‘ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ’: ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ

Edited By:

Updated on: Aug 22, 2026 | 5:52 PM

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹಣ ಕೊಟ್ಟರೆ ಗಾಂಜಾ, ಮೊಬೈಲ್, ಐಷಾರಾಮಿ ಜೀವನ ಮತ್ತು ವೇಶ್ಯಾವಾಟಿಕೆಯಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂದು ಕೈದಿ ಸಾಯಿಕುಮಾರ್ ಸ್ಫೋಟಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಆರೋಪಗಳಿಗೆ ತನ್ನ ಬಳಿ ಪುರಾವೆಗಳಿವೆ ಎಂದು ಹೇಳಿರುವ ಸಾಯಿಕುಮಾರ್, ಜೈಲು ಅಧಿಕಾರಿಗಳ ನೇರ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ಆ.22: ಜಿಲ್ಲೆಯ ಹಿಂಡಲಗಾ ಜೈಲು ಮತ್ತೊಮ್ಮೆ ಅಕ್ರಮ ಚಟುವಟಿಕೆಗಳ ಆರೋಪದೊಂದಿಗೆ ಸುದ್ದಿಯಲ್ಲಿದೆ. ಕುಣಿಗಲ್ ಮೂಲದ, 20ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಕೈದಿ ಸುರೇಶ್ ಅಲಿಯಾಸ್ ಸಾಯಿಕುಮಾರ್ ಜೈಲಿನ ಒಳಗಿನ ರಹಸ್ಯಗಳನ್ನು ವಿಡಿಯೋ ಹೇಳಿಕೆ ಮೂಲಕ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆ ಸದ್ಯ ಬಂಧಿಖಾನೆ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಸಾಯಿಕುಮಾರ್‌ರ ಪ್ರಕಾರ, ಹಿಂಡಲಗಾ ಜೈಲಿನಲ್ಲಿ ಹಣ ಕೊಟ್ಟರೆ ಕೈದಿಗಳು ಐಷಾರಾಮಿ ಜೀವನ ನಡೆಸಲು ಗಾಂಜಾ, ಮೊಬೈಲ್, ಟಿವಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು. ಅತ್ಯಂತ ಗಂಭೀರ ಆರೋಪವೆಂದರೆ, ಜೈಲಿನ ಆವರಣದಲ್ಲಿ ವೇಶ್ಯಾವಾಟಿಕೆ ಕೂಡ ನಡೆಯುತ್ತದೆ ಎಂದು ಸಾಯಿಕುಮಾರ್ ಹೇಳಿದ್ದಾರೆ. ಈ ಅಕ್ರಮಗಳಿಗೆ ಜೈಲು ಅಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆತ ಆರೋಪಿಸಿದ್ದಾರೆ. ತಪಾಸಣೆಯ ಹೊರತಾಗಿಯೂ ಮೊಬೈಲ್ ಇತ್ಯಾದಿ ವಸ್ತುಗಳು ಹೇಗೆ ಜೈಲು ಪ್ರವೇಶಿಸುತ್ತವೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ತನ್ನ ಬಳಿ ಪುರಾವೆಗಳಿದ್ದು, ಮೇಲಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಸಾಯಿಕುಮಾರ್ ತಿಳಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತ ದೂರಿದ್ದಾರೆ. ಈತ ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹೇಳಿಕೆ ನೀಡಿದ್ದು, ಬಳಿಕ ಗುಂಡಾ ಕಾಯ್ದೆಯಡಿ ಪುನಃ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 22, 2026 05:51 PM
Loading...
Unable to load recommendations.
Follow Us