ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಬಲಿ: ಕ್ಯಾಂಟರ್ ಲಾರಿ ಅಡಿ ಸಿಲುಕಿ ಟೆಕ್ಕಿ ಸಾವು

Updated on: Oct 25, 2025 | 10:37 AM

ಬೆಂಗಳೂರಿನ ರಸ್ತೆ ಗುಂಡಿ ಇದೀಗ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಅಣ್ಣನ ಜತೆ ಬೈಕ್​ನಲ್ಲಿ ತೆರಳುತ್ತಿದ್ದ 26 ವರ್ಷದ ಟೆಕ್ಕಿ ಪ್ರಿಯಾಂಕಾ ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು ಎಪಿಎಂಸಿ ರಸ್ತೆಯಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್​ನಿಂದ ಬಿದ್ದು ಕ್ಯಾಂಟರ್ ಲಾರಿಯ ಚಕ್ರದಡಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.

ನೆಲಮಂಗಲ, ಅಕ್ಟೋಬರ್ 25: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮತ್ತೊಮ್ಮೆ ವಾಹನ ಸವಾರರ ಪ್ರಾಣಕ್ಕೆ ಮಾರಕವಾಗಿ ಪರಿಣಮಿಸಿದೆ. ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು ಎಪಿಎಂಸಿ ರಸ್ತೆಯಲ್ಲಿ ಗುಂಡಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ 26 ವರ್ಷದ ಯುವತಿ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ. ಪ್ರಿಯಾಂಕಾ ಅಣ್ಣನೊಂದಿಗೆ ಬೈಕ್‌ನಲ್ಲಿ ಮಾದಾವರ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕಾಮಗಾರಿಯಿಂದ ಹದಗೆಟ್ಟಿದ್ದ ಎಪಿಎಮ್‌ಸಿ ರಸ್ತೆಯಲ್ಲಿ ದೊಡ್ಡ ಗುಂಡಿಯನ್ನು ತಪ್ಪಿಸಲು ಮುಂದಾದ ಅಣ್ಣ ಬೈಕ್‌ನ ನಿಯಂತ್ರಣ ಕಳೆದುಕೊಂಡರು. ಅಷ್ಟರಲ್ಲಿ ಬೈಕ್ ಜಾರಿ ಬಿದ್ದಿದ್ದು, ಪ್ರಿಯಾಂಕಾ ರಸ್ತೆಗೆ ಬಿದ್ದಿದ್ದಾರೆ. ಆಗ ಕ್ಯಾಂಟರ್ ಲಾರಿಯ ಚಕ್ರದ ಕೆಳಗೆ ಸಿಲುಕಿದ್ದಾರೆ. ತಲೆಗೆ ತೀವ್ರ ಗಾಯಗೊಂಡ ಪ್ರಿಯಾಂಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಿಯಾಂಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಡಿಯೋ, ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us