ಅನಪೇಕ್ಷಿತ ಅವಮಾನಗಳನ್ನು ಅವಡುಗಚ್ಚಿ ಅದುಮಿಕೊಳ್ಳುವುದು ಶಿವಕುಮಾರ್ಗೆ ಅನಿವಾರ್ಯವೇ?
ಸಿದ್ದರಾಮಯ್ಯ ತಮ್ಮ ಮೊಂಡುತನ ಪ್ರದರ್ಶಿಸುವಾಗ ಪಕ್ಷದ ಹೈಕಮಾಂಡ್ ಯಾಕೆ ಮಧ್ಯ ಪ್ರವೇಶಿಸಿ, ಅದನ್ನು ಹೇಳುವ ಅವಶ್ಯಕತೆಯಿಲ್ಲ ಎಂದು ಹೇಳಲ್ಲ ಅನ್ನೋದು ಅಚ್ಚರಿ ಹುಟ್ಟಿಸುತ್ತದೆ. ಸಿದ್ದರಾಮಯ್ಯ ಹೈಕಮಾಂಡ್ಗೂ ಮಿಗಿಲಾದವರೇ ಎಂಬ ಪ್ರಶ್ನೆ ಮೂಡೋದು ಸಹಜವೇ. ಏತನ್ಮಧ್ಯೆ, ಸಿಎಂ ಮಗ ಯತೀಂದ್ರ ತನ್ನ ತಂದೆಯನ್ನು ನಾಲ್ವಡಿ ಕೃಷ್ಣರಾಜ್ ಒಡೆಯರ್ಗಿಂತ ಮಿಗಿಲಾದವರು, ಐದು ವರ್ಷಗಳ ಅವಧಿಗೆ ಅವರೇ ಸಿಎಂ ಅಂತ ಹೇಳುತ್ತಲೇ ಇರುತ್ತಾರೆ.
ಬೆಂಗಳೂರು, ಜುಲೈ 29: ಕಳೆದ ಎರಡು ಮೂರು ವಾರಗಳಿಂದ ಕನ್ನಡಿಗರು ಗಮನಿಸುತ್ತಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾಳ್ಮೆಯ ಪ್ರತಿರೂಪದಂತೆ ಕಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಏಕಮೇವಾದ್ವಿತೀಯ ನಾಯಕನಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮೂರ್ನಾಲ್ಕು ಸಲ ಸಿದ್ದರಾಮಯ್ಯ ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಅಂತ ಹೇಳಿದರೂ ಶಿವಕುಮಾರ್ ಅದಕ್ಕೆ ಪ್ರತಿಕ್ರಿಯಿಸಲು ಹೋಗಿಲ್ಲ. ಮುಖ್ಯಮಂತ್ರಿಯ ತವರಿನಲ್ಲಿ ಸಾಧನಾ ಸಮಾವೇಶ ನಡೆದಾಗ ಶಿವಕುಮಾರ್ ಹೋಗಿರಲಿಲ್ಲ. ಇವರು ಉದ್ದೇಶಪೂರ್ವಕವಾಗಿ ಹೋಗಲಿಲ್ಲವೋ ಅಥವಾ ಆಹ್ವಾನ ಇರಲಿಲ್ಲವೋ ಗೊತ್ತಿಲ್ಲ. ಸಮಾವೇಶದಲ್ಲಿ ಭಾಷಣ ಮಾಡುವಾಗ ತಮ್ಮ ಸಲ್ಯೂಟೇಷನ್ನಲ್ಲಿ ಸಿದ್ದರಾಮಯ್ಯನವರು ಶಿವಕುಮಾರ್ ಹೆಸರು ಹೇಳಲಿಲ್ಲ. ಕೆಲ ಮಂತ್ರಿಗಳು ಶಾಸಕರು ಆಕ್ಷೇಪಣೆ ವ್ಯಕ್ತಪಡಿಸಿದಾಗ ಅನಾರೋಗ್ಯ ಅಂತ ಮನೆಯಲ್ಲಿ ಕೂರುವವರ ಹೆಸರು ಉಲ್ಲೇಖಿಸುವ ಅವಶ್ಯಕತೆಯಿಲ್ಲ ಎಂದು ಅಸಡ್ಡೆ ಮತ್ತು ನಿರ್ಲಕ್ಷ್ಯತನದಿಂದ ಸಿದ್ದರಾಮಯ್ಯ ಹೇಳಿದರು.
ಐದು ವರ್ಷಗಳಿಗೆ ಸಿದ್ದರಾಮಯ್ಯ ಸಿಎಂ ಅಂತ ಮಲ್ಲಿಕಾರ್ಜುನ ಖರ್ಗೆಯವರಾಗಲೀ, ರಾಹುಲ್ ಗಾಂಧಿಯಾಗಲೀ ಅಥವಾ ಕರ್ನಾಟಕದ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಅವರಾಗಲೀ ಹೇಳಿಲ್ಲ. ತಮಗಾಗುತ್ತಿರುವ ಅವಮಾನವನ್ನು ಶಿವಕುಮಾರ್ ಅವಡುಗಚ್ಚಿ ಸಹಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಇದನ್ನೂ ಓದಿ: ಒಂದು ವಾರದಿಂದ ಡಿಸಿಎಂ ಟೆಂಪಲ್ ರನ್: ಸಿಎಂ ಗಾದಿಗಾಗಿ ರಹಸ್ಯ ಪೂಜೆ ಮಾಡಿದ್ರಾ ಡಿಕೆ ಶಿವಕುಮಾರ್?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
