ನಕಲಿ ಔಷಧಿ ಜಾಲ ಪತ್ತೆ ಪ್ರಕರಣ: ಅಜರ್ ಬೈಜಾನ್ನಿಂದ ಕಿಂಗ್ ಪಿನ್ ಪ್ರಶಾಂತ್ ಕರೆತರಲು ಎಸ್ಐಟಿ ತಯಾರಿ
ರಾಮನಗರದ ಬಿಡದಿಯಲ್ಲಿ ಬೆಳಕಿಗೆ ಬಂದ ನಕಲಿ ಔಷಧಿ ಜಾಲ ಪ್ರಕರಣದ ಕಿಂಗ್ಪಿನ್ ಪ್ರಶಾಂತ್ನನ್ನು ಅಜರ್ ಬೈಜಾನ್ನಿಂದ ಕರೆತರಲು ಎಸ್ಐಟಿ ಸಿದ್ಧತೆ ನಡೆಸಿದೆ. ಅಜರ್ ಬೈಜಾನ್ನ ಕಸ್ಟಮ್ಸ್ ಅಧಿಕಾರಿಗಳು ಪ್ರಶಾಂತ್ನನ್ನು ವಶಕ್ಕೆ ಪಡೆದಿದ್ದು, ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು, ಆಗಸ್ಟ್ 28: ರಾಮನಗರದ ಬಿಡದಿಯ ಫಾರ್ಮ್ ಹೌಸ್ನಲ್ಲಿ ಪತ್ತೆಯಾದ ಬೃಹತ್ ನಕಲಿ ಔಷಧಿ ಜಾಲದ ಪ್ರಕರಣವು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಜಾಲದ ಕಿಂಗ್ಪಿನ್ ಪ್ರಶಾಂತ್ನನ್ನು ಅಜರ್ ಬೈಜಾನ್ನಿಂದ ಕರೆತರಲು ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಎಸ್ಐಟಿ ನಡೆಸಿದ ತೀವ್ರ ತನಿಖೆಯ ಪರಿಣಾಮವಾಗಿ ಪ್ರಶಾಂತ್ ಅಜರ್ ಬೈಜಾನ್ನಲ್ಲಿ ಇರುವುದು ಖಚಿತವಾಗಿದೆ. ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪ್ರಶಾಂತ್ನನ್ನು ವಶಕ್ಕೆ ಪಡೆದುಕೊಂಡಿದ್ದು, ಆತನ ಪಾಸ್ಪೋರ್ಟ್ ಅನ್ನು ಸಹ ಜಪ್ತಿ ಮಾಡಿದ್ದಾರೆ. ಈ ಕುರಿತು ಎಸ್ಐಟಿ, ಇಂಟರ್ಪೋಲ್ ಮೂಲಕ ಮಾಹಿತಿ ಪಡೆದಿದೆ.
ಆರೋಪಿ ಪ್ರಶಾಂತ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಮೂಲಕ ಬಂಧನ ವಾರಂಟ್ಗೆ ಸಿದ್ಧತೆಗಳು ನಡೆಯುತ್ತಿವೆ. ಪ್ರಶಾಂತ್ ತನ್ನ ಕುಟುಂಬಸ್ಥರು ಮತ್ತು ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇಡೀ ಜಾಲದ ಮೂಲವನ್ನು ಪತ್ತೆಹಚ್ಚಲು ಎಸ್ಐಟಿ ಶ್ರಮಿಸುತ್ತಿದೆ. ಪ್ರಶಾಂತ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಈ ಪ್ರಕರಣದ ತನಿಖೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
