ಬೆಂಗಳೂರಿನಲ್ಲಿ ಕಾವೇರಿ ನೀರು ಕಲುಷಿತ: ಖಾಸಗಿ ಕಂಪನಿ ಯಡವಟ್ಟಿಂದ ಪೈಪ್ಲೈನ್ ಡ್ಯಾಮೇಜ್
ಬೆಂಗಳೂರಿನ ಯಲಹಂಕದ ದೊಡ್ಡಬೆಟ್ಟಹಳ್ಳಿ, BHEL ಲೇಔಟ್ ಸುತ್ತಮುತ್ತ ಖಾಸಗಿ ಕಂಪನಿಯ ಪೈಪ್ಲೈನ್ ಕಾಮಗಾರಿಯಿಂದ ಕಾವೇರಿ ನೀರು ಕಲುಷಿತಗೊಂಡಿದೆ. ಮಣ್ಣು ಮಿಶ್ರಿತ ನೀರು ಮನೆಗಳಿಗೆ ಪೂರೈಕೆಯಾಗಿದ್ದು, ಸುಮಾರು 500 ಮನೆಗಳ ನಿವಾಸಿಗಳು ತೊಂದರೆಗೊಳಗಾಗಿದ್ದಾರೆ. ಸಮಸ್ಯೆ ಬಗೆಹರಿದಿದೆ ಎಂದು BWSSB ಹೇಳಿದ್ದರೂ, ಗುಣಮಟ್ಟದ ಪರೀಕ್ಷೆ ನಡೆಸಿ ಭರವಸೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು, ಜುಲೈ 11: ಬೆಂಗಳೂರಿನ ಯಲಹಂಕ ಬಳಿಯ ದೊಡ್ಡಬೆಟ್ಟಹಳ್ಳಿಯಲ್ಲಿ ಕಾವೇರಿ ನೀರು ಕಲುಷಿತಗೊಂಡಿದ್ದು, ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಖಾಸಗಿ ಕಂಪನಿ ನಡೆಸುತ್ತಿದ್ದ ಪೈಪ್ಲೈನ್ ಕಾಮಗಾರಿಯ ವೇಳೆ ಕಾವೇರಿ ನೀರು ಪೂರೈಕೆ ಪೈಪ್ಲೈನ್ಗೆ ಹಾನಿಯಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಪರಿಣಾಮವಾಗಿ, ಹಲವು ಮನೆಗಳಿಗೆ ಮಣ್ಣು ಮಿಶ್ರಿತ ಹಾಗೂ ಕಪ್ಪು ಬಣ್ಣದ ನೀರು ಪೂರೈಕೆಯಾಗಿದ್ದು, ಸಂಪ್ ಮತ್ತು ವಾಟರ್ ಟ್ಯಾಂಕ್ಗಳಲ್ಲಿ ಸಂಗ್ರಹಗೊಂಡಿದೆ.
ಸಮಸ್ಯೆಯು ಯಲಹಂಕದ ಅಟ್ಟೂರು ವಾರ್ಡ್, ದೊಡ್ಡಬೆಟ್ಟಹಳ್ಳಿ ಮತ್ತು BHEL ಲೇಔಟ್ ಸುತ್ತಮುತ್ತಲಿನ ಸುಮಾರು 500 ಮನೆಗಳ ಮೇಲೆ ಪರಿಣಾಮ ಬೀರಿದೆ. ಮನೆಗಳಿಗೆ ಕುಡಿಯಲು, ಅಡುಗೆ ಮಾಡಲು ಮತ್ತು ಸ್ನಾನ ಮಾಡಲು ಇದೇ ನೀರನ್ನು ಬಳಸುತ್ತಿದ್ದು, ಈಗ ಶುದ್ಧ ನೀರಿನ ಕೊರತೆ ಎದುರಾಗಿದೆ. ಸದ್ಯ, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ. ಆದರೆ, ನಿವಾಸಿಗಳು ನೀರಿನ ಗುಣಮಟ್ಟದ ಕುರಿತು ಜಲಮಂಡಳಿ ಅಧಿಕಾರಿಗಳಿಂದ ಸ್ಪಷ್ಟನೆ ಮತ್ತು ಪರೀಕ್ಷೆ ನಡೆಸಿ ಭರವಸೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜಲಕ್ಷಾಮದ ಭೀತಿ ಎದುರಾಗಿರುವ ಸನ್ನಿವೇಶದಲ್ಲಿ ಈ ರೀತಿಯ ಎಡವಟ್ಟುಗಳು ಬೆಂಗಳೂರಿನ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
