ವಿದ್ಯುತ್ ಆಘಾತದಿಂದ ಸಾಯುತ್ತಿದ್ದ ಲೈನ್ಮನ್ಗೆ ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ
ಹೈದರಾಬಾದ್ ಪೊಲೀಸ್ ಕಾನ್ಸ್ಟೆಬಲ್ ಬಿ. ಸುರೇಶ್ ಅವರು ವಿದ್ಯುತ್ ಆಘಾತಕ್ಕೊಳಗಾಗಿ ಪ್ರಜ್ಞಾಹೀನನಾಗಿದ್ದ ಕಾರ್ಮಿಕನಿಗೆ ತಕ್ಷಣವೇ ಸಿಪಿಆರ್ (CPR) ನೀಡಿ ಜೀವ ಉಳಿಸಿದ್ದಾರೆ. ಕರ್ತವ್ಯ ನಿರತರಾಗಿದ್ದ ಸುರೇಶ್, ಕಾರ್ಮಿಕನ ಉಸಿರಾಟ ನಿಂತಿದ್ದನ್ನು ಗಮನಿಸಿ ಸಮಯ ವ್ಯರ್ಥ ಮಾಡದೆ ಪ್ರಥಮ ಚಿಕಿತ್ಸೆ ನೀಡಿದರು. ವೈದ್ಯರ ಪ್ರಕಾರ, ಗೋಲ್ಡನ್ ಅವರ್ನಲ್ಲಿ ನೀಡಿದ ಈ ಸಿಪಿಆರ್ ಆತನ ಪ್ರಾಣ ಉಳಿಸಲು ನಿರ್ಣಾಯಕವಾಯಿತು. ಪೊಲೀಸರ ಈ ಮಾನವೀಯ ಕಾರ್ಯ ದೇಶಾದ್ಯಂತ ಮೆಚ್ಚುಗೆ ಗಳಿಸಿದೆ.
ಹೈದರಾಬಾದ್, ಮೇ.29: ಸಾರ್ವಜನಿಕರ ರಕ್ಷಣೆ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ದೇವದೂತರಂತೆ ಬಂದು ಜೀವ ಉಳಿಸುವುದು ಕೂಡ ಹೌದು ಎಂಬುದನ್ನು ಹೈದರಾಬಾದ್ ನಗರ ಪೊಲೀಸ್ ಸಿಬ್ಬಂದಿಯೊಬ್ಬರು ಸಾಬೀತುಪಡಿಸಿದ್ದಾರೆ. ವಿದ್ಯುತ್ ಲೈನ್ ದುರಸ್ತಿ ಮಾಡುವಾಗ ಭೀಕರ ವಿದ್ಯುತ್ ಆಘಾತಕ್ಕೆ ಒಳಗಾಗಿ ಉಸಿರಾಟ ನಿಲ್ಲಿಸಿದ್ದ ಗುತ್ತಿಗೆ ಕಾರ್ಮಿಕರೊಬ್ಬರಿಗೆ ಟಪ್ಪಾಚಬುತ್ರ (Tappachabutra) ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಬಿ. ಸುರೇಶ್ ಅವರು ತಕ್ಷಣವೇ ಸಿಪಿಆರ್ (CPR) ಪ್ರಥಮ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕಾರ್ವಾನ್ನ ಕುಮ್ಮರವಾಡಿ ಹನುಮಾನ್ ದೇವಸ್ಥಾನದ ಬಳಿ TGPDCL (ತೆಲಂಗಾಣ ವಿದ್ಯುತ್ ಸಂಸ್ಥೆ) ಗುತ್ತಿಗೆ ಕಾರ್ಮಿಕರೊಬ್ಬರು ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯ ಮಾಡುತ್ತಿರುವಾಗ ಶಾಕ್ ತಗುಲಿದೆ. ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಮ್ಮ ಬಿಎಸ್-1 (BC-I) ಗಸ್ತು ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಬಿ. ಸುರೇಶ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರ್ಮಿಕನ ನಾಡಿಮಿಡಿತ ಹಾಗೂ ಉಸಿರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದನ್ನು ಗಮನಿಸಿದ್ದಾರೆ. ಒಂದು ಕ್ಷಣವೂ ವ್ಯರ್ಥ ಮಾಡದ ಕಾನ್ಸ್ಟೆಬಲ್ ಸುರೇಶ್ ಸ್ಥಳದಲ್ಲೇ ಕಾರ್ಮಿಕನ ಎದೆಯನ್ನು ಒತ್ತಿ ಕೃತಕ ಉಸಿರಾಟ (CPR – Cardiopulmonary Resuscitation) ನೀಡಲು ಆರಂಭಿಸಿದರು. ಸತತ ಪ್ರಯತ್ನದ ಫಲವಾಗಿ ಕಾರ್ಮಿಕನ ನಾಡಿಮಿಡಿತ ಮತ್ತು ಉಸಿರಾಟವು ಮರಳಿ ಬಂದಿದೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. “ಕಾರ್ಮಿಕನನ್ನು ಆಸ್ಪತ್ರೆಗೆ ತರುವ ಮುನ್ನ ಆತನಿಗೆ ಸಿಕ್ಕ ಈ ಪ್ರಥಮ ಚಿಕಿತ್ಸೆ ‘ಗೋಲ್ಡನ್ ಅವರ್’ ನಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ. ಪೊಲೀಸರು ಸರಿಯಾದ ಸಮಯಕ್ಕೆ ಸಿಪಿಆರ್ ನೀಡದಿದ್ದರೆ ಆತನ ಜೀವ ಉಳಿಸುವುದು ಅಸಾಧ್ಯವಾಗುತ್ತಿತ್ತು” ಎಂದು ವೈದ್ಯರು ತಿಳಿಸಿದ್ದಾರೆ. ಹೈದರಾಬಾದ್ ಪೊಲೀಸರ ಈ ಮಾನವೀಯ ನಡೆ ಹಾಗೂ ಸಾರ್ವಜನಿಕ ಸುರಕ್ಷತೆಯ ಬದ್ಧತೆಗೆ ದೇಶಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ