ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ ಎಂದ ಡಿಕೆಶಿ: ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ
ಸಾರಿಗೆ ಇಲಾಖೆಯ ದರ ಹೆಚ್ಚಳ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಡಿಪೋ ಮತ್ತು ಖಾಸಗಿ ಡೀಸೆಲ್ ಬೆಲೆಗಳ ನಡುವಿನ 40 ರೂ. ಅಂತರ ಆತಂಕಕಾರಿಯಾಗಿದೆ. ಕೆಎಸ್ಆರ್ಟಿಸಿಯನ್ನು ಉಳಿಸಿಕೊಂಡು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಖಾಸಗಿಯವರು ಡೀಸೆಲ್ ಖರೀದಿಸುವ ಕುರಿತು ವರದಿ ಕೇಳಿದ್ದಾರೆ.
ಬೆಂಗಳೂರು, ಜೂ.20: ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಸರ್ಕಾರ, ಎಷ್ಟು ಏರಿಕೆ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಡೀಸೆಲ್ ಬೆಲೆ ತೀವ್ರ ಹೆಚ್ಚಾಗಿದೆ.ಡಿಪೋದ ಬೆಲೆಗೂ, ಖಾಸಗೀಯಾಗಿ ಸಿಗುವ ಡಿಸೆಲ್ ಗೂ ಅಜಗಾಂತರ ವ್ಯತ್ಯಾಸ ಇದ್ದು, ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ . ಅದರ ಬಗ್ಗೆ ವರದಿ ಕೊಡುವಂತೆ ಹೇಳಿದ್ದೇನೆ. ವರದಿ ನೋಡಿಕೊಂಡು ಕೆಸ್ಸಾರ್ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ಇಲಾಖೆಯು ಟಿಕೆಟ್ ದರ ಹೆಚ್ಚಳಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಡಿಪೋಗಳಲ್ಲಿ ಖರೀದಿಸುವ ಡೀಸೆಲ್ ಮತ್ತು ಖಾಸಗಿಯಾಗಿ ಲಭ್ಯವಿರುವ ಡೀಸೆಲ್ ಬೆಲೆಗಳ ನಡುವೆ ಸುಮಾರು 40 ರೂಪಾಯಿಗಳ ದೊಡ್ಡ ವ್ಯತ್ಯಾಸವಿದೆ. ಈ ಬೆಲೆ ವ್ಯತ್ಯಾಸದಿಂದಾಗಿ, ಕೆಲವು ಖಾಸಗಿ ಸಾರಿಗೆ ನಿರ್ವಾಹಕರು ಡಿಪೋದಿಂದ ಡೀಸೆಲ್ ಖರೀದಿಸುವುದನ್ನು ಬಿಟ್ಟು, ಸಾರ್ವಜನಿಕ ಪೆಟ್ರೋಲ್ ಬಂಕ್ಗಳಿಂದ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ಕೆಎಸ್ಆರ್ಟಿಸಿಯನ್ನು ಉಳಿಸಿಕೊಳ್ಳುವ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮತೋಲಿತ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡೀಸೆಲ್ ಬೆಲೆ ಹೆಚ್ಚಾದಾಗ ಸ್ವಯಂಚಾಲಿತವಾಗಿ ಸಾರಿಗೆ ದರ ಹೆಚ್ಚಳ ಮಾಡುವ ತೀರ್ಮಾನವಿತ್ತು. ಪ್ರಧಾನ ಮಂತ್ರಿಗಳು ಸಾರ್ವಜನಿಕ ಸಾರಿಗೆಯನ್ನು ಬಳಸಲು ಮನವಿ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
