ಮೇಲ್ವರ್ಗ ಜನರಿಂದ ದೌರ್ಜನ್ಯ: ದಯಾ ಮರಣ ಕೋರಿದ ದಲಿತ ಮಹಿಳೆಯ ನೋವಿನ ಕಥೆ ಕೇಳಿ

Updated on: Feb 06, 2025 | 4:24 PM

ಕನಕದಾಸರ ನಾಡು ಹಾವೇರಿಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಸಹ ದಲಿತರ ಮೇಲಿನ ಶೋಷಣೆ ಕೊನೆಯಾಗುತ್ತಿಲ್ಲ. ಕೊರಳಿಗೆ ಚಿಪ್ಪು, ಕಾಲಿಗೆ ಪೊರಕೆ ಕಟ್ಟಿಕೊಂಡು ಬರುವಂತೆ ದಲಿತ ಮಹಿಳೆ ಮೇಲೆ ದೌರ್ಜನ್ಯ ಮಾಡಲಾಗಿದೆ. ಹೀಗಾಗಿ ಇದೀಗ ನೊಂದ ದಲಿತ ಮಹಿಳೆ ದಯಾ ಮರಣಕ್ಕೆ ಅವಕಾಶ ನೀಡಿ ಎಂದು ಕಣ್ಣೀರಿಟ್ಟಿದ್ದಾಳೆ.

ಹಾವೇರಿ, (ಫೆಬ್ರವರಿ 06): ಅಸ್ಪೃಶ್ಯತೆ ನಿರ್ಮೂಲನೆಗೆ ಕಾನೂನುಗಳಿದ್ದರೂ ಸಹ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇದಕ್ಕೆ ಪೂರಕವೆಂಬಂತೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆ ಮೇಲೆ ಮೇಲ್ವರ್ಗದ ಜನರು ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಜನವರಿ 30ರಂದು ಎಸ್​ಸಿ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಘಟನೆ ಬಗ್ಗೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಗೆ ನೊಂದ ಮಹಿಳೆ ದೂರು ನೀಡಿದ್ದಾಳೆ. ದಿಲ್ಲೆಪ್ಪ, ಗುಡ್ಡಪ್ಪ, ಹನುಮಂತ, ಮಂಜಪ್ಪ, ಸೇರಿದಂತೆ 35 ಕ್ಕೂ ಹೆಚ್ಚು ಜನರ ವಿರುದ್ಧ ನೊಂದ ಮಹಿಳೆ ಜಾತಿ ನಿಂದನೆ ಆರೋಪದಡಿ ದೂರು ದಾಖಲಿಸಿದ್ದಾಳೆ. ಆದ್ರೆ, ಪೊಲೀಸರು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಮಾಧ್ಯಮಗಳ ಮುಂದೆ ಬಂದಿದ್ದು, ದೌರ್ಜನ್ಯವೆಸಗುತ್ತಿರುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ನಮಗೆ ದಯಾಮರಣ ನೀಡಲಿ ಎಂದು ದಲಿತ ಮಹಿಳೆ ಕಣ್ಣೀರಿಟ್ಟಿದ್ದಾಳೆ.

ಈ ಸಂಬಂಧ ಇದೀಗ ಮಹಿಳೆ ಮಾಧ್ಯಮಗಳ ಮುಂದೆ ಬಂದಿದ್ದು, ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೌರ್ಜನ್ಯವೆಸಗಿದವರನ್ನು ಬಂಧಿಸಿಲ್ಲ, ನಮಗೆ ನ್ಯಾಯ ಸಿಕ್ಕಿಲ್ಲ. ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನಮಗೆ ಸಹಾಯ ಮಾಡ್ತಿಲ್ಲ. ಊರಿನ ಸರ್ಕಾರಿ ರಸ್ತೆಯಲ್ಲಿ ಓಡಾಡಲು ನಮಗೆ ಬಿಡುತ್ತಿಲ್ಲ. ಕೊರಳಿಗೆ ಚಿಪ್ಪು, ಕಾಲಿಗೆ ಪೊರಕೆ ಕಟ್ಟಿಕೊಂಡು ಬರುವಂತೆ ಹೇಳುತ್ತಾರೆ. ನಮ್ಮ ಮನೆ ಬೇಲಿ ಬಳಿಗೆ ಬಂದು ಕೆಟ್ಟದಾಗಿ ಸನ್ನೆ ಮಾಡುತ್ತಾರೆ. ‘ನಮ್ಮ ಜೊತೆ ಮಲಗು ಬಾ’ ಎಂದು ಕರೆಯುತ್ತಾರೆಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ

Follow Us