ರಕ್ಷಣಾ ಸಚಿವಾಲಯ ಅನುಮತಿ ಪಡೆಯದೆ ಸಿದ್ದರಾಮಯ್ಯ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ಮುಂದಾಗಿದ್ದಾರೆ: ಪ್ರಕಾಶ್ ರಾಜ್

Updated on: Jul 11, 2025 | 5:13 PM

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರನ್ನು ಸಹ ಪ್ರಕಾಶ್ ರಾಜ್ ಹಿಗ್ಗಾಮುಗ್ಗಾ ಟೀಕಿಸಿದರು. ಆಂಧ್ರದಲ್ಲಿ ಹೋರಾಟ ಮಾಡಲಿ ಗುಜರಾತ್​​ನಲ್ಲಿ ಮಾಡಲಿ ಅನ್ನಲು ಪಾಟೀಲ್ ಯಾರು? ನಾನೊಬ್ಬ ಕನ್ನಡಿಗ ಮತ್ತು ಕನ್ನಡನಾಡಿನ ರೈತರಿಗಾಗಿ ಹೋರಾಡ್ತಾ ಇದ್ದೇನೆ, ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ ಅಂತ ಪಾಟೀಲ್ ಹೇಳಬೇಕಿತ್ತೇ ಹೊರತು ತಾನೇ ಸಿಎಂ ಎಂಬಂತೆ ಮಾತಾಡಬಾರದು ಎಂದು ಪ್ರಕಾಶ್ ರಾಜ್ ಕುಟುಕಿದರು.

ಮೈಸೂರು, ಜುಲೈ 11: ದೇವನಹಳ್ಳಿಯಲ್ಲಿ ಏರೋಸ್ಪೇಸ್ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ವಿರೋಧಿಸುತ್ತಿರುವ ರೈತರೊಂದಿಗೆ ಕೈ ಜೋಡಿಸಿರುವ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ (Prakash Raj, Social Activist), ಕಾರಿಡಾರ್ ಸ್ಥಾಪನೆಗೆ ಸಂಬಂಧಿಸಿದ ಎಲ್ಲ ಕಾನೂನು ತೊಡಕಗಳನ್ನು ನಿವಾರಿಸಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸುವುದಾಗಿ ರೈತರಿಗೆ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ರಕ್ಷಣಾ ಸಚಿವರನ್ನು ಕಂಡು ಯೋಜನೆಯ ಪ್ರಸ್ತಾವನೆ ಅವರಿಗೆ ಸಲ್ಲಿಸಿ ಅನುಮತಿ ಕೋರಿದ್ದಾರೆ ಎಂದು ಹೇಳಿದರು. ಅಂದರೆ ಕೇಂದ್ರ ರಕ್ಷಣಾ ಇಲಾಖೆಯ ಅನುಮತಿ ಪಡೆಯದೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ, ಸಿದ್ದರಾಮಯ್ಯ ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಾರೆಯೇ? ಅವರು ನಮ್ಮ ರಾಜ್ಯದ ಪ್ರತಿನಿಧಿ ಮಾತ್ರ, ನಮ್ಮನ್ನಾಳುವ ದೊರೆಯಲ್ಲ ಎಂದು ಪ್ರಕಾಶ್ ರಾಜ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ:  ಭೂಮಿ ಮೇಲಿನ ಮೂರು ವಿಶೇಷ ಪ್ರದೇಶಗಳಲ್ಲಿ ಮನೆ ಹೊಂದಿದ್ದಾರೆ ಪ್ರಕಾಶ್ ರಾಜ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ