ಸಿದ್ದರಾಮಯ್ಯ ಮತ್ತು ಶಿವಕುಮಾರ್​ರನ್ನು ಎಐಸಿಸಿ ದೆಹಲಿಗೆ ಯಾಕೆ ಬರಹೇಳಿದೆ ಗೊತ್ತಾ? ಪರಮೇಶ್ವರ್ ಹೇಳುತ್ತಾರೆ ಕೇಳಿ

ಅರುಣ್​ ಕುಮಾರ್​ ಬೆಳ್ಳಿ

Updated on: Jan 01, 2024 | 1:00 PM

ಗೃಹ ಸಚಿವ ಪರಮೇಶ್ವರ್ ಹೇಳುವ ಪ್ರಕಾರ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯ ಜ್ವರ ಇನ್ನೂ ಏರಿಲ್ಲ ಅಥವಾ ಶುರುವಾಗಿಲ್ಲ. ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿಯುಳಿದಿರುವಾಗ ಇಲ್ಲವೇ ಚುನಾವಣಾ ಆಯೋಗ ಎಲೆಕ್ಷನ್ ಸಂಬಂಧಿಸಿದ ಅಧಿಸೂಚನೆ ಜಾರಿ ಮಾಡಿದ ಬಳಿಕ ಚುನಾವಣಾ ಕಾವು ಏರತೊಡಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು  4ನೇ ತಾರೀಖು ದೆಹಲಿಗೆ ಬರಹೇಳಿರುವುದು ಯಾಕೆ ಅಂತ ರಾಜ್ಯ ಗೃಹ ಖಾತೆ ಸಚಿವ ಜಿ ಪರಮೇಶ್ವರ (G Parameshwar) ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಹತ್ವಪೂರ್ಣ ವಿಷಯಗಳನ್ನು ಚರ್ಚಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಕರೆಸಲಾಗಿದೆ ಎಂದು ಪರಮೇಶ್ವರ ಹೇಳಿದರು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ; ಚುನಾವಣಾ ಹತ್ತಿರ ಬಂದಾಗ, ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ಪಡೆಯಲು ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ, ಅಲ್ಲಿನ ಮುಖ್ಯಮಂತ್ರಿಯನ್ನು ಎಐಸಿಸಿ ನಡೆಸುವ ಅಧಿಕೃತ ಸಭೆಗೆ ಕರೆಸಲಾಗುತ್ತದೆ, ಹಿಂದೆ ತಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಎರಡು ಬಾರಿ ಇಂಥ ಸಭೆಗೆ ಕರೆಸಲಾಗಿತ್ತು ಎಂದು ಪರಮೇಶ್ವರ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us