ಜಂಗಲ್ ಸಫಾರಿ ಅಥವಾ ಕಾಡಿನ ರಸ್ತೆಗಳು ಎಷ್ಟೇ ಸುರಕ್ಷಿತ ಎಂದು ನಾವಂದುಕೊಂಡರೂ ಕೆಲವೊಮ್ಮೆ ಪ್ರಾಣಿಗಳ ದಾಳಿ, ಇನ್ನೂ ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಿಂದ ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವುದು ಸಾಮಾನ್ಯ. ಇವುಗಳ ನಿರ್ವಹಣೆಗೆ ಅರಣ್ಯ ಇಲಾಖೆ ಆಧುನಿಕ ಯಂತ್ರಗಳನ್ನು ಬಳಸಿದರೂ, ಕೆಲವೊಮ್ಮೆ ಪ್ರಾಣಿಗಳೇ ಪ್ರಕೃತಿಯ ಶ್ರೇಷ್ಠ ಸಹಾಯಕರಾಗುತ್ತವೆ. ಇತ್ತೀಚೆಗೆ ಇದಕ್ಕೆ ಸಾಕ್ಷಿಯಾದ ಅಪರೂಪದ ವೀಡಿಯೊವೊಂದನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕಾಡಿನ ಹಾದಿಯೊಂದರಲ್ಲಿ ಭಾರಿ ಮಳೆಯಿಂದಾಗಿ ದೊಡ್ಡ ಮರಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು. ಕಷ್ಟಕರವಾದ ಭೂಪ್ರದೇಶವಾದ್ದರಿಂದ ಅಲ್ಲಿಗೆ ಜೆಸಿಬಿಗಳಂತಹ ದೊಡ್ಡ ಯಂತ್ರೋಪಕರಣಗಳನ್ನು ಕೊಂಡೊಯ್ಯುವುದು ಅಸಾಧ್ಯವಾಗಿತ್ತು. ಅಂತಹ ಸಮಯದಲ್ಲಿ ಅರಣ್ಯ ಇಲಾಖೆಯ ನೆರವಿಗೆ ಬಂದ ಗಜರಾಜ, ತನ್ನ ಅಪಾರ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾನೆ. ಆನೆಯು ತನ್ನ ಸೊಂಡಿಲಿನಿಂದಲೇ ಆ ಭಾರೀ ಮರದ ದಿಮ್ಮಿಗಳನ್ನು ಸಲೀಸಾಗಿ ಎತ್ತಿ ಪಕ್ಕಕ್ಕೆ ಹಾಕಿ, ಕೆಲವೇ ಕ್ಷಣಗಳಲ್ಲಿ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದೆ.
ಅರಣ್ಯ ಇಲಾಖೆಯ ನೌಕರರಿಗೆ ಆನೆಗಳು ಕೇವಲ ಪ್ರಾಣಿಗಳಲ್ಲ, ಅತ್ಯಂತ ವಿಶ್ವಾಸಾರ್ಹ ಒಡನಾಡಿಗಳಾಗಿವೆ. ಗಸ್ತು ತಿರುಗಲು ಹಾಗೂ ಯಂತ್ರಗಳು ವಿಫಲವಾಗುವ ಕಠಿಣ ಜಾಗಗಳಲ್ಲಿ ಹಾದಿ ತೆರವುಗೊಳಿಸಲು ಆನೆಗಳು ಮನುಷ್ಯರಿಗಿಂತ ಹೆಚ್ಚು ಉಪಯುಕ್ತವಾಗಿವೆ. ಅಧಿಕಾರಿಯೊಬ್ಬರು ತಮ್ಮ ಕ್ಷೇತ್ರ ಭೇಟಿಯ ವೇಳೆ ಸೆರೆಹಿಡಿದ ಈ ವಿಡಿಯೋ ಸದ್ಯ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದ್ದು, ಆನೆಯ ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ