ಶಾಸಕ ಸುರೇಶ್ ಕುಮಾರ್
ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ಬೆಂಗಳೂರು ಸಂಚಾರ ಪೊಲೀಸರ ಆಹ್ವಾನದ ಮೇರೆಗೆ ಒಂದು ದಿನ ಸಂಚಾರ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದರು. ಈ ಅನುಭವದಿಂದ ಸಂಚಾರ ನಿಯಂತ್ರಣದ ಸವಾಲುಗಳನ್ನು ಅರಿತರು. ನಾಗರಿಕರು ನಿಯಮಗಳನ್ನು ಪಾಲಿಸುವುದು ಮತ್ತು ಸಹಭಾಗಿತ್ವದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 18: ಒಂದು ದಿನಕ್ಕೆ ಸಂಚಾರ ಪೊಲೀಸ್ ಆಗಿ ಎಂಬ ಬೆಂಗಳೂರು ಸಂಚಾರ ಪೊಲೀಸರ ಆಹ್ವಾನ ಹಿನ್ನೆಲೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ (MLA Suresh Kumar) ಇಂದು ಸಂಚಾರ ಪೊಲೀಸ್ ಸಿಬ್ಬಂದಿ ರೀತಿ ಕರ್ತವ್ಯ ನಿರ್ವಹಿಸಿದರು. ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಮೂರು ಗಂಟೆಗಳ ಕಾಲ ಕಾರ್ಯನಿರ್ವಹಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಕೂಡ ಸಂಚಾರಿ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಏನೆಲ್ಲಾ ಸಮಸ್ಯೆಗಳಿವೆ ಎಂಬುವುದು ಅನುಭವಕ್ಕೆ ಬಂದಿದೆ ಎಂದರು.
ನಾನು ಮುಂದೆ ಹೋಗಬೇಕು, ಹೆಲ್ಮೆಟ್ ಹಾಕದೆ ಹೋಗುತ್ತೇನೆ, ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುತ್ತೇನೆ, ಒಂದು ವಾಹನದಲ್ಲಿ ನಾಲ್ಕು ಜನರನ್ನು ಕರೆದುಕೊಂಡು ಹೋಗುತ್ತೇನೆ, ಪಾದಚಾರಿಗಳು ನಡೆಯುವ ಜಾಗದಲ್ಲೇ ವಾಹನ ನಿಲ್ಲಿಸುತ್ತೇನೆ, ಈ ಮಾನಸಿಕತೆಯನ್ನು ತೊಡೆದುಹಾಕಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
