ಶಿವಮೊಗ್ಗ: ರಾಜ್ಯ ಬಿಜೆಪಿ ಘಟಕದಲ್ಲಿ ಒಡಕುಂಟಾಗಿರುವುದು ಹಲವು ಆತಂಕಗಳಿಗೆ ಕಾರಣವಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಕೆಲ ಬಿಜೆಪಿ ಶಾಸಕರು ಮುಡಾ ಹಗರಣದ ವಿರುದ್ಧ ಪಕ್ಷದ ನಾಯಕರು ಬೆಂಗಳೂರು-ಮೈಸೂರು ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿಲ್ಲ. ಯತ್ನಾಳ್ ಜೊತೆಗಿರುವ 22 ಶಾಸಕರು ವಾಲ್ಮೀಕಿ ಹಗರಣದ ವಿರುದ್ಧ ಪಾದಯಾತ್ರೆ ನಡೆಸಲು ನಿಶ್ಚಯಿಸಿಕೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಪಕ್ಷದಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳಿಗೆ ಎಂದಿನಂತೆ ಬಿಎಸ್ ಯಡಿಯೂರಪ್ಪ ಕುಟುಂಬವನ್ನು ದೂಷಿಸಿದರು. ಅಧಿಕಾರವನ್ನೆಲ್ಲ ಒಂದೇ ಕುಟುಂಬಕ್ಕೆ ನೀಡಿದರೆ ಹೀಗೆಯೇ ಆಗೋದು, ತಮಗೆ ಬೇಕಾದವರಿಗೆ ಸ್ಥಾನಮಾನ ನೀಡಿರುವುರಿಂದಲೇ ಪಕ್ಷಕ್ಕೆ ಇಂಥ ದುಸ್ಥಿತಿ ಬಂದಿದೆ ಎಂದು ಈಶ್ವರಪ್ಪ ಹೇಳಿದರು. 22 ಭಿನ್ನಮತೀಯ ಶಾಸಕರು ನಡೆಸಬೇಕೆಂದಿರುವ ಪಾದಯಾತ್ರೆಯನ್ನು ತಡೆಯಲೇಬೇಕು, ಈ ಪಾದಯಾತ್ರೆಯ ಬಗ್ಗೆ ಕೇಂದ್ರದ ನಾಯಕರೂ ಕಿವಿಗೆ ಹಾಕಿಕೊಳ್ಳದೆ ಹೋದರೆ ರಾಜ್ಯದಲ್ಲಿ ಪಕ್ಷಕ್ಕೆ ದುರ್ದೆಶೆ ಶುರುವಾಗಿದೆ ಅಂತಲೇ ಅರ್ಥ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನ ಮಾತ್ರ ಗಳಿಸಿದ್ದ ಪಕ್ಷ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆಷ್ಟು ಸ್ಥಾನಗಳಿಗೆ ಕುಸಿಯಲಿದೆಯೋ ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಜೈಲಿಗೆ ಹೋಗೋದು ಶತಸಿದ್ಧ, ಕಾಂಗ್ರೆಸ್ ಸರ್ಕಾರ ಇಷ್ಟರಲ್ಲೇ ಪತನಗೊಳ್ಳಲಿದೆ: ಕೆಎಸ್ ಈಶ್ವರಪ್ಪ