ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲೇ ಹರಿದ ಡಾಂಬರ್

Updated on: Jul 07, 2026 | 9:55 PM

ಹಾಸನ ಜಿಲ್ಲೆಯ ಶಿರಾಡಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರೀ ಮಳೆ ಕಾರಣದಿಂದ ಡಾಂಬರ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆಗೆ ಡಾಂಬರ್ ಸೋರುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸ್ಕಿಡ್ ಆಗುವ ಅಪಾಯ ಎದುರಾಗಿದೆ. ತಕ್ಷಣ ತೆರವು ಮಾಡದಿದ್ದರೆ ಸಂಚಾರಕ್ಕೆ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗುವ ಆತಂಕವಿದೆ.

ಹಾಸನ, ಜು.7: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನಿರಂತರ ಮಳೆ ಮತ್ತು ರಸ್ತೆಯಲ್ಲಿ ಆಯಿಲ್​ ತೇವ ಇರುವ ಪರಿಣಾಮದಿಂದ ಡಾಂಬರ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಅದರ ವಾಲ್ವ್ ತೆರೆದುಕೊಂಡಿದ್ದು, ಡಾಂಬರ್ ರಸ್ತೆಯ ಮೇಲೆ ಹರಿಯುತ್ತಿದೆ. ಇದು ರಸ್ತೆಯನ್ನು ಆವರಿಸಿಕೊಳ್ಳುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ತೀವ್ರ ಅಪಾಯವನ್ನುಂಟು ಮಾಡಿತ್ತು. ಡಾಂಬರ್ ಮೇಲೆ ವಾಹನಗಳು ಹೋದರೆ ಸ್ಕಿಡ್ ಆಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಅಪಘಾತ ನಡೆದು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದಿದ್ದರೂ, ಡಾಂಬರ್ ಸೋರಿಕೆಯನ್ನು ತಡೆಯಲು ಅಥವಾ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲ. ಕೂಡಲೇ ತೆರವುಗೊಳಿಸದಿದ್ದರೆ, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಮತ್ತಷ್ಟು ಅಡಚಣೆ ಉಂಟಾಗಿ ಭಾರೀ ಅವಘಡಗಳಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಇದೇ ಮಾರ್ಗದಲ್ಲಿ ಸುಮಾರು ಐದು ಕಿಲೋಮೀಟರ್ ಮುಂದೆಯೂ ಮತ್ತೊಂದು ಟ್ಯಾಂಕರ್ ರಸ್ತೆ ಬದಿಗೆ ಇಳಿದಿರುವುದು, ಘಾಟ್ ರಸ್ತೆಯು ಎಷ್ಟು ಅಪಾಯಕಾರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us