ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ ನಾಯಕ ದಿನಕರನ್

Updated on: May 08, 2026 | 10:43 PM

ವಿಜಯ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಎಎಂಎಂಕೆ ನಾಯಕ ದಿನಕರನ್ ರಾಜ್ಯಪಾಲರನ್ನು ಭೇಟಿ ಮಾಡಿ, ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಬೆಂಬಲ ನೀಡಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನ ಪ್ರಧಾನ ಕಾರ್ಯದರ್ಶಿಯಾಗಿರುವ ನಾನು, ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವನ್ನು ಈ ಮೂಲಕ ವ್ಯಕ್ತಪಡಿಸುತ್ತೇನೆ. ಮನ್ನಾರ್ಗುಡಿ ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಎಸ್. ಕಾಮರಾಜ್ ಅವರು ಆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಚೆನ್ನೈ, ಮೇ 8: ತಮಿಳುನಾಡು ರಾಜಕೀಯದಲ್ಲಿ ಕುತೂಹಲ ಇನ್ನೂ ಮುಗಿದಿಲ್ಲ. ನಟ-ರಾಜಕಾರಣಿ ವಿಜಯ್ ದಳಪತಿ (Vijay) ಒಂದೆಡೆ ನಾಳೆ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದಾರೆ. ಇನ್ನೊಂದೆಡೆ ಅವರಿಗೆ ಸರಿಯಾಗಿ 118 ಸ್ಥಾನಗಳ ಬೆಂಬಲವಿದ್ದು, ಯಾವುದಾದರೂ ಒಂದು ಪಕ್ಷ ಹಿಂದೆ ಸರಿದರೂ ಸರ್ಕಾರ ರಚನೆ ಅತಂತ್ರವಾಗುವ ಸ್ಥಿತಿಯಿದೆ. ಇನ್ನೊಂದೆಡೆ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ನ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರಿಗೆ ಸರ್ಕಾರ ರಚಿಸಲು ಬೆಂಬಲ ನೀಡಿದ್ದಾರೆ. ಈ ಹಿಂದೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚಿಸುವ ಪ್ರಯತ್ನಕ್ಕೆ ಎಎಂಎಂಕೆ ಬೆಂಬಲ ನೀಡಬಹುದು ಎಂಬ ವರದಿಗಳಿದ್ದವು.

ಈ ಬಗ್ಗೆ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಪ್ರತಿಕ್ರಿಯೆ ನೀಡಿದ್ದು, “ನಾನು ಎಐಎಡಿಎಂಕೆಯನ್ನು ಬೆಂಬಲಿಸುತ್ತಿದ್ದೇನೆ. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸಿ ಸರ್ಕಾರ ರಚಿಸಲು ನಾನು ಪತ್ರವನ್ನು ಸಲ್ಲಿಸಿದ್ದೇನೆ. ನಮ್ಮ ಶಾಸಕ ಕಾಮರಾಜ್ ಕೂಡ ಅದಕ್ಕೆ ಸಹಿ ಹಾಕಿ ನನ್ನ ಕಾರ್ಯದರ್ಶಿ ಮೂಲಕ ಕಳುಹಿಸಿದ್ದಾರೆ. ಟಿವಿಕೆಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂಬ ವರದಿ ನೋಡಿದಾಗ ನಾನು ಆಘಾತಕ್ಕೊಳಗಾಗಿದ್ದೆ. ನಮ್ಮ ಪಕ್ಷವು ವಿಜಯ್‌ಗೆ ಬೆಂಬಲ ನೀಡಿದೆ ಎಂದು ಟಿವಿಯಲ್ಲಿ ನೋಡಿದಾಗ, ನಾನು ಆಘಾತಕ್ಕೊಳಗಾಗಿದ್ದೆ. ಹಾಗಾಗಿ, ನಾನು ರಾಜ್ಯಪಾಲರೊಂದಿಗೆ ಅಪಾಯಿಂಟ್‌ಮೆಂಟ್ ಪಡೆದುಕೊಂಡು ಪತ್ರ ಸಲ್ಲಿಸಿದ್ದೇನೆ. ಅದನ್ನು ತನಿಖೆ ಮಾಡುವಂತೆ ಕೇಳಿಕೊಂಡು ಪತ್ರವನ್ನು ಅವರಿಗೆ ಸಲ್ಲಿಸಿದ್ದೇನೆ.” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us